Breaking: ಶಿರೂರು ಟೋಲ್ ಗೇಟ್ಗೆ ಆಂಬುಲೆನ್ಸ್ ಡಿಕ್ಕಿ, ನಾಲ್ವರ ಸಾವು, ನಾಲ್ವರು ಗಂಭೀರ
ಉಡುಪಿ ಜುಲೈ 20: ಜೀವ ಉಳಿಸಬೇಕಾದ ಆಂಬ್ಯುಲೆನ್ಸ್ ತನ್ನ ವೇಗದಿಂದಲೇ ಇತರರ ಪ್ರಾಣಕ್ಕೆ ಕುತ್ತು ತಂದ ಘಟನೆ ಬುಧವಾರ ಉಡುಪಿ ಜಿಲ್ಲೆಯಲ್ಲಿ ಜರುಗಿದೆ. ವೇಗವಾಗಿ ಬಂದ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ರಸ್ತೆ ಟೋಲ್ ಗೇಟ್ಗೆ ಗುದ್ದಿದ ಘಟನೆ ನಡೆದಿದೆ.
ಅಪಘಾತದಲ್ಲಿ ರೋಗೊ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು ಆಂಬುಲೆನ್ಸ್ ಚಾಲಕ, ಟೋಲ್ ಸಿಬ್ಬಂದಿ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟೋಲ್ ಸಿಬ್ಬಂದಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಆಂಬ್ಯುಲೆನ್ಸ್ ಎಂದಾಕ್ಷಣ ಅದರ ತುರ್ತು ಚಾಲನೆ, ರೋಗಿಗಳಿಗೆ ಅದರ ಅನಿವಾರ್ಯತೆ, ರಸ್ತೆಯುದ್ಧಕ್ಕೂ ಅದರ ಸದ್ದು ನೆನಪಾಗುತ್ತದೆ. ಆದರೆ ಇಲ್ಲೊಂದು ಆಂಬ್ಯುಲೆನ್ಸ ತನ್ನ ವೇಗದ ಚಾಲನೆಯಿಂದಲೇ ಟೋಲ್ಗೆ ಡಿಕ್ಕಿ ಹೊಡೆದು ಜನರ ಜೀವಕ್ಕೆ ಕಂಟಕಪ್ರಾಯವಾಗಿದೆ. ಈ ರಣ ಭೀಕರ ಘಟನೆ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.
ಉಡುಪಿ: ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಚಾಲಕನ ಅತೀವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಟೋಲ್ ಕಂಬಕ್ಕೆ ಡಿಕ್ಕಿಯಾಗಿದೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.#Udupi #ambulance #Honnavar #CCTV
ಮಳೆಗಾಲ ಆಗಿದ್ದರಿಂದ ಆಂಬ್ಯುಲೆನ್ಸ್ನ ಚಕ್ರಗಳು ಮತ್ತಷ್ಟು ಜಾರಿವೆ. ಆಂಬ್ಯುಲೆನ್ಸ್ ವೇಗ ನೋಡಿ ಟೋಲ್ ಸಿಬ್ಬಂದಿ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರೀಕೇಡ್ ತೆಗೆಯಲು ದೌಡಾಯಿಸಿದ್ದಾರೆ. ಬ್ಯಾರಿಕೇಡ್ ತೆಗೆಯುತ್ತಿದ್ದಂತೆ ಒಮ್ಮೇಲೆ ರಭಸದಿಂದ ಮುನ್ನುಗ್ಗಿದ ವಾಹನ ನಿಯಂತ್ರಣ ಕಳೆದು ಕೊಂಡು ಟೋಲ್ಗೆ ಡಿಕ್ಕಿ ಹೊಡೆದು ಪಲ್ಟಿ ಆಗಿ ಟೋಲ್ ಸಿಬ್ಬಂದಿ ಮೇಲೆ ಉರಳಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅತೀ ವೇಗದಿಂದ ಬಂದಿದ್ದರಿಂದಲೇ ಟೋಲ್ ಕಂಬಕ್ಕೆ ಡಿಕ್ಕಿ ಹೊಡೆಯಲು ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ವೇಳೆ ಟೋಲ್ ಸಿಬ್ಬಂದಿ ಪ್ರಾಣ ರಕ್ಷಣೆಗೆ ಓಡಿದರೂ ಪ್ರಯೋಜನವಾಗಿಲ್ಲ. ಹೊನ್ನಾವರದಿಂದ ಉಡುಪಿಯ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿದ್ದ ಅಂಬುಲೆನ್ಸ್ ಇದಾಗಿದೆ. ಅಂಬುಲೆನ್ಸ್ ಚಾಲಕನ ಅತೀವೇಗ ಮತ್ತು ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೈಂದೂರು ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದೆ ಎಂದು ತಿಳಿದು ಬಂದಿದೆ.