Kiccha Sudeep: ಬೈಯೋದೆಲ್ಲ ಬಿಡಿ, ಕೆಲಸ ಮಾಡಿ: ಬಿಜೆಪಿ ಅಭ್ಯರ್ಥಿಗೆ ಸುದೀಪ್ ಪಾಠ!
ಕರ್ನಾಟಕ ವಿಧಾನಸಭಾ ಚುನಾವಣೆ ರಂಗೇರಿದ್ದು, ಎಲ್ಲಾ ಕಡೆ ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ. ಪ್ರಚಾರದ ಸಂದರ್ಭದಲ್ಲಿ ಎದುರಾಳಿ ಅಭ್ಯರ್ಥಿಗಳನ್ನು ಟೀಕಿಸೋದು ಸಾಮಾನ್ಯ, ಆದರೆ ನಟ ಕಿಚ್ಚ ಸುದೀಪ್ ಮಾತ್ರ ಇದಕ್ಕೆ ತದ್ವಿರುದ್ಧ. ಬೇರೆ ಪಕ್ಷದವರನ್ನು ಬೈಯಲು ಶುರು ಮಾಡಿದ ಬಿಜೆಪಿ ಅಭ್ಯರ್ಥಿ ಕೈನಿಂದ ಮೈಕ್ ಕಸಿದುಕೊಂಡು ಬುದ್ದಿವಾದ ಹೇಳಿದ್ದಾರೆ.
ಹೌದು, ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೀನ್ ರೆಡ್ಡಿ ಯಾಳಗಿ ಕೈನಿಂದ ಮೈಕ್ ಕಸಿದುಕೊಂಡ ಸುದೀಪ್, ಬೇರೆಯವರನ್ನು ಬೈಯೋದ್ರಲ್ಲಿ ನಮ್ಮ ಗೆಲುವು ಇಲ್ಲ ಸರ್, ನಮ್ಮ ಕೆಲಸದಲ್ಲಿದೆ ಅದನ್ನ ನಾವು ಸರಿಯಾಗಿ ಮಾಡಬೇಕು ಎಂದು ಹೇಳಿದ್ದಾರೆ.

ಶಹಾಪುರ ಮತಕ್ಷೇತ್ರದ ಕೆಂಭಾವಿಯಲ್ಲಿ ರೋಡ್ ಶೋ ನಲ್ಲಿ ಭಾಗವಹಿಸಿದ ಅವರು ಮಾತನಾಡಿ, ಅಕ್ಕಪಕ್ಕದ ಮನೆಯವರನ್ನು ಬೈಯುದಕ್ಕಿಂತ ಮುಂಚೆ ನಮ್ಮ ಮನೆಯ ತೂತುಗಳನ್ನು ಮುಚ್ಚಿಕೊಳ್ಳಬೇಕು, ನಾವು ಸರಿಯಾಗಿದ್ದಾಗ ಬೇರೆಯವರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ, ನೀವು ಮೊದಲಸಾರಿ ಚುನಾವಣೆಗೆ ನಿಲ್ತಾ ಇದ್ದೀರಿ ಉತ್ತಮ ಕೆಲಸ ಮಾಡಿ ಎಂದು ಹೇಳಿದರು.
ನಿಮ್ಮ ಹಠ, ನಿಮ್ಮ ಸಾಧನೆ ನಿಮ್ಮ ಕೆಲಸದ ಮೇಲಿರಲಿ ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದರು. ಕನ್ನಡ ಚಿತ್ರರಂಗದ ಪರವಾಗಿ, ಕನ್ನಡಿಗರ ಪರವಾಗಿ ನಾವು ಇಲ್ಲಿ ನಿಂತಿರುವಾಗ ನಮ್ಮ ಮುಂದೆ ಬೇರೆಯವರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ, ನೀವು ಕೆಲಸ ಮಾಡಿ ನಿಮಗೆ ಒಳ್ಳಯದಾಗಲಿ ಎಂದು ನಾವು ಬಂದಿದ್ದೇವೆ ಎಂದರು.
ನಿಮ್ಮಿಂದ ಜನಗಳಿಗೆ ಒಳ್ಳೆಯದಾಗಬೇಕು
ಜನಗಳಿಗಾಗಿ ಮತ ಕೇಳಲು ಬಂದಾಗ, ಜನಗಳಿಗಾಗಿ ಬಾಳಿ ಬದುಕಿ ತ್ಯಾಗ ಮಾಡಿದಾಗಲೇ ಆತ ಉತ್ತಮ ನಾಯಕ ಎನಿಸಿಕೊಳ್ಳುವುದು. ನಾನು ಇಂದು ಪ್ರಚಾರಕ್ಕೆ ಬರೋಕೆ ಕಾರಣ ಕೂಡ ಅಂತಹ ಕೆಲವು ವ್ಯಕ್ತಿಗಳು, ಮೋದಿ, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರು ಮಾಡಿರುವ ಕೆಲವು ಕಲಸಗಳನ್ನು ಮೆಚ್ಚಿ ಅದಕ್ಕಾಗಿ ಬಂದಿದ್ದೇನೆ, ನೀವು ತುಂಬಾ ಕೆಲಸ ಮಾಡಬೇಕಾಗಿದೆ. ನಂಬಿಕೆ ಇಟ್ಟು ಇಷ್ಟು ಜನ ಸೇರಿದ್ದಾರೆ, ಅವರ ನಂಬಿಕೆಗೆ ತಕ್ಕಂತೆ ಕೆಲಸ ಮಾಡಿ, ನಿಮ್ಮಿಂದ ಜನಕ್ಕೆ ಒಳ್ಳೆ ಕೆಲಸ ಆಗ್ಬೇಕು ಎಂದು ಮನವಿ ಮಾಡಿದರು.
ನಿಮ್ಮ ಬಗ್ಗೆ ಸಾಕಷ್ಟು ಕೇಳಿದ್ದೇನೆ, ತುಂಬಾ ಹಠ ಇದೆ ಎಂದು ಕೇಳಿದೆ ಆ ಹಠ ಜನಕ್ಕೆ ಒಳ್ಳೆಯ ಕೆಲಸ ಮಾಡುವಾಗ ಕೂಡ ಇರಲಿ ಎಂದರು. ನಾನು ಹೋದ ಕಡೆಯಲ್ಲೆಲ್ಲಾ ಜನ ಪ್ರೀತಿ ತೋರಿಸುತ್ತಿದ್ದಾರೆ ಅದಕ್ಕೆ ಬೆಲೆ ಕಟ್ಟಲಾಗದು. ಪೊಲೀಸ್ ಸಿಬ್ಬಂದಿಗೆ ತೊಂದರೆಯಾಗುತ್ತಿದೆ ಅವರ ಕ್ಷಮೆ ಕೇಳುತ್ತಿದ್ದೇನೆ, ಜನರ ಪ್ರೀತಿಗೆ ಧನ್ಯವಾದಗಳು ಎಂದು. ಅಲ್ಲದೆ ಬಚ್ಚನ್ ಸಿನಿಮಾದ ಡೈಲಾಗ್ ಹೊಡೆಯುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.












Click it and Unblock the Notifications