ಅಂಪೈರ್ಗೆ ಚಾಲೆಂಜ್ ಹಾಕಿ RCB ಗೆಲ್ಲಿಸಿ, ತಾನೂ ಗೆದ್ದ ವಿರಾಟ್ ಕೊಹ್ಲಿ
Virat Kohli: ಅಹಮದಾಬಾದ್ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ 2026ರ ಫೈನಲ್ ಪಂದ್ಯದ ವೇಳೆ ಆನ್ಫೀಲ್ಡ್ ಅಂಪೈರ್ ತಮಗೆ ಔಟ್ ಎಂದು ತೀರ್ಪು ನೀಡಿದ್ದಕ್ಕೆ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೂ ಈ ಜಟಾಪಟಿಯಲ್ಲಿ ಗೆದ್ದಿದ್ದು ಮಾತ್ರ ಕಿಂಗ್ ಕೊಹ್ಲಿ. ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.
ಆರ್ಸಿಬಿ ಬ್ಯಾಟಿಂಗ್ ಚೇಸಿಂಗ್ನ 16ನೇ ಓವರ್ನ ಕೊನೆಯ ಎಸೆತದಲ್ಲಿ ಈ ಘಟನೆ ಸಂಭವಿಸಿತು. ಅರ್ಷದ್ ಖಾನ್ ಎಸೆದ ಚೆಂಡನ್ನು ಕೊಹ್ಲಿ ಮಿಡ್-ಆಫ್ ಕಡೆಗೆ ಹೊಡೆದರು. ಇದನ್ನು ಅಲ್ಲಿದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಕ್ಯಾಚ್ ಹಿಡಿದರು. ಅಂಪೈರ್ ತಕ್ಷಣ ಔಟ್ ಎಂದು ತೀರ್ಪು ನೀಡಿದರು. ಆದರೆ ಗಿಲ್ ಚೆಂಡನ್ನು ಹಿಡಿಯುವಾಗ ಅದು ನೆಲಕ್ಕೆ ತಗುಲಿದೆ ಎಂದು ಕೊಹ್ಲಿ

ಆನ್ಫೀಲ್ಡ್ ಅಂಪೈರ್ ಜೊತೆ ಕೊಹ್ಲಿ ವಾಗ್ವಾದ
ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಅವರು ಆನ್ಫೀಲ್ಡ್ ಅಂಪೈರ್ ನಿತಿನ್ ಮೆನನ್ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದು ಆವೇಶದಿಂದ ಮಾತನಾಡುತ್ತಿರುವುದು ಕಂಡುಬಂದಿತು. ಆರಂಭದಲ್ಲಿ ಅಂಪೈರ್ ನಿತಿನ್ ಮೆನನ್ ಅವರು ಕೊಹ್ಲಿಗೆ ಮೈದಾನದಿಂದ ಹೊರನಡೆಯುವಂತೆ ಸೂಚಿಸಿದ್ದರು.
