Cash: ಎರ್ಟಿಗಾ ಕಾರ್ನಲ್ಲಿ ಸಿಕ್ಕಿತು ಬರೋಬ್ಬರಿ ₹2.56 ಕೋಟಿ ಕಂತೆ ಕಂತೆ ಹಣ: ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ
ಗುಜರಾತ್: ದಾಹೋದ್ ಜಿಲ್ಲೆಯ ಲಿಮಖೇಡಾ ಭಾಗದಲ್ಲಿ ಪೊಲೀಸರು ನಡೆಸಿದ ಸರಣಿ ವಾಹನ ತಪಾಸಣೆ ವೇಳೆ ಬೃಹತ್ ಮೊತ್ತದ ಬೇನಾಮಿ ನಗದು ಪತ್ತೆಯಾಗಿದೆ. ಯಾವುದೇ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 2.56 ಕೋಟಿ ರೂಪಾಯಿಗೂ ಅಧಿಕ ನಗದನ್ನು ಲಿಮಖೇಡಾ ಪೊಲೀಸರು ಜಪ್ತಿ ಮಾಡಿದ್ದಾರೆ.
ಕಾರ್ಯಾಚರಣೆ ನಡೆದಿದ್ದು ಹೇಗೆ?
ಲಿಮಖೇಡಾದ ಧನ್ಪುರ್ ಚೌಕ್ಡಿ ಬಳಿ ಪೊಲೀಸರು ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ ಬಂದ ಮಾರುತಿ ಸುಜುಕಿ ಎರ್ಟಿಗಾ (Ertiga) ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ, ಕಾರಿನೊಳಗೆ ಅನುಮಾನಾಸ್ಪದವಾಗಿದ್ದ ಮೂರು ದೊಡ್ಡ ಪಾರ್ಸೆಲ್ಗಳು ಪತ್ತೆಯಾಗಿವೆ. ಆ ಪಾರ್ಸೆಲ್ಗಳನ್ನು ಬಿಚ್ಚಿ ನೋಡಿದಾಗ ಒಳಗೆ ಕಂತೆ ಕಂತೆ ಭಾರತೀಯ ಕರೆನ್ಸಿ ನೋಟುಗಳು ಪತ್ತೆಯಾಗಿವೆ. ಒಟ್ಟು ನಗದನ್ನು ಎಣಿಕೆ ಮಾಡಿದಾಗ ಅದು ₹2,56,00,000ಗೂ ಅಧಿಕ ಇರುವುದು ಖಚಿತವಾಗಿದೆ.

ವಡೋದರಾಗೆ ಸಾಗಾಟ
ಪೊಲೀಸರ ಪ್ರಾಥಮಿಕ ತನಿಖೆಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಕೋಟ್ಯಂತರ ರೂಪಾಯಿ ಹಣವನ್ನು ದಾಹೋದ್ನಲ್ಲಿರುವ 'ಅಂಗಡಿಯಾ' (Angadia-ಸಾಂಪ್ರದಾಯಿಕ ಬ್ಯಾಂಕಿಂಗ್ ಮಾದರಿಯ ಕೊರಿಯರ್ ವ್ಯವಸ್ಥೆ) ಸಂಸ್ಥೆಯಿಂದ ವಡೋದರಾಗೆ ಸಾಗಿಸಲಾಗುತ್ತಿತ್ತು. ಕಾರು ಚಾಲಕ ರಾಜುಭಾಯ್ ನಿನಾಮಾ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಈ ಬೃಹತ್ ಮೊತ್ತದ ಹಣಕ್ಕೆ ಸಂಬಂಧಿಸಿದ ಯಾವುದೇ ಕಾನೂನುಬದ್ಧ ದಾಖಲೆಗಳನ್ನು ಒದಗಿಸಲು ಆತ ವಿಫಲನಾಗಿದ್ದಾನೆ.
ದಾಹೋದ್ನ ಭರತ್ ಚೋಪ್ರಾ ಎಂಬಾತ ವಡೋದರಾಗೆ ತಲುಪಿಸಲು ಈ ಹಣವನ್ನು ತನಗೆ ನೀಡಿದ್ದಾಗಿ ಚಾಲಕ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಲಿಮಖೇಡಾ ಪೊಲೀಸರು ಇಡೀ ನಗದನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಾಯ್ದೆಯ ಅಡಿಯಲ್ಲಿ ಜಪ್ತಿ ಮಾಡಿದ್ದು, ಹಣವನ್ನು ಸರ್ಕಾರಿ ಖಜಾನೆಗೆ ಜಮೆ ಮಾಡಿದ್ದಾರೆ. ಇಷ್ಟು ದೊಡ್ಡ ಮೊತ್ತದ ಕಪ್ಪುಹಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಅಧಿಕೃತವಾಗಿ ಮಾಹಿತಿ ನೀಡಿದ್ದು, ಐಟಿ ಅಧಿಕಾರಿಗಳು ಹಣದ ಮೂಲದ ಬೆನ್ನು ಬಿದ್ದಿದ್ದಾರೆ.
ಪೊಲೀಸ್ ತನಿಖೆಯಲ್ಲಿ ಈ ಹಣ 'ಅಂಗಡಿಯಾ' ಸಂಸ್ಥೆಗೆ ಸೇರಿದ್ದು ಎಂದು ತಿಳಿದುಬಂದಿದೆ. ಅಂಗಡಿಯಾ ಎಂಬುದು ಪ್ರಮುಖವಾಗಿ ಗುಜರಾತ್ ಮತ್ತು ಮಹಾರಾಷ್ಟ್ರದ (ವಿಶೇಷವಾಗಿ ಮುಂಬೈ ಮತ್ತು ಸೂರತ್) ವಜ್ರ ಹಾಗೂ ಆಭರಣ ಉದ್ಯಮಿಗಳು ಬಳಸುವ ಒಂದು ಹಳೆಯ, ಅನಧಿಕೃತ ಕೊರಿಯರ್ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಾಗಿದೆ.
ಇದರಲ್ಲಿ ಕೇವಲ ನಂಬಿಕೆ ಮತ್ತು ವಿಶೇಷ 'ಕೋಡ್ ವರ್ಡ್'ಗಳ ಆಧಾರದ ಮೇಲೆ ಕೋಟ್ಯಂತರ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ಒಂದು ನಗರದಿಂದ ಮತ್ತೊಂದು ನಗರಕ್ಕೆ ಗುಪ್ತವಾಗಿ ಸಾಗಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತೆರಿಗೆ ವಂಚಿಸಲು ಮತ್ತು ಕಪ್ಪುಹಣವನ್ನು ವರ್ಗಾಯಿಸಲು (ಹವಾಲಾ ದಂಧೆಯ ಮಾದರಿಯಲ್ಲಿ) ಈ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಹಿಂದೆ ಪೊಲೀಸರು ಇಂತಹ ಬೇನಾಮಿ ಹಣವನ್ನು ಸಿಆರ್ಪಿಸಿ (CrPC) ಕಾಯ್ದೆಯಡಿ ವಶಪಡಿಸಿಕೊಳ್ಳುತ್ತಿದ್ದರು. ಆದರೆ ಈಗ ಹೊಸ ಕಾನೂನು ಜಾರಿಯಲ್ಲಿರುವುದರಿಂದ ಲಿಮಖೇಡಾ ಪೊಲೀಸರು ಈ ಹಣವನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಜಪ್ತಿ ಮಾಡಿದ್ದಾರೆ.
ಇದರ ಪ್ರಕಾರ, ವಶಪಡಿಸಿಕೊಂಡ ನಗದನ್ನು ತಕ್ಷಣವೇ ನ್ಯಾಯಾಲಯದ ಅನುಮತಿಯೊಂದಿಗೆ ಸರ್ಕಾರಿ ಖಜಾನೆ (Treasury) ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸುರಕ್ಷಿತವಾಗಿ ಇಡಲಾಗುತ್ತದೆ. ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿರುವುದರಿಂದ, ಐಟಿ ಅಧಿಕಾರಿಗಳು ಈಗ ತನಿಖೆ ಆರಂಭಿಸಲಿದ್ದಾರೆ. ಚಾಲಕ ಹೇಳಿರುವ ದಾಹೋದ್ನ ಭರತ್ ಚೋಪ್ರಾ ಯಾರು? ಆತನ ಅಧಿಕೃತ ಆದಾಯದ ಮೂಲವೇನು? ಆತ ಈ ಹಣವನ್ನು ವಡೋದರಾದಲ್ಲಿ ಯಾರಿಗೆ ತಲುಪಿಸಲು ಕಳುಹಿಸುತ್ತಿದ್ದ ಎಂಬುದರ ಜಾಲ ಬೇಧಿಸಲಾಗುತ್ತದೆ.













Click it and Unblock the Notifications