ಕುಕ್ಕೆ, ಕುಡುಪು, ಘಾಟಿ ಸುಬ್ರಮಣ್ಯದಲ್ಲಿ ಸಂಭ್ರಮದ ಚಂಪಾ ಷಷ್ಠಿ
ಬೆಂಗಳೂರು, ಡಿ 18: ನಾಡಿನ ಮೂರು ಪ್ರಮುಖ ನಾಗಾರಾಧನೆ/ ಸುಬ್ರಮಣ್ಯ ದೇವಾಲಯಗಳಾದ ಕುಕ್ಕೆ ಸುಬ್ರಮಣ್ಯ, ಕುಡುಪು ಅನಂತ ಪದ್ಮನಾಭ ಮತ್ತು ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಗುರುವಾರ (ಡಿ 17) ಸಂಭ್ರಮದ ಚಂಪಾ ಷಷ್ಠಿ ಉತ್ಸವಕ್ಕೆ ತೆರೆಬಿದ್ದಿದೆ.
ಕುಕ್ಕೆ ದೇವಾಲಯ ಷಷ್ಠಿ ಪ್ರಯುಕ್ತ ಭಕ್ತಾದಿಗಳಿಂದ ತುಂಬಿ ತುಳುಕುತಿತ್ತು. ಗುರುವಾರ ಬೆಳೆಗ್ಗೆ 6.55ರ ಧನುರ್ ಲಗ್ನದಲ್ಲಿ ನಡೆದ ಬ್ರಹ್ಮರಥೋತ್ಸವ ಕಾರ್ಯಕ್ರಮ ಭಕ್ತಿ ಸಡಗರದಿಂದ ನೆರವೇರಿತು. (ಕುಕ್ಕೆ ಸುಪ್ರಭಾತ ವಿವಾದ)
(ಚಿತ್ರಕೃಪೆ: ಶಂಕರಾನಂದ ಭಟ್)
ಮೊದಲ ಬಾರಿಗೆ ರಥ ಎಳೆಯಲು ವಿಷೇಷ ಪಾಸ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಬ್ರಹ್ಮ ರಥೋತ್ಸವ ಸೇವೆ ನೀಡಿದವರಿಗೆ ಮತ್ತು ಸ್ಥಳೀಯರಿಗೆ ಪಾಸ್ ವ್ಯವಸ್ಥೆ ಮಾಡಿದ್ದರೂ ನೂಕುನುಗ್ಗಲು ಉಂಟಾಗಿ ಸ್ವಲ್ಪ ಸಮಯ ಗೊಂದಲ ಉಂಟಾಗಿತ್ತು.
ಮಧ್ಯಾಹ್ನ ನಡೆದ ಎಡೆಸ್ನಾನ ಉರುಳು ಸೇವೆಯಲ್ಲಿ 448 ಮಂದಿ ಭಕ್ತರು ಪಾಲ್ಗೊಂಡಿದ್ದರು. ಎಡೆಸ್ನಾನ ಸಂದರ್ಭದಲ್ಲಿ ವಿಶೇಷ ಭದ್ರತೆ ಒದಗಿಸಲಾಗಿತ್ತು.
ಘಾಟಿ ಸುಬ್ರಮಣ್ಯ: ಬೆಂಗಳೂರು ಹೊರ ವಲಯದ, ದೊಡ್ಡಬಳ್ಳಾಪುರ ಸಮೀಪದ ಘಾಟಿ ಸುಬ್ರಮಣ್ಯ ದೇವಾಲಯದಲ್ಲೂ ಚಂಪಾ ಷಷ್ಠಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ದೇವರ ಪಲ್ಲಕಿ ಮತ್ತು ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಬೆಂಗಳೂರಿನಿಂದ ದೇವಾಲಯಕ್ಕೆ ಕೆಎಸ್ಆರ್ಟಿಸಿ ವಿಶೇಷ ಬಸ್ ವ್ಯವಸ್ಥೆ ಒದಗಿಸಿತ್ತು.
ಕಡುಪು ದೇವಾಲಯ: ಮಂಗಳೂರು ನಗರದ ಹೊರವಲಯದ ಮಂಗಳೂರು- ಮೂಡಬಿದ್ರೆ ರಾಜ್ಯ ಹೆದ್ದಾರಿಯಲ್ಲಿರುವ ಪುರಾಣ ಪ್ರಸಿದ್ದ ಕುಡುಪು ಅನಂತಪದ್ಮನಾಭ ದೇವಾಲಯದಲ್ಲಿ ಚಂಪಾ ಷಷ್ಠಿ ಭಕ್ತಿ, ಸಡಗರದಿಂದ ಸಂಪನ್ನಗೊಂಡಿದೆ.
(ಚಿತ್ರಕೃಪೆ: ಶ್ರೀನಿಧಿ ತಂತ್ರಿ)
ಕದಲೀವನವೆಂಬ ಅರಣ್ಯದ ನಡುವೆ ಇರುವ ದೇವಸ್ಥಾನದಲ್ಲಿ ನಡೆದ ಷಷ್ಠಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಜಿಲ್ಲೆಯ ಮೂಲೆಮೂಲೆಯಿಂದ ಬಂದ ಸಾವಿರಾರು ಭಕ್ತರು ಅನಂತ ಪದ್ಮನಾಭನ ದರ್ಶನ ಪಡೆದರು. ಷಷ್ಠಿ ಪ್ರಯುಕ್ತ ಮತ್ಸ್ಯಾವತಾರ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.