Breaking; ಯಶವಂತಪುರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ ಕನ್ನಡ ನಟಿ
ಬೆಂಗಳೂರು, ನವೆಂಬರ್ 15; ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ. ಕನ್ನಡ ನಟಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾರೆ.
ಭಾವನಾ ರಾಮಣ್ಣ ಕೆಪಿಸಿಸಿ ಕಚೇರಿಯಲ್ಲಿ ಯಶವಂತಪುರ ಕ್ಷೇತ್ರದ ಟಿಕೆಟ್ಗಾಗಿ ಅರ್ಜಿ ಸಲ್ಲಿಕೆ ಮಾಡಿದರು. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಎಸ್. ಟಿ. ಸೋಮಶೇಖರ್. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಹಕಾರ ಸಚಿವರು.
2018ರ ಚುನಾವಣೆಯಲ್ಲಿ ಯಶವಂತಪುರದಲ್ಲಿ ಎಸ್. ಟಿ. ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಕ್ಷೇತ್ರವನ್ನು ಕಾಂಗ್ರೆಸ್ಗೆ ಗೆದ್ದುಕೊಟ್ಟಿದ್ದರು. ಆದರೆ 2019ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಗೆದ್ದರು.
ನಟಿ ಭಾವನಾ ರಾಮಣ್ಣ 2023ರ ಚುನಾವಣೆಗೆ ನಾನೂ ಸಹ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದರು. ಭಾರತ್ ಜೋಡೋ ಯಾತ್ರೆ ಚಿತ್ರದುರ್ಗದಲ್ಲಿದ್ದಾಗ ಮಾತನಾಡಿದ್ದ ಅವರು, "ನಾನು ಈ ಬಾರಿ ಕಾಂಗ್ರೆಸ್ನಿಂದ ಟಿಕೆಟ್ ಕೇಳುತ್ತೇನೆ. ಜನರ ಸೇವೆಗಾಗಿ ಚುನಾವಣೆಗೆ ನಿಲ್ಲುತ್ತೇನೆ" ಎಂದು ತಿಳಿಸಿದ್ದರು.
ಟಿಕೆಟ್ಗಾಗಿ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿ ಭಾವನಾ ರಾಮಣ್ಣ, "ಯಶವಂತಪುರ ಕ್ಷೇತ್ರದ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದೇನೆ. ವರಿಷ್ಠರು ಟಿಕೆಟ್ ನೀಡುವ ವಿಶ್ವಾಸವಿದೆ. ಈ ಹಿಂದೆಯೂ ನಾನು ಕ್ಷೇತ್ರದ ಟಿಕೆಟ್ ಕೇಳಿದ್ದೆ" ಎಂದರು.

2018ರ ವಿಧಾನಸಭೆ ಚುನಾವಣೆಯಲ್ಲಿಯೂ ಭಾವನಾ ರಾಮಣ್ಣ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಕೈ ತಪ್ಪಿತ್ತು. ಆಗ ಚುನಾವಣೆಗೆ ಎರಡು ದಿನಗಳು ಇರುವಾಗ ಅವರು ಬಿಜೆಪಿ ಸೇರಿದ್ದರು.
ಬಳಿಕ ನಟಿ ಭಾವನಾ ರಾಮಣ್ಣ 2021ರಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸಮ್ಮುಖಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದರು. ಈ ಕುರಿತು ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.
'ಕಾಂಗ್ರೆಸ್ನ ಮಾಜಿ ಕಾರ್ಯಕರ್ತೆ, ಕನ್ನಡದ ನಟಿ ಭಾವನಾ ರಾಮಣ್ಣ ಅವರು ನನ್ನನ್ನು ಭೇಟಿಯಾದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸೇರಿ, ಪಕ್ಷಕ್ಕಾಗಿ ದುಡಿಯುವ ಸಂಕಲ್ಪವನ್ನು ಅವರು ಮಾಡಿದ್ದಾರೆ. ಪ್ರತಿಯೊಬ್ಬರ ಸೇರ್ಪಡೆಯೊಂದಿಗೆ ಕಾಂಗ್ರೆಸ್ ಪ್ರಾಬಲ್ಯ ಪಡೆಯಲಿದೆ ಎಂದು ನಾನು ನಿಶ್ಚಿತವಾಗಿ ಭಾವಿಸಿದ್ದೇನೆ, ಅವರಿಗೆ ಶುಭಾಶಯಗಳು' ಎಂದು ತಿಳಿಸಿದ್ದರು.












Click it and Unblock the Notifications