ಅಂಪೈರ್ಗೆ ಚಾಲೆಂಜ್ ಹಾಕಿ ಗೆದ್ದ ವಿರಾಟ್ ಕೊಹ್ಲಿ
ಆದರೂ ವಿರಾಟ್ ಕೊಹ್ಲಿ ಒತ್ತಾಯದ ನಂತರ ಅಂತಿಮವಾಗಿ ಈ ನಿರ್ಧಾರವನ್ನು ಮೂರನೇ ಅಂಪೈರ್ ಪರಿಶೀಲನೆಗೆ ಒಪ್ಪಿಸಲಾಯಿತು. ಈ ವೇಳೆ ಚೆಂಡು ನೆಲಕ್ಕೆ ತಗುಲಿರುವುದು ಸ್ಪಷ್ಟವಾಗಿ ಕಂಡುಬಂದಿತು. ಅಂತಿಮವಾಗಿ ಆನ್ಫೀಲ್ಡ್ ಅಂಪೈರ್ ನೀಡಿದ್ದ ತೀರ್ಪನ್ನು ಬದಲಾಯಿಸಿ ನಾಟ್ ಔಟ್ ಎಂದು ಪ್ರಕಟಿಸಲಾಯಿತು. ಆದರೆ ಮೈದಾನದಲ್ಲಿ ನಡೆದ ಈ ಹೈಡ್ರಾಮಾ ಕ್ರಿಕೆಟ್ ವಲಯದಲ್ಲಿ ಸದ್ಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಅಜೇಯ 75 ರನ್ ಗಳಿಸಿದ ಕಿಂಗ್ ಕೊಹ್ಲಿ
ಆ ಸಮಯದಲ್ಲಿ 63 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ ನಂತರ ಲಾಂಗ್-ಆನ್ ಮೇಲಿಂದ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಪಂದ್ಯವನ್ನು ಮುಗಿಸಿದರು. ಅವರು 75 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಆರ್ಸಿಬಿ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಆರ್ಸಿಬಿ ತಂಡವು ಸಾಧಾರಣ ಮೊತ್ತವಾದ 156 ರನ್ಗಳ ಗುರಿಯನ್ನು ಬೆನ್ನಟ್ಟುವಾಗ ವಿರಾಟ್ ಕೊಹ್ಲಿ ಕೇವಲ 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ ಅಜೇಯ 75 ರನ್ ಚಚ್ಚಿದರು. ಈ ಇನಿಂಗ್ಸ್ ವೇಳೆ ಅವರು ತಮ್ಮ ಐಪಿಎಲ್ ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕವನ್ನು (25 ಎಸೆತಗಳಲ್ಲಿ) ಪೂರೈಸಿದರು. ಕೊಹ್ಲಿ ಅಬ್ಬರದ ಆಟದ ಬೆಂಬಲದಿಂದ ಆರ್ಸಿಬಿ 18 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಗುರಿ ತಲುಪಿತು.
ಆರ್ಸಿಬಿ ಬೌಲರ್ಸ್ ಮಾರಕ ಬೌಲಿಂಗ್ ದಾಳಿ
ಇದಕ್ಕೂ ಮುನ್ನ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ರಸಿಖ್ ಸಲಾಮ್ ದಾರ್ 3 ವಿಕೆಟ್ ಕಿತ್ತು ಮಿಂಚಿದರೆ, ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್ವುಡ್ ತಲಾ ಎರಡು ವಿಕೆಟ್, ಕೃನಾಲ್ ಪಾಂಡ್ಯ ಒಂದು ವಿಕೆಟ್ ಕಬಳಿಸುವ ಮೂಲಕ ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಹೊಂದಿದ್ದ ಗುಜರಾತ್ ಟೈಟಾನ್ಸ್ ತಂಡವನ್ನು 20 ಓವರ್ಗಳಲ್ಲಿ 155/8 ರನ್ಗಳಿಗೆ ಕಟ್ಟಿಹಾಕಿದ್ದರು. ಒಟ್ಟಿನಲ್ಲಿ ಆರ್ಸಿಬಿ ಗೆಲುವಿಗೆ ವಿರಾಟ್ ಕೊಹ್ಲಿ ಅವರ ಪಾತ್ರ ಎಷ್ಟಿದೆಯೋ, ಬೌಲರ್ಗಳ ಬೌಲಿಂಗ್ ದಾಳಿ ಸಹ ಅಷ್ಟೇ ಪ್ರಮುಖ ಪಾತ್ರವಹಿಸಿದೆ ಅಂದರೆ ತಪ್ಪಾಗಲಾರದು.
