ಎಂ.ಪಿ.ರವೀಂದ್ರ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ ಹೇಳುವುದೇನು?
Recommended Video
ದಾವಣಗೆರೆ, ನವೆಂಬರ್ 27 : ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಪಿ.ರವೀಂದ್ರ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅಭಿಮಾನಿಗಳು ನಿರ್ಧಾರ ವಾಪಸ್ ಪಡೆಯುವಂತೆ ಒತ್ತಡ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಮನವೊಲಿಸಲು ಪ್ರಯತ್ನ ಪಡುತ್ತಿದ್ದಾರೆ.
ಭಾನುವಾರ ಹರಪನಹಳ್ಳಿಯಲ್ಲಿ ಮಾತನಾಡಿದ್ದ ಎ.ಪಿ.ರವೀಂದ್ರ ಅವರು, 'ಈಗಿನ ಚುನಾವಣೆಯಲ್ಲಿ ದುಬಾರಿ ಖರ್ಚಿನ ಹಿನ್ನಲೆಯಲ್ಲಿ ರಾಜಕೀಯ ನಿವೃತ್ತಿ ಪಡೆದುಕೊಳ್ಳುವೆ. 2018ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ' ಎಂದು ಹೇಳಿದ್ದರು.
ರಾಜಕೀಯ ನಿವೃತ್ತಿ ಘೋಷಿಸಿದ ಹರಪನಹಳ್ಳಿ ಶಾಸಕ ಎಂ.ಪಿ.ರವೀಂದ್ರ
ರವೀಂದ್ರ ಅವರ ಈ ನಿರ್ಧಾರದ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ರವೀಂದ್ರ ಅವರ ಅಭಿಮಾನಿಗಳು, ಕುಟುಂಬದವರಿಗೆ ಈ ನಿರ್ಧಾರ ಆಘಾತ ತಂದಿದೆ. ತಾಯಿ ಎಂ.ಪಿ.ರುದ್ರಾಂಭ ಪ್ರಕಾಶ್, 'ನಿರ್ಧಾರ ಬದಲಿಸುವಂತೆ' ಸಲಹೆ ನೀಡಿದ್ದಾರೆ.
ಜೆಡಿಎಸ್ ಬಂಡಾಯ ಶಾಸಕರ ಕಾಂಗ್ರೆಸ್ ಸೇರ್ಪಡೆ ಮುಂದಕ್ಕೆ!
ಚುನಾವಣಾ ರಾಜಕೀಯದಿಂದ ದೂರವಾಗುವ ನಿರ್ಧಾರವನ್ನು ವಾಪಸ್ ಪಡೆಯುವಂತೆ ಪಕ್ಷದ ಕಾರ್ಯಕರ್ತರು ರವೀಂದ್ರ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ರವೀಂದ್ರ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಎಂ.ಪಿ.ರವೀಂದ್ರ 2013ರ ಚುನಾವಣೆಯಲ್ಲಿ 56,954 ಮತಗಳನ್ನು ಪಡೆದು ಹರಪನಹಳ್ಳಿ ಕ್ಷೇತ್ರದಲ್ಲಿ ಜಯಗಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಮೊದಲ ಚುನಾವಣೆಯಲ್ಲಿಯೇ ಮಾಜಿ ಸಚಿವ ಬಿಜೆಪಿಯ ಜಿ.ಕರುಣಾಕರ ರೆಡ್ಡಿ ಅವರನ್ನು ಸೋಲಿಸಿದ್ದರು.
ಎಂ.ಪಿ.ರವೀಂದ್ರ ಹೇಳಿದ್ದೇನು?
ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಎಂ.ಪಿ.ರವೀಂದ್ರ ಅವರು, 'ಕಲುಷಿತ ರಾಜಕೀಯ, ದುಬಾರಿ ಚುನಾವಣೆ ಹಾಗೂ ವೈಯಕ್ತಿಕ ಸಮಸ್ಯೆಯ ಕಾರಣದಿಂದ ಮನನೊಂದು ಚುನಾವಣಾ ರಾಜಕೀಯದಿಂದ ದೂರ ಸರಿಯುವ ನಿರ್ಧಾರ ಮಾಡಿದ್ದೇನೆ' ಎಂದು ಹೇಳಿದ್ದರು.
