ರಾಜಕೀಯ ನಿವೃತ್ತಿ ಘೋಷಿಸಿದ ಹರಪನಹಳ್ಳಿ ಶಾಸಕ ಎಂ.ಪಿ.ರವೀಂದ್ರ
ದಾವಣಗೆರೆ, ನವೆಂಬರ್ 26 : ಕೆಎಂಎಫ್ ನಿರ್ದೇಶಕ, ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಪಿ.ರವೀಂದ್ರ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅಭಿಮಾನಿಗಳು ಚುನಾವಣೆಗೆ ನಿಲ್ಲುವಂತೆ ಅವರನ್ನು ಒತ್ತಾಯಿಸುತ್ತಿದ್ದಾರೆ.
ಭಾನುವಾರ ಹರಪನಹಳ್ಳಿಯಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಪುತ್ರ ಎಂ.ಪಿ.ರವೀಂದ್ರ, 'ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ' ಎಂದು ಘೋಷಣೆ ಮಾಡಿದರು.

'ಈಗಿನ ಚುನಾವಣೆಯಲ್ಲಿನ ದುಬಾರಿ ಖರ್ಚಿನ ಹಿನ್ನಲೆಯಲ್ಲಿ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತಿದ್ದೇನೆ. ರಾಜಕೀಯದಿಂದ ದೂರವಿದ್ದರೂ ಕಾಂಗ್ರೆಸ್ ಪಕ್ಷದಲ್ಲಿರುತ್ತೇನೆ' ಎಂದು ಸ್ಪಷ್ಟಪಡಿಸಿದರು.
'ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ, ನನಗೆ ಪಕ್ಷ ಎಲ್ಲಾ ನೀಡಿದೆ. 2018ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಯಾರೇ ಹೇಳಿದರೂ ತಮ್ಮ ನಿರ್ಧಾರವನ್ನು ಬದಲಾವಣೆ ಮಾಡುವುದಿಲ್ಲ' ಎಂದು ರವೀಂದ್ರ ಹೇಳಿದರು.
2013ರ ಚುನಾವಣೆಯಲ್ಲಿ ಎಂ.ಪಿ.ರವೀಂದ್ರ ಅವರು 56,954 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಜಿ.ಕರುಣಾಕರ ರೆಡ್ಡಿ, ಕೆಜೆಪಿಯಿಂದ ಸ್ಪರ್ಧಿಸಿದ್ದ ಎನ್.ಕೊಟ್ರೇಶ್ ಅವರನ್ನು ಸೋಲಿಸಿದ್ದರು.
ಎಂ.ಪಿ.ರವೀಂದ್ರ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ನೂರಾರು ಅಭಿಮಾನಿಗಳು ಅವರ ನಿವಾಸಕ್ಕೆ ಆಗಮಿಸಿದ್ದಾರೆ. ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.
2017ರ ಮಾರ್ಚ್ನಲ್ಲಿ ಎಂ.ಪಿ.ರವೀಂದ್ರ ಅವರನ್ನು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು.












Click it and Unblock the Notifications