ಮಹತ್ವಾಕಾಂಕ್ಷಿ ಕೃಷ್ಣ ಪಾಲೆಮಾರ್ ಯಾಕಿಂಥ ಕೆಲಸ ಮಾಡಿದರು?
ಪ್ರಸ್ತುತ ಡಿ.ವಿ. ಸದಾನಂದ ಗೌಡರ ಸಂಪುಟದಲ್ಲಿ ಬಂದರು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ನಿರ್ವಹಿಸುತ್ತಿರುವ ಕೃಷ್ಣ ಪಾಲೆಮಾರ್ ನೀಲಿ ಚಿತ್ರದ ಎಮ್ಎಮ್ಎಸ್ ಕ್ಲಿಪ್ಪಿಂಗ್ ಅನ್ನು ವಿಧಾನಸಭೆಯಲ್ಲಿ ವೀಕ್ಷಿಸಿ ಸಿಕ್ಕಿಬಿದ್ದ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಕಳಿಸಿದ ಆರೋಪ ಎದುರಿಸುತ್ತಿದ್ದಾರೆ. 'ಕೃಷ್ಣ ಕೃಷ್ಣಾ ನಾನವರಿಗೆ ಅಶ್ಲೀಲ ಚಿತ್ರ ಕಳಿಸೇ ಇಲ್ಲ' ಎಂದು ಗಲ್ಲಗಲ್ಲ ಬಡಿದುಕೊಂಡಿರುವ ಪಾಲೆಮಾರ್ ಈಗ ಹೈಕಮಾಂಡಿಗೆ ಮಣಿದು ರಾಜೀನಾಮೆಯನ್ನೂ ಬಿಸಾಕಿದ್ದಾರೆ.
ರಾಮಕ್ಷತ್ರಿಯ ಎಂಬ ಸಮುದಾಯಕ್ಕೆ ಸೇರಿದ ಪಾಲೆಮಾರ್ ಒಬ್ಬ ಮಹತ್ವಾಕಾಂಕ್ಷಿ ವ್ಯಕ್ತಿ. ಸತತ ಎರಡು ಬಾರಿ (2004 ಮತ್ತು 2008) ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಸಲಿಗೆ ಅವರೊಬ್ಬ ಪಕ್ಕಾ ವ್ಯಾಪಾರಿ. ಆರಂಭದಲ್ಲಿ ಟ್ರಾವಲ್ ಏಜೆಂಟ್ ಆಗಿದ್ದ ಪಾಲೆಮಾರ್, ರಿಯಲ್ ಎಸ್ಟೇಟ್ ಉದ್ಯಮವನ್ನೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಈಗ ಕೃಷ್ಣ ಪಾಲೆಮಾರ್ ರಾಜಕೀಯದಲ್ಲೂ ನೆಲೆ ಕಂಡಿದ್ದಾರೆ. ಯಡಿಯೂರಪ್ಪ ಸರಕಾರದಲ್ಲಿ ಪರಿಸರ ಮತ್ತು ಬಂದರು ಸಚಿವರಾಗಿದ್ದರು.
ದಕ್ಷಿಣ ಕನ್ನಡ ಮತ್ತು ಮಡಿಕೇರಿ ಜಿಲ್ಲೆಯ ಉಸ್ತುವಾರಿ ವಹಿಸಿರುವ ಕೃಷ್ಣ ಪಾಲೆಮಾರ್ ಹುಟ್ಟಿದ್ದು 1955ರಲ್ಲಿ ಜಪ್ಪಿನಮೊಗರು ಎಂಬ ಗ್ರಾಮದಲ್ಲಿ. ಕೃಷಿಕ ಕುಟುಂಬದಲ್ಲಿ ಜನಿಸಿದ್ದ ಪಾಲೆಮಾರ್ ಭೂ ವ್ಯವಹಾರದಲ್ಲಿಯೂ ಸಾಕಷ್ಟು ಪಳಗಿದ್ದಾರೆ. ವಿಧಾನಸಭೆಗೆ ಅವರು ಮೊದಲು ಆಯ್ಕೆಯಾಗಿದ್ದು 2004ರಲ್ಲಿ ಸುರತ್ಕಲ್ ಕ್ಷೇತ್ರದಿಂದ. ನಂತರ 2008ರಲ್ಲಿ ಮಂಗಳೂರು ಉತ್ತರ ಕ್ಷೇತ್ರದಿಂದ ಜಯಿಸಿ ಬಂದಿದ್ದಾರೆ. ಅಶ್ಲೀಲ ಚಿತ್ರ ಕಳಿಸಿದ ಆರೋಪ ಹೊತ್ತಿರುವ ಕೃಷ್ಣ ಪಾಲೆಮಾರ್ ಬಗ್ಗೆ ಅವರ ತವರಿನ ಜನತೆ ಏನು ಹೇಳುತ್ತಾರೆ?