Explainer: ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ 30 ದಿನ: 20 ಸಚಿವ ಸ್ಥಾನ ಖಾಲಿ - ಹೊಸಬರಿಗೆ ಮಣೆ ಹಾಕುವ ಸರ್ಕಸ್
Explainer: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರಕ್ಕೆ ಬಂದು ಇಂದಿಗೆ ಜುಲೈ 3ಕ್ಕೆ ಬರೋಬ್ಬರಿ 30 ದಿನಗಳಾಗಿವೆ. ಆದರೆ ಈಗಲೂ ಸಹ ಬಾಕಿ ಉಳಿದಿರುವ 20 ಸಚಿವ ಸ್ಥಾನಗಳಿಗೆ ಸಚಿವರ ಆಯ್ಕೆಯಾಗಿಲ್ಲ. ಹೊಸ ಹಾಗೂ ಯುವಕರಿಗೆ ಮಣೆ ಹಾಕಬೇಕು ಎನ್ನುವುದು ಕಾಂಗ್ರೆಸ್ ಹೈಕಮಾಂಡ್ನ ಲೆಕ್ಕಾಚಾರವಾಗಿದೆ. ಆದರೆ, ಸಚಿವ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ಪೈಪೋಟಿ ಹೆಚ್ಚಾಗಿದ್ದು, ಬಣ ರಾಜಕೀಯವೂ ಸೇರಿದಂತೆ ಹಲವು ಕಾರಣಗಳಿಗೆ ಹೊಸ ಸಚಿವರ ನೇಮಕ ಆಗಿಲ್ಲ. ಕರ್ನಾಟಕದಲ್ಲಿ ನೂತನ ಸರ್ಕಾರ ರಚನೆಯಾಗಿ ಒಂದು ತಿಂಗಳೇ ಕಳೆದರೂ ಸಹ ಪ್ರಮುಖ ಸಚಿವ ಸ್ಥಾನ ಖಾಲಿ ಇದೆ. ಇದರಿಂದ ಕರ್ನಾಟಕದ ಆಡಳಿತಾತ್ಮಕ ವಿಷಯದ ಮೇಲೆ ಗಂಭೀರ ಪರಿಣಾಮ ಬೀರಲು ಪ್ರಾರಂಭವಾಗಿದೆ. ಹೊಸ ಸಚಿವ ಸಂಪುಟ ಸಭೆ ರಚನೆಯಾಗಿ 30 ದಿನಗಳು ಕಳೆದರೂ ಸಹ ಒಬ್ಬೇ ಒಬ್ಬರು ಮಹಿಳಾ ಸಚಿವರು ಇಲ್ಲ.
ರಾಜ್ಯದಲ್ಲಿ 20 ಸಚಿವ ಸ್ಥಾನ ಖಾಲಿ
ಕರ್ನಾಟಕದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ 20 ಸಚಿವ ಸ್ಥಾನಗಳು ಖಾಲಿ ಇವೆ. ಬಾಕಿ ಉಳಿದಿರುವ ಸಚಿವ ಸ್ಥಾನವನ್ನು ಸದ್ಯಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನಿರ್ವಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ಗರಿಷ್ಠ 34 ಸಚಿವರನ್ನು ಹೊಂದಲು ಅವಕಾಶವಿದೆ. ಆದರೆ 2026 ಜೂನ್ 3ರಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸೇರಿದಂತೆ ಕೇವಲ 14 ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಾಕಿ ಇರುವ 20 ಸ್ಥಾನಗಳನ್ನು ಭರ್ತಿ ಮಾಡಲು ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ನಡೆದಿದೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಆಮೆ ವೇಗದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿದೆ.

