ನೇಹಾ ಹತ್ಯೆ ವಿಚಾರದಲ್ಲಿ ಎನ್ಕೌಂಟರ್ ಪಕ್ಕಾ.! ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ: ಎಂ.ಪಿ.ರೇಣುಕಾಚಾರ್ಯ
ದಾವಣಗೆರೆ, ಏಪ್ರಿಲ್, 22: ನೇಹಾ ಹಿರೇಮಠ್ ಹತ್ಯೆ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಅಲ್ಲದೆ ಇದೇ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕೆಂಡಕಾರುತ್ತಿದ್ದಾರೆ. ಇದೀಗ ಎಂ.ಪಿ.ರೇಣುಕಾರ್ಯ ಅವರು ಪ್ರತಿಕ್ರಿಯಿಸಿ, ವಿವಾದಾತ್ಮಕ ಹೇಳಿಯೊಂದನ್ನು ನೀಡಿದ್ದಾರೆ. ಹಾಗಾದರೆ ಆ ಹೇಳಿಕೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
"ಹಿಂದೂ ಯುವತಿಯರ ಕಗ್ಗೊಲೆ ಮುಂದುವರೆದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅಮಾನವೀಯವಾಗಿ ಹತ್ಯೆ ಮಾಡಲಾಗಿದೆ. ಲವ್ ಜಿಹಾದ್ಗಾಗಿ ನಡೆದಿರುವ ಹತ್ಯೆ ಇದು. ನಿಮ್ಮ ಕೈಯಲ್ಲಿ ಆಗದಿದ್ದರೆ ಮುಂಬರುವ ದಿನಗಳಲ್ಲಿ ನಾವು ಎನ್ಕೌಂಟರ್ ಮಾಡಬೇಕಾಗುತ್ತದೆ," ಎಂದು ಮಾಜಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ನೇಹಾ ಹತ್ಯೆ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು. 2013ರಲ್ಲಿ ನೀವು ಅಧಿಕಾರಕ್ಕೆ ಬಂದಾಗ ನೂರಾರು ಹಿಂದೂಗಳ ಹತ್ಯೆಯಾಯಿತು. ಲವ್ ಜಿಹಾದ್ ಹೆಸರಿನಲ್ಲಿ ನೇಹಾ ಹಿರೇಮಠ್ ಕೊಲೆಯಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಾರ್ವಜನಿಕರು, ಹಿಂದೂ ಸಂಘಟನೆಗಳು ರಾಜ್ಯದುದ್ದಕ್ಕೂ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ ಎಂದರು.
ಇದೊಂದು ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿದೆ ಎಂಬ ಉಡಾಫೆ ಹೇಳಿಕೆಯನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ. ಕೊಲೆ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಆರೋಪ ಮಾಡಿರುವುದು ಶುದ್ಧ ಸುಳ್ಳು. ಮೊಸರಿನಲ್ಲಿ ಕಲ್ಲು ಹುಡುಕುವುದಿಲ್ಲ ಎಂದು ಹೇಳಿದರು.
ಹಿಂದೂ ವಿರೋಧಿ ನೀತಿ ಕೈ ಬಿಡಿ, ಹಿಂದೂ ವಿದ್ಯಾರ್ಥಿನಿಯರನ್ನು ಹತ್ಯೆ ಮಾಡಿದವರನ್ನು ಗಲ್ಲಿಗೇರಿಸಿ. ಇಲ್ಲವೇ ಎನ್ಕೌಂಟರ್ ಮಾಡಿ. ಇದೇ ರೀತಿ ಮುಂದುವರೆದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ. ನಾವೇನು ಕೈಯಲ್ಲಿ ಬಳೆ ತೊಟ್ಟಿಲ್ಲ. ನಮಗೂ ರೋಷ ಬರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಗ್ದ ವಿದ್ಯಾರ್ಥಿನಿ ಕುಟುಂಬ ಕಣ್ಣೀರು ಹಾಕಿದೆ. ಪ್ರತಿಯೊಬ್ಬ ಹಿಂದೂಗಳು ಇದನ್ನು ಖಂಡಿಸಿದ್ದು, ಮುಂದೆಯೂ ಇಂಥ ಘಟನೆಗಳು ಮರುಕಳಿಸಿದರೆ ನಾವು ಗಾಂಧಿ ತತ್ವ ಹೊಂದಿಲ್ಲ. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಆಗಲೇಬೇಕು. ಜಿಹಾದಿಗಳ, ಕೊಲೆಗಾರರನ್ನು ಹತ್ತಿಕ್ಕಲು ಆಗದಿದ್ದರೆ ರಾಜೀನಾಮೆ ಕೊಡಿ ಎಂದು ಕಾಂಗ್ರಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರಿಗೆ ಅವರ ತಂದೆ-ತಾಯಿ ಒಳ್ಳೆಯ ಹೆಸರಿಟ್ಟಿದ್ದಾರೆ. ಹೆಸರಿನಲ್ಲಿ ರಾಮ ಇದೆ. ಆದರೂ ಸಿದ್ದರಾಮಯ್ಯ ಅವರು ಶ್ರೀರಾಮನ ವಿರೋಧಿ. ರಾಮನವಮಿ ಮಾಡಲಿಲ್ಲ, ಶ್ರೀರಾಮನ ಬಗ್ಗೆ ಭಕ್ತಿ ಇಲ್ಲ. ಇವರಿಗೆ ನಾಚಿಕೆಯಾಗಬೇಕು. ಇದು ವೈಯಕ್ತಿಕ ಘಟನೆ ಅಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಈ ಘಟನೆ ಖಂಡಿಸಬೇಕಿತ್ತು ಎಂದರು.
ಸಚಿವ ಸಂತೋಷ್ ಲಾಡ್ ಅವರು ಹೇಳಿರುವಂತೆ ಆರೋಪಿಯನ್ನು ಎನ್ಕೌಂಟರ್ ಮಾಡಬೇಕು. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರಿಗೆ ಸಂತೋಷ್ ಲಾಡ್ ಹೇಳಲಿ. ಇದೇ ರೀತಿ ಹಿಂದೂ ಧೋರಣೆ ಮುಂದುವರೆಸಿದರೆ, ಮುಂಬರುವ ದಿನಗಳಲ್ಲಿ ನಾವು ವಿಧಾನಸೌಧದ ಮೂರನೇ ಮಹಡಿಗೆ ಬಂದು ನಿಮ್ಮನ್ನು ಕೆಳಗೆ ಇಳಿಸುತ್ತೇವೆ ಎಂದು ಸವಾಲು ಹಾಕಿದರು. ಈ ವೇಳೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.












Click it and Unblock the Notifications