ಸಿಎಂ ಡಿಕೆ ಶಿವಕುಮಾರ್ ಜೊತೆ ಎಷ್ಟು ಸಚಿವರು ಪದಗ್ರಹಣ? ಕೆಪಿಸಿಸಿ ಅಧ್ಯಕ್ಷರು ಯಾರಾಗ್ತಾರೆ? ಇಲ್ಲಿದೆ ಮಾಹಿತಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಂದುಕೊಂಡಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಜೂನ್ 3ರಂದು ತಾವು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇತ್ತ ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಹಾಗೂ ಸಿಎಂ ಪದಗ್ರಹಣದಲ್ಲಿ ಎಷ್ಟು ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬುದರ ಚರ್ಚೆಗಳು ಜೋರಾಗಿವೆ. ಮಂತ್ರಿಗಿರಿ ಆಕಾಂಕ್ಷಿಗಳು ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭಾನುವಾರ ಪರೇಡ್ ನಡೆಸಿದ್ದು ಕಂಡು ಬಂತು.
ಸುಮಾರು 14 ಮಂದಿ ನೂತನ ಶಾಸಕರು ನೂತನ ಸಚಿವರಾಗಿ ಸಿಎಂ ಜತೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಸಚಿವರು, ಸಂಪುಟ ಪುನರ್ ರಚನೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸ್ವತಃ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ಇದರ ಮಧ್ಯೆ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಪುತ್ರ ಯತೀಂದ್ರ ಅವರಿಗೆ ಮಹತ್ವದ ಸ್ಥಾನ ನೀಡಲು ತೀರ್ಮಾನಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬೇಕಿದೆ.

ಎರಡು ಹಂತಗಳಲ್ಲಿ ಸಂಪುಟ ವಿಸ್ತರಣೆ
ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಎರಡು ಹಂತಗಳಲ್ಲಿ ಶಾಸಕರು ಮಂತ್ರಿಗಳಾಗಲಿದ್ದಾರೆ. ಅಂದರೆ ಮೊದಲ ಹಂತದಲ್ಲಿ ಸಿಎಂ ಜೊತೆಗೆ ಕೆಲವರು ಸಚಿವ ಸ್ಥಾನ ಅಲಂಕರಿಸಲಿದ್ದಾರೆ. ಸುಮಾರು ಎರಡು ವಾರಗಳ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಸಿಎಂ ಜೊತೆಗೆ ಎಷ್ಟು ಜನ ಸಚಿವರಾಗಿ ಪದಗ್ರಹಣ ಮಾಡುತ್ತಾರೆ ಎಂಬ ಪ್ರಸ್ತಾಪ ಸದ್ಯಕ್ಕಿಲ್ಲ ಎಂದರು.
ಸೂಕ್ತ ವ್ಯಕ್ತಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ: ಖರ್ಗೆ
ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಿದ್ದಂತೆ ಅವರು ನಿರ್ವಹಿಸುತ್ತಿದ್ದ ಪಕ್ಷದ ಕೆಪಿಸಿಸಿ ಅಧ್ಯಕ್ಷರು ಬದಲಾವಣೆ ಆಗುವುದು ಸಹಜ. ಮುಂಬರಲಿರುವ ಚುನಾವಣೆ ನೋಡಿಕೊಂಡು ಸೂಕ್ತ ವ್ಯಕ್ತಿಯನ್ನೇ ಆಯ್ಕೆ ಮಾಡಲಾಗುವುದು. ಆ ವ್ಯಕ್ತಿ ಮುಖ್ಯಮಂತ್ರಿಗಳೊಂದಿಗೆ ಸಹಕಾರ, ಸಮನ್ವಯದಿಂದ ಹೋಗುವಂತಿರಬೇಕು, ಅಂತವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿದೆ ಎಂದು ಅವರು ಮಾಹಿತಿ ಕೊಟ್ಟರು.
ಹೊಸ ಸಚಿವರ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮನೆ ಪವರ್ ಹೌಸ್ ಆಗಿದೆ. ಕಾರಣ ಮಂತ್ರಿ ಆಗಲು ಆಕಾಂಕ್ಷಿ ಶಾಸಕರು ಡಿಕೆಶಿ ಅವರ ನಿವಾಸಕ್ಕೆ ಪರೇಡ್ ನಡೆಸುತ್ತಿದ್ದಾರೆ. ಯಾರೆಲ್ಲ ತಮ್ಮೊಂದಿಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಎಷ್ಟು ಮಂದಿ ಹೊಸದಾಗಿ ಸಚಿವರಾಗುತ್ತಾರೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಪ್ರಕಟಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಡಿಕೆಶಿ ನೇತೃತ್ವದ ಸಚಿವ ಸಂಪುಟ ಸೇರಲು ಆಕಾಂಕ್ಷಿಗಳಾದ ಸಂತೋಷ್ ಲಾಡ್, ಎಂಬಿ ಪಾಟೀಲ್, ಮಧು ಬಂಗಾರಪ್ಪ, ಪ್ರಿಯಾಂಕ್ ಖರ್ಗೆ, ಗಣೇಶ್ ಹುಕ್ಕೇರಿ, ಕೆ.ಎಚ್ ಮುನಿಯಪ್ಪ ಸೇರಿ ಅನೇಕರು ನಿಯೋಜಿತ ಸಿಎಂ ಭೇಟಿ ಮಾಡುತ್ತಿದ್ದಾರೆ. ಈ ಮೂಲಕ ಸಚಿವ ಸ್ಥಾನ ಪಡೆಯಲು ಲಾಭಿ ನಡೆಸಿದ್ದಾರೆ. ಆದಷ್ಟು ಶೀಘ್ರವೇ ಕಾಂಗ್ರೆಸ್ ಹೈಕಮಾಂಡ್ನಿಂದ ಹೊಸ ಸಚಿವರ ಪಟ್ಟಿ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಸಿಎಂ ಸಿದ್ದರಾಮಯ್ಯ ಅವರಂತೆ ಡಿಕೆ ಶಿವಕುಮಾರ್ ಅವರು ಮುಂದಿನ ಎರಡು ವರ್ಷದವರೆಗೆ ಸಿಎಂ ಆಗಿರಲಿದ್ದಾರೆ. ಬುಧವಾರ ಜೂನ್ 3ರಂದು ವಿಧಾನಸೌಧ ಮುಂಭಾಗದಲ್ಲೇ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.













Click it and Unblock the Notifications