ರಾಜ್ಯದಲ್ಲಿ ಸರಣಿ ಅಪಘಾತ; ಯಾದಗಿರಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕ್ರೂಸರ್: ಐವರ ಸಾವು! ಹಲವರಿಗೆ ಗಾಯ
ಯಾದಗಿರಿ, ಜೂನ್ 06: ರಾಜ್ಯದಲ್ಲಿ ಸರಣಿ ಅಪಘಾರಗಳು ಮುಂದುವರೆದಿದ್ದು, ಮೇ 29ರಂದು ಮೈಸೂರಿನ ಟಿ ನರಸೀಪುರ ಸಮೀಪದ ಕುರುಬೂರು ಬಳಿ ಭೀಕರ ರಸ್ತೆ ಅಫಘಾತ ಮಾಸುವ ಮುನ್ನವೇ ಯಾದಗಿರಿ ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ ಐದು ಜನ ಸಾವನ್ನಪ್ಪಿದ್ದು, 13 ಜನ ಗಾಯಗೊಂಡಿದ್ದಾರೆ.
ಹೌದು, ಯಾದಗಿರಿ ಜಿಲ್ಲೆಯಲ್ಲಿ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 (ಎ)ನಲ್ಲಿ ಮಂಗಳವಾರ ಬೆಳಗ್ಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಐದು ಜನ ಮೃತಪಟ್ಟಿದ್ದಾರೆ. ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ.

ಮೃತರನ್ನು ರಮಿಜಾ ಬೇಗಂ (50), ಮುನೀರ್ (40), ನಯಾಮತ್ (40), ಮುದಸ್ಸೀರ್ (12) ಮತ್ತು ಸುಮ್ಮಿ (12) ಎಂದು ಗುರುತಿಸಲಾಗಿದೆ. ಇನ್ನೂ ಅಪಘಾತದಲ್ಲಿ ಮೃತಪಟ್ಟವರೆಲ್ಲಾ ಆಂಧ್ರ ಪ್ರದೇಶದ ಮೂಲದವರು ಎಂದು ತಿಳಿದುಬಂದಿದೆ. ಆಂಧ್ರ ಪ್ರದೇಶದ ಬಂಡಿ ಆತ್ಮಕೂರು ಗ್ರಾಮದ ಮುನೀರ್ ಹಾಗೂ ಮುದಸ್ಸೀರ್ ಇಬ್ಬರೂ ತಂದೆ-ಮಗ ಎನ್ನಲಾಗಿದ್ದು, ಇನ್ನುಳಿದ ಮೂವರು ವೆಲಗುಡ ಗ್ರಾಮದವರು ಎಂದು ಹೇಳಲಾಗಿದೆ.
ಕ್ರೂಸರ್ನಲ್ಲಿದ್ದ ಜನರು ಆಂಧ್ರಪ್ರದೇಶದ ನಂದ್ಯಾಳ್ ಜಿಲ್ಲೆಯಿಂದ ಕಲಬುರಗಿಯ ಖಾಜಾ ಬಂದೇನವಾಜ್ ದರ್ಗಾದ ಉರುಸ್ ಜಾತ್ರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಬಳಿಚಕ್ರ ಬಳಿ ಹೆದ್ದಾರಿ ಪಕ್ಕ ನಿಲ್ಲಿಸಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದಿದ ಪರಿಣಾಯ ಸ್ಥಳದಲ್ಲಿಯೇ ಐವರು ಸಾವಿಗೀಡಾಗಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.
ಇನ್ನೂ ಅಪಘಾತ ನಡೆದ ಸ್ಥಳಕ್ಕೆ ಸೈದಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತಪಟ್ಟ ಐವರು ಪೈಕಿ ಇಬ್ಬರು ಮಹಿಳೆಯರು. ರಸ್ತೆ ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಯಾದಗಿರಿ ಮತ್ತು ರಾಯಚೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications