ಕೊಟ್ಟ ಮಾತಂತೆ ಆಂಧ್ರ ಪ್ರದೇಶದಲ್ಲಿ13 ಹೊಸ ಜಿಲ್ಲೆ ರಚಿಸಿ ಜಗನ್ ಆದೇಶ
ಹೈದರಾಬಾದ್, ಏ. 03: 2019ರ ವಿಧಾಸಭಾ ಚುನಾವಣೆ ವೇಳೆ ಆಂಧ್ರ ಜನತೆಗೆ ಕೊಟ್ಟಿದ್ದ ಆಶ್ವಾಸನೆಯನ್ನು ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಈಡೇರಿಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಹೆಚ್ಚವರಿ 13 ಹೊಸ ಜಿಲ್ಲೆಗಳ ಏ. 04 ರಿಂದ ಅಸ್ವಿತ್ವಕ್ಕೆ ಬರುವಂತೆ ಜಗನ್ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ತೆಲಂಗಾಣ ಬೇರ್ಪಡೆಯಾದ ಬಳಿಕ ಹದಿಮೂರು ಜಿಲ್ಲೆಗಳಿಗೆ ಸೀಮಿತವಾಗಿದ್ದ ಆಂಧ್ರ ಪ್ರದೇಶದಲ್ಲಿ ಇದೀಗ ಪುನಃ 13 ಹೆಚ್ಚುವರಿ ಜಿಲ್ಲೆಗಳನ್ನಾಗಿ ರಚನೆ ಮಾಡಲಾಗಿದೆ. ಏ. 04 ರಿಂದ ಈ ಜಿಲ್ಲೆಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ. ಜಿಲ್ಲೆಗಳಿಗೆ ಅನುಗುಣವಾಗಿ ಐಎಎಸ್ , ಐಪಿಎಸ್ ಸೇರಿದಂತೆ ಜಿಲ್ಲೆ ಉನ್ನತ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.
ಕಳೆದ ಜನವರಿಯಲ್ಲಿ ಆಂಧ್ರ ಪ್ರದೇಶದಲ್ಲಿ 13 ಹೊಸ ಜಿಲ್ಲೆಗಳ ರಚನೆ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ ಸಾರ್ವಜನಿಕರ ಸಲಹೆ ಕೇಳಿತ್ತು. ಇದಕ್ಕಿಂತಲೂ ಮಿಗಿಲಾಗಿ, 2019 ರ ವಿಧಾನಸಭೆ ಚುನಾವಣೆ ವೇಳೆ ತನ್ನ ಪಕ್ಷ ಅಧಿಕಾರಕ್ಕೆ ಬಂದ್ರೆ ಪ್ರತಿ ಲೋಕಸಭಾ ಕ್ಷೇತ್ರವನ್ನು ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದು ಜಗನ್ ಭರವಸೆ ನೀಡಿದ್ದರು. ಅದರಂತೆ ಇದೀಗ ಹದಿಮೂರು ಜಿಲ್ಲೆ ಘೋಷಣೆ ಮಾಡಲಾಗಿದೆ.
ಆಂಧ್ರಪ್ರದೇಶ ಜಿಲ್ಲಾ ರಚನೆ ಕಾಯ್ದೆಯ ಸೆಕ್ಷನ್ 3(5) ರ ಅಡಿಯಲ್ಲಿ ಹೊಸ ಜಿಲ್ಲೆಗಳ ರಚನೆಗೆ ಸರ್ಕಾರದಿಂದ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಇದರಲ್ಲಿ 13 ಹೊಸ ಜಿಲ್ಲೆಗಳ ಘೋಷಣೆಯ ನಂತರ, ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆಯು 13 ರಿಂದ 26ಕ್ಕೆ ಏರಿಕೆಯಾಗಿದೆ. ಎಪಿ ಜಿಲ್ಲೆಗಳ ರಚನೆ ಕಾಯಿದೆ, ಸೆಕ್ಷನ್ 3(5) ಅಡಿಯಲ್ಲಿ ಹೊಸ ಜಿಲ್ಲೆಗಳನ್ನು ರಚಿಸಲಾಗುತ್ತಿದೆ. ರಾಜ್ಯದಲ್ಲಿ ಸಂಸದೀಯ ಕ್ಷೇತ್ರಗಳ ಆಧಾರದ ಮೇಲೆ ಹೊಸ ಜಿಲ್ಲೆಗಳನ್ನು ರಚಿಸಲಾಗಿದ್ದರೂ, ಅವುಗಳಲ್ಲಿ ಕೆಲವನ್ನು ಮರುನಾಮಕರಣ ಮಾಡಲಾಗಿದೆ. ಶ್ರೀಕಾಕುಲಂ ಪಟ್ಟಣವು ಶ್ರೀಕಾಕುಲಂ ಜಿಲ್ಲೆಯ ಪ್ರಧಾನ ಕಚೇರಿಯಾಗಲಿದೆ ಮತ್ತು ವಿಜಯನಗರಂ ವಿಜಯನಗರಂ ಜಿಲ್ಲೆಯ ಪ್ರಧಾನ ಕಚೇರಿಯಾಗಲಿದೆ. ಮಾನ್ಯಂ ಜಿಲ್ಲೆಯನ್ನು ವಿಜಯನಗರ ಜಿಲ್ಲೆಯಿಂದ ತೆಗೆದಿದ್ದು, ಪಾರ್ವತಿಪುರಂ ಇದರ ಕೇಂದ್ರ ಕಚೇರಿಯಾಗಿದೆ.
ಹೊಸ ಜಿಲ್ಲೆಗಳ ಹೆಸರುಗಳು ಹೀಗಿವೆ- ಮಾನ್ಯಂ, ಅಲ್ಲೂರಿ ಸೀತಾರಾಮ್ ರಾಜು, ಅನಕಾಪಲ್ಲಿ, ಕಾಕಿನಾಡ, ಕೋನ ಸೀಮಾ, ಏಲೂರು, ಎನ್ಟಿಆರ್, ಬಾಪತಿಯಾ, ಪಲ್ನಾಡು, ನಂದ್ಯಾಲ್, ಶ್ರೀ ಸತ್ಯಸಾಯಿ, ಅನ್ನಮಯ್ಯ, ಶ್ರೀ ಬಾಲಾಜಿ. ಈಗಾಗಲೇ ಅಸ್ತಿತ್ವದಲ್ಲಿರುವ 13 ಜಿಲ್ಲೆಗಳ ಹೆಸರುಗಳು ಇಂತಿವೆ ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣಾ, ಗುಂಟೂರು, ಪ್ರಕಾಶಂ, ನೆಲ್ಲೂರು, ಅನಂತಪುರಂ, ಕಡಪ, ಕರ್ನೂಲ್ ಮತ್ತು ಚಿತ್ತೂರು. ಸದ್ಯ ರಾಜ್ಯದಲ್ಲಿ ಒಟ್ಟು 26 ಕ್ಷೇತ್ರಗಳನ್ನು ಹೊಸ ಜಿಲ್ಲೆಗಳನ್ನಾಗಿ ಪರಿವರ್ತಿಸಲಾಗಿದೆ.