ವೈದ್ಯರ ನಿರ್ಲಕ್ಷ್ಯದಿಂದ ದೃಷ್ಟಿ ಕಳೆದುಕೊಂಡ ಅಜ್ಜಯ್ಯ
ಯಾದಗಿರಿ ಜಿಲ್ಲಾ ನೇತ್ರ ಚಿಕಿತ್ಸಾ ಘಟಕ ಹಾಗೂ ಮಾತಾ ಮಾಣಿಕೇಶ್ವರಿ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಬಡವರಿಗೆ ಉಚಿತ ನೇತ್ರ ಚಿಕಿತ್ಸೆ ಶಿಬಿರ ಹಮ್ಮಿಕೊಂಡಿತ್ತು. ಕಣ್ಣು ಸರಿಯಾಗುತ್ತದೆಂದು ಬಂದ ಅಜ್ಜಯ್ಯ ಈಗ ದೃಷ್ಟಿಹೀನರಾಗಿದ್ದಾರೆ. ವೈದ್ಯರು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.
ಅಡಿವೆಪ್ಪಾ (65) ಯಾದಗಿರಿ ತಾಲೂಕಿನ ಕಾನಹಳ್ಳಿ ಗ್ರಾಮದ ಅಜ್ಜ. ಬಲಗಣ್ಣು ಮಂಜು ಮಂಜಾಗಿ ಕಾಣಿಸ್ತಿದೆ ಅಂತ ಯಾದಗಿರಿ ಜಿಲ್ಲಾಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ಬಂದಿದ್ದ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಸರಿಯಾಗಿ ಕಾಣುತ್ತಿದ್ದ ಎಡಗಣ್ಣಿಗೆ ಆಪರೇಶನ್ ಮಾಡಿದ ಆವಾಂತರ ನಡೆದಿದೆ. ವೈದ್ಯರು ಅಡಿವೆಪ್ಪನ ಕಣ್ಣಿನ ಶಸ್ತ್ರ ಚಿಕೆತ್ಸೆ ಮಾಡುವ ಮೊದಲು ಮನೆಯವರಿಗೂ ತಿಳಿಸದೆ ಇರುವುದು ಆವಾಂತರಕ್ಕೆ ಕಾರಣವಾಗಿದೆ.
ವೈದ್ಯರನ್ನು ಈ ಕುರಿತು ವಿಚಾರಿಸಿದಾಗ, 10 ವರ್ಷದಿಂದ ಈ ರೀತಿ ಉಚಿತ ನೇತ್ರ ತಪಾಸಣೆ ಶಿಬಿರ ಮಾಡುತ್ತಿದ್ದು, ಇದುವರೆಗೂ ರಾಜ್ಯದೆಲ್ಲೆಡೆ ಸುಮಾರು 1 ಲಕ್ಷ 30 ಸಾವಿರ ಕ್ಯಾಂಪ್ಗಳನ್ನು ಮಾಡಿದೇವೆ. ರೋಗಿಯ ಯಾವ ಕಣ್ಣಿಗೆ ಆಪರೇಶನ್ ಮಾಡಬೇಕು ಎಂಬುದು ತಿಳಿದು ಆಪರೇಶನ್ ಮಾಡಿರುತ್ತೇವೆ. ನಾವೇನು ತಪ್ಪನ್ನು ಮಾಡಿಲ್ಲ ಅಂತಾರೆ ಡಾ. ಎನ್. ಸೋಲಂಕಿ (ದೃಷ್ಟಿ ಪ್ರೊಜೆಕ್ಟ್ ಸಂಖ್ಯೆ 2. ಶಿರೂರ ಪಾರ್ಕ್ ರೋಡ್ ಬೆಂಗಳೂರು.)
ಅಡಿವೆಪ್ಪನಿಗೆ ಈಗ ದಿಕ್ಕೇ ತೋಚದಂತಾಗಿದೆ. ಕಣ್ಣಿನ ಅಧ್ಯಯನ ಮತ್ತು ಮಾಹಿತಿ ಸರಿಯಾಗಿ ಮಾಡದೆ ಶಸ್ತ್ರಚಿಕಿತ್ಸೆ ಮಾಡಿ ಜಾರಿಕೊಳ್ಳುತ್ತಿರುವ ವೈದ್ಯರನ್ನು ದೂಷಿಸುವುದೋ? ಮನೆಯವರೊಂದಿಗೆ ಬರದೆ ಸರಿಯಾದ ಮಾಹಿತಿ ನೀಡದ ಅಡಿವೆಪ್ಪನನ್ನು ದೂಷಿಸುವುದೋ?