ಚರ್ಚೆಗೆ ಕಾರಣವಾದ ಅಂಪೈರ್ ತೀರ್ಪು
ಇದಕ್ಕೂ ಮೊದಲು ಬ್ಯಾಟ್ ಬೀಸಿದ ಜಿಟಿ ಬ್ಯಾಟರ್ ವಾಷಿಂಗ್ಟನ್ ಸುಂದರ್ ಅವರು ಜೇಕಬ್ ಡಫಿ ಎಸೆದ ಚೆಂಡನ್ನು ಫೈನ್-ಲೆಗ್ ಕಡೆಗೆ ಬಲವಾಗಿ ಹೊಡೆದರು. ಈ ವೇಳೆ ಬೌಂಡರಿ ಲೈನ್ ಬಳಿ ಇದ್ದ ಆರ್ಸಿಬಿಯ ಫೀಲ್ಡರ್ ಜೋರ್ಡಾನ್ ಕಾಕ್ಸ್ ಅದ್ಭುತವಾಗಿ ಚೆಂಡನ್ನು ಕೈವಶ ಮಾಡಿಕೊಂಡರು. ವಾಷಿಂಗ್ಟನ್ ಸುಂದರ್ ಔಟ್ ಆದರು ಎಂದು ಭಾವಿಸಿ ಪೆವಿಲಿಯನ್ ಕಡೆಗೆ ಹೆಜ್ಜೆ ಇಡಲಾರಂಭಿಸಿದರು. ಆದರೆ ಆನ್ಫೀಲ್ಡ್ ಅಂಪೈರ್ಗಳು ಇದನ್ನು ಮೂರನೇ ಅಂಪೈರ್ ಪರಿಶೀಲನೆಗೆ ಒಪ್ಪಿಸಿದರು. ವಿಡಿಯೋ ತುಣುಕುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಟಿವಿ ಅಂಪೈರ್ ಕಾಕ್ಸ್ ಚೆಂಡನ್ನು ಹಿಡಿಯುವಾಗ ಅದು ನೆಲಕ್ಕೆ ತಗುಲಿದೆ ಎಂಬ ತೀರ್ಮಾನಕ್ಕೆ ಬಂದು ನಾಟ್ ಔಟ್ ಎಂದು ಪ್ರಕಟಿಸಿದರು.
ಅಂಪೈರ್ ವಿರುದ್ಧ ಪಾಟಿದಾರ್ ಆಕ್ರೋಶ
ನಾಟ್ ಔಟ್ ಎಂದು ಬರುತ್ತಿದ್ದಂತೆ ಆರ್ಸಿಬಿ ನಾಯಕ ರಜತ್ ಪಾಟೀದಾರ್ ಆನ್ಫೀಲ್ಡ್ ಅಂಪೈರ್ ಬಳಿ ತೆರಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ವಾಗ್ವಾದ ನಡೆಸಿದರು. ಇತ್ತ ಮೈದಾನದಲ್ಲಿದ್ದ ಆರ್ಸಿಬಿ ದಿಗ್ಗಜ ವಿರಾಟ್ ಕೊಹ್ಲಿ ಅಂಪೈರ್ ನಿರ್ಧಾರ ನಂಬಲಾಗದೆ ಸಂಪೂರ್ಣವಾಗಿ ಸ್ತಬ್ಧರಾಗಿ ನಿಂತರು. ಇನ್ನು ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಈ ತೀರ್ಪಿನಿಂದ ಆಶ್ಚರ್ಯಚಕಿತರಾದರು. ಜೊತೆಗೆ ಆರ್ಸಿಬಿ ಕ್ಯಾಂಪ್ನಲ್ಲಿದ್ದ ಜೋರ್ಡಾನ್ ಕಾಕ್ಸ್ ಸೇರಿದಂತೆ ಹಲವರು ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡರು.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಆಕ್ರೋಶ
ಈ ತೀರ್ಪಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಆರ್ಸಿಬಿ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೀಗ್ ಹಂತದ ಪಂದ್ಯವೊಂದರಲ್ಲಿ ಜಿಟಿ ತಂಡದ ಜೇಸನ್ ಹೋಲ್ಡರ್ ಇಂತಹುದೇ ಒಂದು ಕ್ಯಾಚ್ ಹಿಡಿದಾಗ ಅದನ್ನು ಔಟ್ ಎಂದು ನೀಡಲಾಗಿತ್ತು. ಆದರೆ ಆರ್ಸಿಬಿ ಫೀಲ್ಡರ್ ಕ್ಲೀನ್ ಆಗಿ ಹಿಡಿದಂತೆ ಕಂಡ ಕ್ಯಾಚ್ ಅನ್ನು ನಾಟ್ ಔಟ್ ಎಂದು ನೀಡಿದ್ದು ಅಂಪೈರಿಂಗ್ನ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಈ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಅಂಪೈರ್ಗಳ ನಿರ್ಧಾರ ಸದ್ಯ ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications