ದೇವೇಗೌಡರ ಹೊಗಳಿ ಭವಿಷ್ಯದ ಮೈತ್ರಿಯ ಬಾಗಿಲು ತೆರೆದಿಟ್ಟರೆ ಮೋದಿ?
ಉಡುಪಿ, ಮೇ 1 : ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದ ನಂತರದ ಸನ್ನಿವೇಶಕ್ಕೆ ಮೂರೂ ಪ್ರಮುಖ ಪಕ್ಷಗಳ ನಾಯಕರು ವೇದಿಕೆ ಸಿದ್ಧಪಡಿಸುತ್ತಿದ್ದಾರಾ? ಇಲ್ಲಿನ ಎಂಜಿಎಂ ಕ್ರೀಡಾಂಗಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು ಗಮನಿಸಿದರೆ, ಅನುಮಾನವೇ ಇಲ್ಲದಂತೆ ಆ ಅಂಶ ರುಜುವಾತು ಆಗುತ್ತದೆ.
ಇನ್ನೂ ಲೆಕ್ಕಾಚಾರದ ಪ್ರಕಾರ ಹೇಳಬೇಕೆಂದರೆ, ಇದೇ ಮಾತುಗಳನ್ನು ನರೇಂದ್ರ ಮೋದಿ ಅವರು ಜೆಡಿಎಸ್ ನ ನೆಲೆ ಬಹಳ ಗಟ್ಟಿ ಆಗಿರುವ ಮೈಸೂರಿನಲ್ಲಾಗಲಿ ಅಥವಾ ಚಾಮರಾಜನಗರದಲ್ಲಾಗಲೀ ಆಡಲಿಲ್ಲ. ಬದಲಿಗೆ ಅವರು ಈ ಮಾತನ್ನು ಆಡಿದ್ದು ಉಡುಪಿಯಲ್ಲಿ. ಅಷ್ಟಕ್ಕೂ ನರೇಂದ್ರ ಮೋದಿ ಅವರು ಉರುಳಿಸಿದ ದಾಳದಲ್ಲಿ ಬಳಸಿದ ಮಾತುಗಳೇನು?
ದೇವೇಗೌಡರು ಮನೆಗೆ ಬಂದಾಗ ಅವರ ಕಾರಿನ ಬಾಗಿಲು ತೆಗೆಯುತ್ತೇನೆ: ಮೋದಿ
ಮೋದಿ ತಮ್ಮ ಭಾಷಣದಲ್ಲಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೆಹಲಿಗೆ ಬಂದಾಗಲೆಲ್ಲ ನಾನೇ ಅವರನ್ನು ಮಾತಾಡಿಸಿ, ಅವರ ಕಾರಿನ ತನಕ ಹೋಗಿ ಬೀಳ್ಕೊಡುತ್ತೇನೆ. ಇದು ನಮ್ಮ ಸಂಸ್ಕ್ರತಿ. ನಾವು ವಿರೋಧ ಪಕ್ಷದವರನ್ನು ಗೌರವಿಸುತ್ತೇವೆ ಎಂದು ಹೇಳಿದರು. ಇದೇ ವೇಳೆ, ರಾಹುಲ್ ಗಾಂಧಿ ಅಹಂಕಾರಿ. ದೇವಗೌಡರಿಗೆ ಗೌರವ ನೀಡುವುದನ್ನೇ ಮರೆತು, ದೇಶದ ಮಾಜಿ ಪ್ರಧಾನಿಗೆ ಅವಮಾನ ಮಾಡಿದ್ದಾರೆ. ಇದು ಅವರ ಸಂಸ್ಕೃತಿ ಎಂದು ಕಾಂಗ್ರೆಸ್ ನ ಜರಿಯುವುದನ್ನು ಮರೆಯಲಿಲ್ಲ.
ಚಿತ್ರಗಳಲ್ಲಿ ನೋಡಿ: ಕರ್ನಾಟಕದಲ್ಲಿ ಶುರುವಾಯ್ತು ಮೋದಿ ಮೋಡಿ
ದೇವೇಗೌಡರ ಹೊಗಳುವ ಮೂಲಕ ಪರೋಕ್ಷ ಸಂದೇಶ
ಉಡುಪಿಯಲ್ಲಿನ ನರೇಂದ್ರ ಮೋದಿ ಅವರ ಭಾಷಣದಲ್ಲಿ ಹೊಸತೇನೂ ಇರಲಿಲ್ಲ. ತಮ್ಮ ಎಂದಿನ ಮಾತು ಮತ್ತು ಕಾಂಗ್ರೆಸ್ ಅನ್ನು ಟೀಕಿಸುವ ಅದೇ ಹಳೆಯ ಶೈಲಿ. ಆದರೆ ಹೊಸತು ಎನಿಸಿದ್ದು ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳುವ ಮೂಲಕ ನೀಡಿದ ಪರೋಕ್ಷ ಸಂದೇಶದಲ್ಲಿ. ಮೋದಿ ಅವರು ದೇವೇಗೌಡರ ಗುಣಗಾನ ಮಾಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಗೌಡರನ್ನು ಮೋದಿ ಹೊಗಳಿದ್ದಕ್ಕೆ ವಿಶೇಷ ಅರ್ಥವಿಲ್ಲ: ಅನಂತ ಕುಮಾರ್
ಅತಂತ್ರ ವಿಧಾನಸಭೆ ಸುಳಿವು ಸಿಕ್ಕಿದೆಯಾ?
ಸ್ವತಃ ಮೋದಿ ಅವರಿಗೆ ಕರ್ನಾಟಕ ವಿಧಾನಸಭೆ ಅತಂತ್ರ ಆಗುವ ಸುಳಿವು ಸಿಕ್ಕಿದ್ದು, ಆ ಕಾರಣಕ್ಕೆ ದೇವೇಗೌಡರ ಪಕ್ಷದ ಜತೆಗೊಂದು ಆತ್ಮೀಯ ನಂಟಿರಲಿ ಎಂಬ ಕಾರಣಕ್ಕೆ ಇಂಥ ಮಾತನಾಡಿದರಾ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಇದೇ ಮೊದಲು ಅಂತಲ್ಲ. ಈ ಹಿಂದೆ ಕೂಡ ದೇವೇಗೌಡರ ವಿರುದ್ಧ ಚುಚ್ಚುವಂಥ ಮಾತನಾಡಿದವರಲ್ಲ ಮೋದಿ.
ಬಿಜೆಪಿ ಜತೆಗೆ ಹೋದರೆ ಮಗನೇ ಅಲ್ಲ
ಇಲ್ಲಿ ಇನ್ನೂ ಒಂದು ಅಂಶ ಗಮನಿಸಬೇಕು. ಇತ್ತೀಚೆಗಷ್ಟೇ ಸಿದ್ದರಾಮಯ್ಯನವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಧ್ಯೆ ಒಳ ಒಪ್ಪಂದ ಆಗಿದೆ ಎಂದು ಆರೋಪ ಮಾಡಿದ್ದರು. ಇದರಿಂದ ಹಿಂದುಳಿದ ವರ್ಗದ ಹಾಗೂ ಅಲ್ಪಸಂಖ್ಯಾತರ ಮತಗಳ ಬುಟ್ಟಿಗೆ ತೂತು ಬೀಳುತ್ತದೆ ಎಂಬುದನ್ನು ಅರಿತ ದೇವೇಗೌಡರು, ಆ ನಂತರ ಸಂದರ್ಶನವೊಂದರಲ್ಲಿ, ಒಂದು ವೇಳೆ ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರೆ ಅವರು ನನ್ನ ಮಗನೇ ಅಲ್ಲ. ಅವರಿಗೆ ಮನೆಯಿಂದಲೇ ಬಹಿಷ್ಕಾರ ಹಾಕುತ್ತೇನೆ ಎನ್ನುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಿದರು.
ಮೊದಮೊದಲಿಗೆ ಜೆಡಿಎಸ್ ವಿರುದ್ಧ ಕತ್ತಿ ಝಳಪಿಸಲಿಲ್ಲ
ಈ ಬಾರಿ ಚುನಾವಣೆ ಘೋಷಣೆಗೂ ಮುನ್ನ ಹಾಗೂ ಆದ ನಂತರ ಕೂಡ ಒಂದು ಹಂತದವರೆಗೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಯಾವ ನಾಯಕರೂ ಜೆಡಿಎಸ್ ವಿರುದ್ಧ ದೊಡ್ಡ ಮಟ್ಟದಲ್ಲಿ ಕತ್ತಿ ಝಳಪಿಸಲಿಲ್ಲ. ಆದರೆ ಕಾಂಗ್ರೆಸ್ ಗೆ ಈ ಸಲ ಸರಳ ಬಹುಮತ ಬರುತ್ತದೆ ಎಂಬ ಖಾತ್ರಿಯಾಯಿತೋ ಅಥವಾ ಜೆಡಿಎಸ್ ತಮ್ಮ ಜತೆಗೆ ಮೈತ್ರಿ ಮಾಡಿಕೊಳ್ಳುವ ಇರಾದೆಯಲ್ಲಿಲ್ಲ ಎಂಬ ಇಶಾರೆ ಸಿಕ್ಕಿತೋ ಆಗ ಜೆಡಿಎಸ್ ವಿರುದ್ಧ ಸ್ವತಃ ರಾಹುಲ್ ಗಾಂಧಿ ದಾಳಿ ಶುರು ಮಾಡಿದರು.
ಜೆಡಿಎಸ್ ತಂಟೆಗೆ ಹೋಗದ ರಾಜ್ಯ ಬಿಜೆಪಿ ನಾಯಕರು
ಗಮನಿಸಿ ನೋಡಿ, ಬಿಜೆಪಿಯ ಯಾವುದೇ ನಾಯಕರು ಕಾಂಗ್ರೆಸ್ ಬಗ್ಗೆ ಆರೋಪ ಮಾಡುತ್ತಾರೆ. ಸಿದ್ದರಾಮಯ್ಯ ಮತ್ತು ಕೆಲವೇ ಮುಖಂಡರ ಮೇಲೆ ದಾಳಿ ಮಾಡುತ್ತಿದ್ದಾರೆ ವಿನಾ ಜೆಡಿಎಸ್ ನ ತಂಟೆಗೆ ಹೋಗುತ್ತಿಲ್ಲ. ಇವೆಲ್ಲ ಗಮನಿಸುತ್ತಿರುವಾಗ ಉಡುಪಿಯಲ್ಲಿ ನರೇಂದ್ರ ಮೋದಿ ಅವರು ದೇವೇಗೌಡರನ್ನು ಹೊಗಳಿ ಅವಕಾಶದ ಬಾಗಿಲು ತೆರೆದಿದ್ದಾರೆ. ಜೆಡಿಎಸ್ ನಿಂದ ಯಾವ ಸನ್ನೆ ಸಿಗುತ್ತದೋ?