ಸಿರುಗುಪ್ಪದಲ್ಲಿ ಮತಯಂತ್ರಗಳ ವಿರುದ್ಧ ಚುನಾವಣಾ ಅಧಿಕಾರಿಗೆ ದೂರು
ಬಳ್ಳಾರಿ, ಮೇ. 05 : ಸಿರುಗುಪ್ಪ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಸ್. ಸೋಮಲಿಂಗಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಹೊಸಮನೆ ಬಿ. ಮಾರುತಿ ಅವರು ಚುನಾವಣಾ ಅಧಿಕಾರಿಗೆ ಪ್ರತ್ಯೇಕವಾಗಿ ಲಿಖಿತ ದೂರು ಸಲ್ಲಿಸಿದ್ದಾರೆ.
ಮತಯಂತ್ರದಲ್ಲಿ ತಮ್ಮ ಫೋಟೋ ಮತ್ತು ಚಿಹ್ನೆ ಸಮರ್ಪಕವಾಗಿ ಕಾಣುತ್ತಿಲ್ಲ. ಚುನಾವಣಾ ಆಯೋಗವು ವಿವಿ ಪ್ಯಾಟ್ ಯಂತ್ರದಲ್ಲಿ ಉದ್ದೇಶಪೂರ್ವಕವಾಗಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಫೋಟೋ, ಚಿಹ್ನೆಯನ್ನು ಮಸುಕು ಮಸುಕಾಗಿ ಕಾಣುವಂತೆ ಮಾಡಿದೆ ಎಂದು ದೂರು ಸಲ್ಲಿಸಿದ್ದಾರೆ.
ಸಿರುಗುಪ್ಪ : ಮತ್ತೆ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ
ಫೋಟೊ – ಚಿಹ್ನೆ ಸರಿಯಾಗಿ ಕಾಣ್ತಿಲ್ಲ
ಚುನಾವಣಾ ಅಧಿಕಾರಿ ಅರುಣ್ ಸಂಗಾವಿ ಅವರಿಗೆ ಲಿಖಿತ ದೂರನ್ನು ಸಲ್ಲಿಸಿ 2018ರ ವಿಧಾನಸಭಾ ಚುನಾವಣೆಯಲ್ಲಿ ಆಯೋಗವು ವಿವಿಪ್ಯಾಟ್ ಯಂತ್ರ ಅಳವಡಿಸಿದೆ. ಯಂತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಫೋಟೋ ಮತ್ತು ಕೈಚಿಹ್ನೆ ಮಾತ್ರ ಸ್ಪಷ್ಟವಾಗಿ ಕಾಣುತ್ತಿದೆ. ಉಳಿದಂತೆ ರಾಜ್ಯಾದ್ಯಂತ ಬಿಜೆಪಿ ಅಭ್ಯರ್ಥಿಗಳ ಫೋಟೊ - ಚಿಹ್ನೆ ಸರಿಯಾಗಿ ಕಾಣುತ್ತಿಲ್ಲ ಎಂದು ಅಭ್ಯರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೋಷವನ್ನು ತಕ್ಷಣವೇ ಸರಿಪಡಿಸಿ
ಜೆಡಿಎಸ್ ಅಭ್ಯರ್ಥಿ ಹೊಸಮನೆ ಬಿ. ಮಾರುತಿ ಅವರು ಚುನಾವಣಾ ಆಯೋಗ ಕಾಂಗ್ರೆಸ್ ಅಭ್ಯರ್ಥಿಯ ಫೋಟೋ ಮತ್ತು ಚಿಹ್ನೆಯನ್ನು ಸ್ಪಷ್ಟವಾಗಿ ಪ್ರಕಟಿಸಿದೆ. ಉಳಿದ ಯಾವುದೇ ಅಭ್ಯರ್ಥಿಯ ಚಿತ್ರ ಮತ್ತು ಚಿಹ್ನೆಯನ್ನು ಅಸ್ಪಷ್ಟವಾಗಿ, ಮಸುಕು ಮಸುಕಾಗಿ ಕಾಣುವಂತೆ ಮುದ್ರಿಸಿದೆ. ಇದು ದೋಷಪೂರಿತ ಮತಪತ್ರದಿಂದ ಕೂಡಿದ ಮತಯಂತ್ರ ಎಂದು ದೂರು ನೀಡಿದ್ದಾರೆ.
ನಮ್ಮನ್ನು ಸೋಲಿಸಲಿಕ್ಕಾಗಿ ಮತ್ತು ಅವಮಾನಿಸಲಿಕ್ಕಾಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ - ಜೆಡಿಎಸ್ ಅಭ್ಯರ್ಥಿಗಳ ಭಾವಚಿತ್ರ ಹಾಗೂ ಚಿಹ್ನೆ ಸ್ಪಷ್ಟವಾಗಿ ಕಾಣದಂತೆ ಚುನಾವಣಾ ಆಯೋಗ ಮತಪತ್ರ ಮುದ್ರಿಸಿದೆ.
ಚುನಾವಣಾಧಿಕಾರಿಗಳು ದೋಷವನ್ನು ತಕ್ಷಣವೇ ಸರಿಪಡಿಸಬೇಕು. ಇಲ್ಲವಾದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಚಿತ್ರ ಸ್ಪಷ್ಟ
ಸಿರುಗುಪ್ಪ ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಮತ ಚಲಾಯಿಸಲು ಬಳಸುತ್ತಿರುವ ಇವಿಎಂ ಮತಯಂತ್ರಗಳಲ್ಲಿ ಮೊದಲ ಕ್ರಮ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ. ಮುರಳಿಕೃಷ್ಣರವರ ಭಾವಚಿತ್ರ ಹಾಗೂ ಪಕ್ಷದ ಚಿಹ್ನೆ ದೊಡ್ಡದಾಗಿ ಸ್ಪಷ್ಟವಾಗಿ ಕಾಣುತ್ತಿದೆ. ಉಳಿದಂತೆ ಮತಪತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಚಿಹ್ನೆಗಳು, ಅಭ್ಯರ್ಥಿಗಳ ಫೋಟೋಗಳು ತೀರ ಚಿಕ್ಕದಾಗಿ ಮುದ್ರಿತವಾಗಿವೆ.
ಅನಕ್ಷರಸ್ಥರಿಗೆ ಫೋಟೋ ಕಾಣಿಸಲ್ಲ
ಹೀಗೆ ಅಸ್ಪಷ್ಟವಾಗಿದ್ದರೆ, ಮತದಾರರಿಗೆ ಪಕ್ಷಗಳ ಅಭ್ಯರ್ಥಿಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಗ್ರಾಮೀಣ ಭಾಗದ ಮಹಿಳೆಯರು ಮತ್ತು ಅನಕ್ಷರಸ್ಥರಿಗೆ ಪಕ್ಷದ ಚಿಹ್ನೆ ಹಾಗೂ ತಮ್ಮ ಫೋಟೋ ಕಾಣಿಸುವುದಿಲ್ಲ ಎಂದು ಅಭ್ಯರ್ಥಿಗಳು ಗೋಳು ತೋಡಿಕೊಂಡಿದ್ದಾರೆ. ಚುನಾವಣಾ ಆಯೋಗ ಯಾವ ಕ್ರಮಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.