ಮೋದಿಯವರು ಜೆಡಿಎಸ್ಸನ್ನು ವಾಚಾಮಗೋಚರವಾಗಿ ತೆಗಳಿದ್ದೇಕೆ?
ಬೆಂಗಳೂರು, ಮೇ 03 : ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ್ದರಿಂದ, ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿಯ ಬಗ್ಗೆ ಹಿಡನ್ ಮಾತುಕತೆ ನಡೆಯುತ್ತಿವೆ, ಎಂಬ ಮಾತು ಕೇಳಿಬರುತ್ತಿರುವ ಸಂದರ್ಭದಲ್ಲಿಯೇ, ಮೋದಿಯವರು ಜೆಡಿಎಸ್ ಮೇಲೆ ತೀವ್ರ ಆಕ್ರಮಣ ನಡೆಸಿದ್ದಾರೆ.
ಇದು ಅಚ್ಚರಿಯ ಸಂಗತಿ. ಏಕೆಂದರೆ, ಚುನಾವಣೆಗೆ ಅಧಿಕೃತ ಚಾಲನೆ ದೊರೆತ ನಂತರ ನಡೆದ ಹಲವಾರು ಸಮಾವೇಶಗಳಲ್ಲಿ, ಜಾತ್ಯತೀತ ಜನತಾದಳ ಪಕ್ಷವನ್ನು ಅಪ್ಪಿತಪ್ಪಿಯೂ ಭಾರತೀಯ ಜನತಾ ಪಕ್ಷದ ನಾಯಕರು ಟೀಕಿಸಿರಲಿಲ್ಲ ಅಥವಾ ನಕಾರಾತ್ಮಕವಾಗಿ ಮಾತಾಡಿರಲಿಲ್ಲ.
In Pics:ಕಲಬುರಗಿಯಲ್ಲಿ ಮೋದಿ ಹವಾ, ಪ್ರಧಾನಿ ನೋಡಲು ನೂಕು ನುಗ್ಗಲು
ಆದರೆ, ಗುರುವಾರ ಸಂಜೆ ಕೆಂಗೇರಿಯಲ್ಲಿ (ಯಶವಂತಪುರ ವಿಧಾನಸಭೆ ಕ್ಷೇತ್ರ) ನಡೆದ ಬೃಹತ್ ಸಮಾವೇಶದಲ್ಲಿ, ಬಿಜೆಪಿ ನಾಯಕರು ಕೂಡ ಅಚ್ಚರಿಗೆ ಬೀಳುವಂತೆ, ನರೇಂದ್ರ ಮೋದಿಯವರು ಜೆಡಿಎಸ್ ಮೇಲೆ ತೀವ್ರ ಪ್ರಹಾರ ಮಾಡಿದ್ದಾರೆ. ಹೇಗಿದ್ದರೂ ಮೂರನೇ ಸ್ಥಾನ ಕೂಡ ಪಡೆಯಲು ಲಾಯಕ್ಕಿಲ್ಲದ ಜೆಡಿಎಸ್ಸಿಗೆ ಏಕೆ ಮತ ಹಾಕಿ ನಿಮ್ಮ ಮತ ಹಾಳು ಮಾಡಿಕೊಳ್ಳುತ್ತೀರಿ ಎಂದಿದ್ದಾರೆ.
ದೇವೇಗೌಡರ ಹೊಗಳಿ ಭವಿಷ್ಯದ ಮೈತ್ರಿಯ ಬಾಗಿಲು ತೆರೆದಿಟ್ಟರೆ ಮೋದಿ?
ಉಡುಪಿಯಲ್ಲಿ ಬುಧವಾರ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಮೋದಿಯವರು, ದೇವೇಗೌಡರಂಥ ಮುತ್ಸದ್ದಿ ರಾಜಕಾರಣಿ ನನ್ನ ಮನೆಗೆ ಬಂದರೆ ನಾನೇ ಸ್ವತಃ ಬರಮಾಡಿಕೊಳ್ಳುತ್ತೇನೆ, ನಾನೇ ಅವರ ಕಾರಿನ ಬಾಗಿಲನ್ನೂ ತೆರೆಯುತ್ತೇನೆ ಎಂದು ಜೆಡಿಎಸ್ ನ ರಾಷ್ಟ್ರಾಧ್ಯಕ್ಷರನ್ನು ವಾಚಾಮಗೋಚರವಾಗಿ ಹೊಗಳಿದ್ದರು.
ತೆರೆಯ ಮೇಲೆ ನಡೆಯುತ್ತಿರುವುದು ಬರೀ ನಾಟಕ
ಈ ಮಾತುಗಳು ನಾನಾ ಊಹಾಪೋಹಗಳಿಗೆ, ಹಲವಾರು ವ್ಯಾಖ್ಯಾನಗಳಿಗೆ ಆಹ್ವಾನ ನೀಡಿದ್ದವು. ಇದೇನಿದು, ಜೆಡಿಎಸ್ ಮತ್ತು ಬಿಜೆಪಿ ನಡುವೆ ಗುಪ್ತಗುಪ್ತವಾಗಿ ತೆರೆಯ ಹಿಂದೆ ಮೈತ್ರಿ ನಡೆದೇಹೋಗಿದೆ, ತೆರೆಯ ಮೇಲೆ ನಡೆಯುತ್ತಿರುವುದು ಬರೀ ನಾಟಕ ಎನ್ನುವಷ್ಟರ ಮಟ್ಟಿಗೆ ಚರ್ಚೆಗಳು ಆರಂಭವಾಗಿದ್ದವು. ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ, ಜೆಡಿಎಸ್ ಅಪ್ಪಿತಪ್ಪಿಯೂ ಕಾಂಗ್ರೆಸ್ ಜೊತೆ ಕೈಜೋಡಿಸಬಾರದು, ಆದರೆ ಬಿಜೆಪಿ ಓಕೆ ಎಂಬ ಮಟ್ಟಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮಾತುಕತೆ ನಡೆಸಿದ್ದರು.
ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ : ಅನಂತ್
ಇದರ ಹಿಂದೆಯೇ, ಪ್ರಕಟಣೆ ಹೊರಡಿಸಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅವರು, ಮೋದಿಯವರ ಹೇಳಿದ್ದರ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಬಾರದು ಎಂದು ಸಮಜಾಯಿಷಿ ನೀಡಿದ್ದರು. ಹಿರಿಯರಾದ ದೇವೇಗೌಡರನ್ನು ಗೌರವದಿಂದ ಕಾಣುವ ಮೋದಿಯವರು, ಗೌಡರನ್ನು ಹೊಗಳಿ ಶಿಷ್ಟಾಚಾರದ ಮಾತುಗಳನ್ನಾಡಿದಷ್ಟೇ ಹೊರತು, ಮೈತ್ರಿಯ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ನಂತರ ಗೌಡರು ಕೂಡ ಸ್ಪಷ್ಟನೆ ನೀಡಿ, ಮೈತ್ರಿಯ ಮಾತೇ ಇಲ್ಲ ಎಂದು ಟವೆಲ್ ಝಾಡಿಸಿ ಹೆಗಲಮೇಲೇರಿಸಿದ್ದರು.
ಗೌಡರನ್ನು ಮೋದಿ ಹೊಗಳಿದ್ದಕ್ಕೆ ವಿಶೇಷ ಅರ್ಥವಿಲ್ಲ: ಅನಂತ ಕುಮಾರ್
ಜೆಡಿಎಸ್ ಗೆ ಏಕೆ ಮತ ಹಾಕುತ್ತೀರಿ?