ಕಾಂಗ್ರೆಸ್ ಬಿಡುವುದಿಲ್ಲ ಎಂದು ಸ್ಪಷ್ಟನೆ
'ನಾನು ಫಲಾಯನವಾದಿಯಲ್ಲ. ಮುಂದಿನ ಸಲ ಟಿಕೆಟ್ ಸಿಗುವುದಿಲ್ಲ ಎಂಬ ಭಯವೂ ನನಗಿಲ್ಲ. ಚುನಾವಣೆಯಿಂದ ದೂರವಿದ್ದರೂ ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಕಾಂಗ್ರೆಸ್ನಲ್ಲಿಯೇ ಇರುತ್ತೇನೆ' ಎಂದು ರವೀಂದ್ರ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಮನವೊಲಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವೀಂದ್ರ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. 'ಈ ನಿರ್ಧಾರ ಸರಿಯಲ್ಲ, ದುಡುಕಿನ ತೀರ್ಮಾನ ಬೇಡ. ನನ್ನನ್ನು ಬಂದು ಭೇಟಿ ಮಾಡು' ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. 'ಬಂದು ಭೇಟಿಯಾಗುವೆ' ಎಂದು ರವೀಂದ್ರ ಹೇಳಿದ್ದಾರೆ.
ನಿರ್ಧಾರ ಬದಲಿಸುವಂತೆ ಸಲಹೆ
'ಮಗನ ನಿರ್ಧಾರ ನಮಗೂ ಆಘಾತ ತಂದಿದೆ. ಚುನಾವಣೆಯಿಂದ ಹಿಂದೆ ಸರಿಯಲು ನಾವು ಬಿಡುವುದಿಲ್ಲ. ನಿರ್ಧಾರ ಬದಲಿಸುವಂತೆ ಸಲಹೆ ನೀಡಿದ್ದೇನೆ' ಎಂದು ಮಾಧ್ಯಮಗಳಿಗೆ ರವೀಂದ್ರ ಅವರ ತಾಯಿ ಎಂ.ಪಿ.ರುದ್ರಾಂಭ ಪ್ರಕಾಶ್ ಹೇಳಿಕೆ ನೀಡಿದ್ದಾರೆ.
ಆತ್ಮಹತ್ಯೆ ಯತ್ನ
ಹರಪನಹಳ್ಳಿ ಪ್ರವಾಸಿ ಮಂದಿರದ ಬಳಿ ನೂರಾರು ಕಾರ್ಯಕರ್ತರು ಎಂ.ಪಿ.ರವೀಂದ್ರ ಅವರನ್ನು ತಡೆದು ನಿರ್ಧಾರ ಬದಲಿಸುವಂತೆ ಒತ್ತಾಯಿಸಿದರು. ಕೆಲವು ಕಾರ್ಯಕರ್ತರು ರವೀಂದ್ರ ಅವರ ಕಾರಿಗೆ ಅಡ್ಡ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು.
ಕರುಣಾಕರ ರೆಡ್ಡಿ ಸೋಲಿಸಿದ್ದರು
ಎಂ.ಪಿ.ರವೀಂದ್ರ ಅವರು 2013ರ ಚುನಾವಣೆಯಲ್ಲಿ 56,954 ಮತಗಳನ್ನು ಪಡೆದು ಜಯಗಳಿಸಿದ್ದರು. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿಯೇ ಬಿಜೆಪಿಯ ಜಿ.ಕರುಣಾಕರ ರೆಡ್ಡಿ, ಕೆಜೆಪಿಯಿಂದ ಸ್ಪರ್ಧಿಸಿದ್ದ ಎನ್.ಕೊಟ್ರೇಶ್ ಅವರನ್ನು ಸೋಲಿಸಿದ್ದರು.