ಥರ್ಡ್ ಪಾರ್ಟಿ ವಿಮೆ ಕಡ್ಡಾಯ: ವಿಮೆ ಪತ್ರ ಮನೆಯಲ್ಲಿದ್ದರೂ ವಾಹನ ಜಪ್ತಿ
ಬೆಂಗಳೂರು, ಜನವರಿ 24 : ವಾಹನಸವಾರರಿಗೆ ಥರ್ಡ್ ಪಾರ್ಟಿ ವಿಮೆ ಕಡ್ಡಾಯ, ಇಲ್ಲದಿದ್ದರೆ ತಪಾಸಣೆ ವೇಳೆ ಸಂಚಾರ ಪೊಲೀಸರು ಅಥವಾ ಸಾರಿಗೆ ಇಲಾಖೆ ವಿಶೇಷ ತನಿಖಾ ತಂಡಗಳು ಜಪ್ತಿ ಮಾಡಲಿವೆ.
ಸುಪ್ರೀಂಕೋರ್ಟ್ ರಚಿಸಿರುವ ರಸ್ತೆ ಸುರಕ್ಷತಾ ಸಮಿತಿಯ ಶಿಫಾರಸಿನ ಮೇರೆಗೆ ಸಾರಿಗೆ ಇಲಾಖೆಯು ರಾಜ್ಯದಲ್ಲಿ ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವುದಕ್ಕೆ ಮುಂದಾಗಿದೆ.
ವಿಮಾ ಪಾಲಿಸಿ ಜತೆ ಆಧಾರ್ ಜೋಡಣೆ ಕೊನೆ ದಿನಾಂಕ ವಿಸ್ತರಣೆ
ರಾಜ್ಯದಲ್ಲಿರುವ ಪ್ರತಿ ವಾಹನಗಳಿಗೂ ಥರ್ಡ್ ಪಾರ್ಟಿ ವಿಮೆ ಇರಲೇ ಬೇಕು. ಒಂದು ವೇಳೆ ಇಲ್ಲದಿದ್ದರೆ ತಪಾಸಣೆ ವೇಳೆ ವಾಹನ ಜಪ್ತಿ ಮಾಡುವಂತೆ ಸುಪ್ರೀಂಕೋರ್ಟ್ ಸಮಿತಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಅಪಘಾತ ಸಂದರ್ಭದಲ್ಲಿ ಮೂರನೇ ವ್ಯಕ್ತಿ ಗಾಯಗೊಂಡರೆ ಅಥವಾ ಮೃತಪಟ್ಟರೆ ಆತನ ಕುಟುಂಬಕ್ಕೆ ಯಾವುದೇ ಪರಿಹಾರ ಬರುವುದಿಲ್ಲ. ಥರ್ಡ್ ಪಾರ್ಟಿ ವಿಮೆ ಇದ್ದಾಗ ಪರಿಹಾರ ಸಿಗುತ್ತದೆ. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಪರಿಣಾಮಕಾರಿ ಜಾರಿಗೆ ಸೂಚನೆ: ಥರ್ಡ್ ಪಾರ್ಟಿ ವಿಮೆಯನ್ನು ಅನುಷ್ಠಾನಗೊಳಿಸಲು ಸಮಿತಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ವಾಹನ ತಪಾಸಣೆ ವೇಳೆ ವಿಮೆ ಪ್ರತಿ ಮನೆಯಲ್ಲಿದೆ, ಮರೆತು ಬಂದಿದ್ದೇವೆ ಎಂಬ ಸಮಜಾಯಿಷಿ ಮಾನ್ಯ ಮಾಡುವುದಿಲ್ಲ. ಸ್ಥಳದಲ್ಲೇ ವಾಹನ ಜಪ್ತಿ ಮಾಡಲಾಗುವುದು. ಚಾಲಕ ಅಥವಾ ಮಾಲೀಕ ವಿಮೆ ಪ್ರತಿ ತಂದು ತೋರಿಸಿದ ಬಳಿಕವಷ್ಟೇ ವಾಹನ ಬಿಡುಗಡೆಗೊಳಿಸಲಾಗುವುದು ಎಂದು ದಯಾನಂದ್ ತಿಳಿಸಿದ್ದಾರೆ.