ಪಾತಕಿ ಬನ್ನಂಜೆ ರಾಜ ಬಂಧನ
ದುಬೈ, ಅ. 12 : ಕೊಲೆ, ಸುಲಿಗೆ ಮುಂತಾದ ಹಲವಾರು ಪ್ರಕರಣಗಳಲ್ಲಿ ಪೋಲೀಸರ 'ಮೋಸ್ಟ್ ವಾಂಟೆಡ್' ಪಟ್ಟಿಯಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜ ದುಬೈ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮುತ್ತಪ್ಪ ರೈ ಗ್ಯಾಂಗ್ ಜೊತೆ ಗುರುತಿಸಿಕೊಂಡಿದ್ದ ಈತನ ಮೇಲೆ ರಾಜ್ಯದಲ್ಲಿ 18 ಪ್ರಕರಣಗಳು ದಾಖಲಾಗಿವೆ. ರಾಜನ ವಿರುದ್ಧ ಇಂಟರ್ಪೊಲ್ ನೋಟಿಸ್ ಕೂಡ ಜಾರಿಯಾಗಿತ್ತು.
ಮೂಲತಃ ಉಡುಪಿ ನಗರ ವ್ಯಾಪ್ತಿಯಲ್ಲಿ ಬರುವ ಬನ್ನಂಜೆ ಬಡಾವಣೆಯ, ಬನ್ನಂಜೆ ರಾಜ 1998ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ. ಆ ಬಳಿಕ ತಲೆಮರೆಸಿಕೊಂಡು ದುಬೈಗೆ ಪರಾರಿಯಾಗಿದ್ದ. ದುಬೈನಲ್ಲಿ ಕುಳಿತುಕೊಂಡೇ ಅವ್ಯವಹಾರ ನಡೆಸುತ್ತಿದ್ದ ಈತನ ಮೇಲೆ ರಾಜ್ಯ ಪೊಲೀಸರು 18 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.
ಮಂಗಳೂರಿನಲ್ಲಿ ಬಿಲ್ಡರ್ ಸುಬ್ಬರಾವ್ ಎನ್ನುವವರ ಹತ್ಯೆಗೆ ಪ್ರಮುಖ ಕಾರಣನಾಗಿದ್ದ ಬನ್ನಂಜೆ ರಾಜ ಆಲಿಯಾಸ್ ರಾಜೇಂದ್ರ ಕುಮಾರ್ ಆಲಿಯಾಸ್ ಆರ್ ಕೆ ಮೇಲೆ ಬೆಂಗಳೂರು ನಗರ, ಮಣಿಪಾಲ, ಉಡುಪಿ ನಗರ, ಮಲ್ಪೆ ಮುಂತಾದ ಕಡೆ ಹಲವಾರು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಬನ್ನೇರುಘಟ್ಟ ರಸ್ತೆಯಲ್ಲಿರುವ ವಾಣಿಜ್ಯೋದ್ಯಮಿಯೊಬ್ಬರಿಗೆ ಬೆದರಿಕೆ ಕರೆ ಮಾಡಿ ಒಂದು ಕೋಟಿ ರೂಪಾಯಿ ನೀಡುವಂತೆ ಬೆದರಿಸಿದ್ದ.
(ಏಜನ್ಸೀಸ್)