Explainer: ಕಾಂಗ್ರೆಸ್ ಹೈಕಮಾಂಡ್ನ ನಿರ್ಧಾರವೇನು
ಕರ್ನಾಟಕದಲ್ಲಿ 20 ಸಚಿವ ಸ್ಥಾನ ಖಾಲಿ ಇದೆ. ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆಯೇ ಸಂಪುಟ ವಿಸ್ತರಣೆಯ ಬಗ್ಗೆ ಸ್ವಂತವಾಗಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಲಹೆಗಳನ್ನು ಪಡೆದ ನಂತರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಈಗ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಅನುಮೋದನೆ ಪಡೆದ ನಂತರ ಹೆಸರು ಪ್ರಕಟಿಸುವ ಸಾಧ್ಯತೆ ಇದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
2028ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ನೂತನ ಸಚಿವರನ್ನು ನೇಮಿಸುವ ಸಾಧ್ಯತೆ ಇದೆ. ಕರ್ನಾಟಕದ ಯಾವುದೇ ನಾಯಕರನ್ನು ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸಲು ದೆಹಲಿಗೆ ಕರೆಯುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಆದಾಗ್ಯೂ, ಸುರ್ಜೇವಾಲಾ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಶಿವಕುಮಾರ್, ಯುವ ಮತ್ತು ಹೊಸ ಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಏಕೆಂದರೆ ರಾಹುಲ್ ಗಾಂಧಿ ಅವರು ಅಭಿಪ್ರಾಯವೂ ಇದೇ ಆಗಿದೆ. 20 ಹುದ್ದೆಗಳನ್ನು ಜಾತಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ವಿಷಯದಲ್ಲಿ ಸಮತೋಲನ ಕಾಪಾಡಿಕೊಂಡು ಕನಿಷ್ಠ 15 ಜನ ಹೊಸಬರು ಇರುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ಮೂರನೇ ವಾರದಲ್ಲಿ ಸಚಿವರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ವಿಧಾನಸಭೆಯ ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ ಜುಲೈ 10 ರೊಳಗೆ ಶಿವಕುಮಾರ್ ಸಂಪುಟ ವಿಸ್ತರಣೆ ನಡೆಯುವ ನಿರೀಕ್ಷೆಯಿದೆ ಇದೆ ಎಂದು ಹೇಳಲಾಗಿದೆ.
ಈಗ ಇರುವವರು ಪ್ರಮುಖ ಸಚಿವರು
ಡಿ.ಕೆ.ಶಿವಕುಮಾರ್ - ಮುಖ್ಯಮಂತ್ರಿ
--------------------------
1. ಡಾ. ಜಿ. ಪರಮೇಶ್ವರ್ - ಉಪ ಮುಖ್ಯಮಂತ್ರಿ, ಕಂದಾಯ ಮತ್ತು ಯುವಸಬಲೀಕರಣ.
2.. ಪ್ರಿಯಾಂಕ್ ಖರ್ಗೆ- ಗೃಹ ಇಲಾಖೆ ಮತ್ತು ಐಟಿಬಿಟಿ
3. ರಾಮಲಿಂಗಾ ರೆಡ್ಡಿ- ಜಲಸಂಪನ್ಮೂಲ ಸಚಿವ.
4. ಸತೀಶ್ ಜಾರಕಿಹೊಳಿ-ಲೋಕೋಪಯೋಗಿ.
5. ಕೆಎಚ್ ಮುನಿಯಪ್ಪ- ಆಹಾರ ಇಲಾಖೆ.
6. ಕೆಜೆ ಜಾರ್ಜ್ - ಇಂಧನ ಮತ್ತು ಪ್ರವಾಸೋದ್ಯಮ.
7. ಭೈರತಿ ಸುರೇಶ್ - ಸಾರಿಗೆ ಇಲಾಖೆ.
8. ಕೃಷ್ಣ ಭೈರೇಗೌಡ - ಬೆಂಗಳೂರು ನಗರಾಭಿವೃದ್ಧಿ.
9. ಎದಂಬಿ ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ.
10. ಯುಟಿ ಖಾದರ್-ಆರೋಗ್ಯ.
11. ಈಶ್ವರ್ ಖಂಡ್ರೆ- ಗ್ರಾಮೀಣಾಭಿವೃದ್ಧಿ.
12. ಯತೀಂದ್ರ ಸಿದ್ದಾಮಯ್ಯ- ನಗರಾಭಿವೃದ್ಧಿ.
13. ಶರಣ್ ಪ್ರಕಾಶ್ ಪಾಟೀಲ್- ವೈದ್ಯಕೀಯ ಶಿಕ್ಷಣ.












Click it and Unblock the Notifications