ಮಹಿಳೆ ಬಗ್ಗೆ ಹಗುರ ಮಾತಾಡಿದ ಪರಂ, ಅಬುಗೆ ನೋಟೀಸ್
ನವದೆಹಲಿ, ಜನವರಿ 03 : ಭಾರೀ ಸಂಖ್ಯೆಯಲ್ಲಿ ಯುವಕ ಯುವತಿಯರು ಒಂದೆಡೆ ಸೇರಿ ಹೊಸವರ್ಷಾಚರಣೆಯಲ್ಲಿ ತೊಡಗಿರುವಾಗ ಲೈಂಗಿಕ ದೌರ್ಜನ್ಯಗಳಾಗುವುದು ಸಹಜ ಎಂದು ಹೇಳಿರುವ ಕರ್ನಾಟಕದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷ ನೋಟೀಸ್ ಜಾರಿ ಮಾಡಿದ್ದಾರೆ.
ಡಾ. ಪರಮೇಶ್ವರ್ ಅವರಿಗೆ ಮಾತ್ರವಲ್ಲ, ಇದೇ ಘಟನೆಗೆ ಸಂಬಂಧಿಸಿದಂತೆ ಅಸಭ್ಯ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರಿಗೆ ಕೂಡ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಅವರು ಸಮನ್ಸ್ ಜಾರಿ ಮಾಡಿದ್ದಾರೆ.
ಡಿಸೆಂಬರ್ 31ರಂದು ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಜನರು ಹೊಸ ವರ್ಷದ ಸಂಭ್ರಮದಲ್ಲಿ ತೊಡಗಿದ್ದಾಗ ಕೆಲ ಕಿಡಿಗೇಡಿಗಳು ಯುವತಿಯ ಮೈಮೇಲೆ ಬಿದ್ದು ಲೈಂಗಿಕ ದೌರ್ಜನ್ಯವೆಸಗಿದ್ದರು. ಒಂದೂವರೆ ಸಾವಿರ ಪೊಲೀಸರ ರಕ್ಷಣೆ ಇದ್ದರೂ ಯುವತಿಯರನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ.[ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ : ತೀವ್ರ ಟೀಕೆಗೆ ಗುರಿಯಾದ ಪರಮೇಶ್ವರ ಹೇಳಿಕೆ]
ಈ ಘಟನೆಗೆ ಪ್ರತಿಕ್ರಿಯಿಸಿದ್ದ ಪರಮೇಶ್ವರ್ ಅವರು, ಇಂಥ ಬೃಹತ್ ಪ್ರಮಾಣದ ಸಮಾವೇಶ ಜರುಗಿದಾಗ ಲೈಂಗಿಕ ಹಲ್ಲೆಗಳಾಗುವುದು ಸಹಜ ಎಂದು ಹಗುರವಾಗಿ ಮಾತನಾಡಿದ್ದರು. ಅಲ್ಲದೆ, ಯುವತಿಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ಕೂಡ ಇಂಥ ಘಟನೆಗಳಿಗೆ ಕಾರಣ ಎಂದು ಹೇಳಿದ್ದರು.
ಈ ಮಾತನ್ನು ತರಾಟೆಗೆ ತೆಗೆದುಕೊಂಡಿರುವ ಲಲಿತಾ ಕುಮಾರಮಂಗಲಂ ಅವರು, ಇಂಥ ಲಜ್ಜೆಗೇಡಿ ಹೇಳಿಕೆಗಳನ್ನು ಇಂಥ ಉನ್ನತ ಸ್ಥಾನದಲ್ಲಿರುವ ನಾಯಕರು ಹೇಳಿದರೆ, ದೇಶ ಎತ್ತ ಸಾಗಬೇಕು? ಎಂದಿದ್ದಾರೆ. ಅಬು ಅಜ್ಮಿ ಅವರು ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.[ಬೆಂಗಳೂರು ಮಾನ ಕಳೆದ ಪುಂಡರು, ಅಸಹಾಯಕ ಪೊಲೀಸರು]
ಅಬು ಅಜ್ಮಿ ಹೇಳಿರುವುದೇನೆಂದರೆ, ಇಂದಿನ ಆಧುನಿಕ ಜಮಾನಾದಲ್ಲಿ ಮಹಿಳೆಯರು ಬೆತ್ತಲಾಗಲು ಹಿಂಜರಿಯುವುದಿಲ್ಲ, ಹೆಚ್ಚು ಫ್ಯಾಷನೇಬಲ್ ಆಗಿರುತ್ತಾರೆ. ಗಂಡು ಹೆಣ್ಣು ಒಟ್ಟಿಗೆ ಹೋಗಬಾರದೆಂದರೆ ನಾವು ಹಳೆ ಕಾಲದವರು ಎಂದು ಜರಿಯುತ್ತಾರೆ. ಇವರೆಲ್ಲ ನಮ್ಮ ಭಾರತೀಯ ಸಂಸ್ಕೃತಿಗೆ ಕಳಂಕ ಎಂದಿದ್ದರು.
ಮಹಿಳೆಯರ ಪಾಲಿಗೆ ಸುರಕ್ಷಿತ ನಗರ ಎಂಬ ಹೆಸರು ಗಳಿಸಿದ್ದ ಬೆಂಗಳೂರು ಇಂದು ಕಿರಾತಕರ ನಗರಿಯಾಗಿ ಪರಿವರ್ತಿತವಾಗುತ್ತಿದೆ. ಇಂಥ ಹಲವಾರು ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ.
ಕರ್ನಾಟಕದಲ್ಲಿಯೂ ಮಹಿಳೆಯರ ರಕ್ಷಣೆಗಾಗಿ, ಅವರ ಕುಂದುಕೊರತೆಗಳನ್ನು ಕೇಳಲು ಒಂದು ಮಹಿಳಾ ಆಯೋಗವಿದೆ. ಅದಕ್ಕೆ ಮಂಜುಳಾ ಮಾನಸಾ ಅವರು ಅಧ್ಯಕ್ಷರಾಗಿದ್ದಾರೆ. ಆದರೆ, ಇಡೀ ರಾಷ್ಟ್ರದಾದ್ಯಂತ ಚರ್ಚೆಯಾಗುತ್ತಿರುವ ಬೆಂಗಳೂರಿನ ಘಟನೆಯ ಬಗ್ಗೆ ಅವರಿಂದ ಯಾವುದೇ ಹೇಳಿಕೆ ಬಂದಿಲ್ಲ.