ಇದರ ಬೆನ್ನ ಹಿಂದೆಯೇ, ಶುಕ್ರವಾರ ಕೆಂಗೇರಿಯಲ್ಲಿ ನಡೆದ ಸಮಾವೇಶದಲ್ಲಿ ಚಿತ್ರಣವೇ ಬದಲಾದಂತೆ ಕಂಡುಬರುತ್ತಿದೆ. ಜೆಡಿಎಸ್ ಗೆ ಏಕೆ ಮತ ಹಾಕುತ್ತೀರಿ? ಫೆಬ್ರವರಿ 12ರಂದು ಶನಿವಾರ ಕಮಲದ ಗುರುತಿಗೆ ಗುಂಡಿ ಒತ್ತಿ, ಬಿಜೆಪಿಗೆ ಬಹುಮತ ನೀಡಿ, ಇಡೀ ಕರ್ನಾಟಕದ ಚಿತ್ರಣವನ್ನೇ ಬದಲಿಸುತ್ತೇವೆ ಎಂದು ಹೇಳಿ, ಜೆಡಿಎಸ್ ಜೊತೆ ಕೇಳಿಬರುತ್ತಿದ್ದ ಮೈತ್ರಿಯ ಗಾಳಿಸುದ್ದಿಗೆ ಗುಂಡುಪಿನ್ ಚುಚ್ಚಿದ್ದಾರೆ. ಈ ರೀತಿ ಹೇಳಿಕೆ ಹೊರಬರಲು ಜೆಡಿಎಸ್ ಇತರ ಪಕ್ಷಗಳೊಂದಿಗೆ ಮಾಡಿಕೊಂಡಿರುವ ಮೈತ್ರಿಯೇ ಕಾರಣವಾಯಿತೆ?
ದೇವೇಗೌಡರು
ಮನೆಗೆ
ಬಂದಾಗ
ಅವರ
ಕಾರಿನ
ಬಾಗಿಲು
ತೆಗೆಯುತ್ತೇನೆ:
ಮೋದಿ
ಓವೈಸಿ ಕೂಡ ಜೆಡಿಎಸ್ಸಿಗೆ ಬೆಂಬಲ
ಕರ್ನಾಟಕದಲ್ಲಿ ಜೆಡಿಎಸ್ ಸೋಲುವುದು ಗ್ಯಾರಂಟಿ. ಅವರು ಬೇರೆ ರಾಜ್ಯದ ಭಯೋತ್ಪಾದಕರಿಗೆ ಬೆಂಬಲ ನೀಡುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಮೋದಿ ತೀವ್ರವಾಗಿ ಜೆಡಿಎಸ್ ಮೈತ್ರಿಯನ್ನು ಟೀಕಿಸಿದ್ದಾರೆ. ಜೆಡಿಎಸ್ ಈಗಾಗಲೆ, ಬಿಜೆಪಿಯ ವಿರೋಧ ಪಕ್ಷವಾಗಿರುವ ಬಹುಜನ ಸಮಾಜವಾದಿ ಪಕ್ಷದೊಡನೆ ಮುಕ್ತವಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಅಲ್ಲದೆ, ಅಕ್ಬರುದ್ದಿನ್ ಓವೈಸಿ ಕೂಡ ಜೆಡಿಎಸ್ಸಿಗೆ ಬೆಂಬಲ ಸೂಚಿಸುವುದಾಗಿ ಹೇಳಿದೆ. ಈ ಬಗ್ಗೆ ಸೂಚನೆ ಬಂದಿರುವ ಹಿನ್ನೆಲೆಯಲ್ಲಿಯೇ ಮೋದಿಯವರು ಜೆಡಿಎಸ್ ಅನ್ನು ತೆಗಳಿ ದೂರವಿಡುವ ಮಾತನ್ನಾಡಿದ್ದಾರೆ.
ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ ಎಂದ ಮೋದಿ
ಈ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಕನಿಷ್ಠ ಮೂರನೇ ಸ್ಥಾನವನ್ನೂ ಪಡೆಯುವುದಿಲ್ಲ. ಅಂಥ ಪಕ್ಷಕ್ಕೆ ಮತ ನೀಡುವ ತಪ್ಪು ನಿರ್ಧಾರ ಮಾಡಬೇಡಿ ಎಂದು ಪಕ್ಷದ ನಿಲುವನ್ನು ಹೊರಹಾಕಿದ್ದಾರೆ. ಚುನಾವಣೆಗೂ ಮೊದಲೇ ಮೈತ್ರಿಯ ಸೂಚನೆಯನ್ನು ನೀಡಿದರೆ, ಮತದಾರರಲ್ಲಿ ತಪ್ಪು ಸಂದೇಶ ರವಾನಿಸಲಾಗುತ್ತದೆ ಎಂಬ ಅನಿಸಿಕೆಯೂ ಮೋದಿಯವರು ಜೆಡಿಎಸ್ ವಿರುದ್ಧ ಮಾತನಾಡುವಂತೆ ಮಾಡಿರಬಹುದು. ಆದರೆ, ಒಂದಂತೂ ನಿಜ, ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಪಡೆಯುವುದೇ ಬಿಜೆಪಿಯ ಏಕೈಕ ಗುರಿಯಾಗಲಿದೆ. ಕಳೆದ 2013ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸರಿಸಮವಾಗಿ 40 ಸೀಟುಗಳನ್ನು ಗೆದ್ದಿದ್ದವು.
ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ...
ಕಾಂಗ್ರೆಸ್ ಪಕ್ಷವಾಗಲಿ, ಬಿಜೆಪಿಯಾಗಲಿ ಅಥವಾ ಜೆಡಿಎಸ್ ಆಗಲಿ ಸ್ವಂತ ಬಲದ ಮೇಲೆ ಬಹುಮತ ಪಡೆದು ಸರಕಾರ ರಚಿಸುವ ವಿಶ್ವಾಸವನ್ನು ವ್ಯಕ್ತಪಡಿಸಿವೆ. ಈ ಮೂರು ಪಕ್ಷದ ನಾಯಕರು ತಾವೇ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡುವ ಕನಸು ಕಾಣುತ್ತಿದ್ದಾರೆ. ಆದರೆ, ಪರಿಸ್ಥಿತಿ ಹೇಗಿದೆಯೆಂದರೆ, ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯುವ ಬಗ್ಗೆ ಭಾರೀ ಅನುಮಾನಗಳಿವೆ. ಇದಕ್ಕೆ ಪೂರಕವಾಗಿ, ಕೆಲವನ್ನು ಹೊರತುಪಡಿಸಿದರೆ ಹರಿದುಬಂದಿರುವ ಹಲವಾರು ಚುನಾವಣಾಪೂರ್ವ ಸಮೀಕ್ಷೆಗಳು ಕೂಡ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತದೆ ಎಂದು ಭವಿಷ್ಯ ನುಡಿದಿವೆ. ಚುನಾವಣಾಪೂರ್ವ ಸಮೀಕ್ಷೆಗಳನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲವಾದರೂ, ತಳ್ಳಿ ಹಾಕುವಂತೆಯೂ ಇಲ್ಲ.
ಎಲ್ಲ ಊಹಾಪೋಹಗಳಿಗೆ ಮೇ 15ರಂದು ಉತ್ತರ
ಎಲ್ಲ ಪ್ರಶ್ನೆಗಳಿಗೆ, ಊಹಾಪೋಹಗಳಿಗೆ, ಸಂದೇಹಗಳಿಗೆ, ತೆರೆಯ ಹಿಂದೆ ನಡೆಯುತ್ತಿರುವ ಮಾತುಕತೆಗಳಿಗೆ, ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಎಗ್ಗುಸಿಗ್ಗಿಲ್ಲದ ಚರ್ಚೆಗಳಿಗೆ, ಮೇ 12ರಂದು ನಡೆಯುವ ಚುನಾವಣೆ ಮತ್ತು ಮೇ 15ರಂದು ಸಿಗಲಿರುವ ಫಲಿತಾಂಶ ಉತ್ತರ ನೀಡಲಿದೆ. ಸದ್ಯಕ್ಕೆ ಎಲ್ಲ ಪಕ್ಷಗಳು, ಒಬ್ಬರಿಗೊಬ್ಬರ ಮೇಲೊಬ್ಬರು ಕೆಸರೆರಚುತ್ತ, ದ್ವೇಷ ಕಾರಿಕೊಳ್ಳುತ್ತ, ಹಲವಾರು ನೆಗೆಟೀವ್ ತಂತ್ರಗಾರಿಕೆ ರೂಪಿಸುತ್ತ ಫೈನಲ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಂತಿಮ ತೀರ್ಪು ಕೊಡುವವನು ಮತದಾರನೆ. ಮೇ 18ರಂದೇ ಎಲ್ಲ ಚುನಾವಣಾ ಪ್ರಕ್ರಿಯೆಗಳು ಪೂರ್ಣವಾಗಬೇಕಿರುವುದರಿಂದ ಅಷ್ಟರೊಳಗೆ ಅಂತಿಮ ಚಿತ್ರಣ ದೊರೆಯಲಿದೆ.