ರಾಯಚೂರು: ವಾಯುವಿಹಾರಕ್ಕೆ ತೆರಳುವ ಮಹಿಳೆಯರಲ್ಲಿ ಆತಂಕ ತರಿಸುತ್ತಿರುವ ಸರಗಳ್ಳರು
ರಾಯಚೂರು, ಸೆ .20: ರಾಯಚೂರು ಜಿಲ್ಲೆಯ ಸಿಂಧನೂರು ನಗರ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ನಡೆದ ಕಳ್ಳತನ ಪ್ರಕರಣಗಳು ಸಾರ್ವಜನಿಕರನ್ನು ಜನರನ್ನು ಚಿಂತೆಗೀಡು ಮಾಡಿದ್ದರೆ, ಪೊಲೀಸರನ್ನು ನಿದ್ದೆಗೆಡಿಸಿದೆ.
ನಗರದ ಆದರ್ಶ ಕಾಲೊನಿಯಲ್ಲಿ ಮಹಿಳೆಯೊಬ್ಬರ ಕೊರಳಿನಲ್ಲಿನ ಸರ ದೋಚಿರುವುದು, ವೆಂಕಟೇಶ್ವರ ನಗರದಲ್ಲೂ ಮಹಿಳೆಯೊಬ್ಬರ ಕೊರಳಲ್ಲಿನ ಸರ ದೋಚಲು ಯತ್ನಿಸಿರುವುದು, ಇನ್ನು ಮನೆಗೆ ನುಗ್ಗಿ ಮೂವರನ್ನು ಕಟ್ಟಿ ಹಾಕಿ ಬಂಗಾರ, ನಗದು ದರೋಡೆ ಹಾಗೂ ಕೆಲವು ಬಂಗಾರ ಅಂಗಡಿಗಳಲ್ಲೂ ಕಳ್ಳತನಕ್ಕೆ ಯತ್ನ ನಡೆದಿರುವ ವದಂತಿಗಳು ಜನರನ್ನು ಬೆಚ್ಚಿ ಬೀಳಿಸಿವೆ.
ಹಿಂದಿ ಭಾಷೆಯಲ್ಲೇ ಮಾತನಾಡುವ ತಂಡವೊಂದು ಕಳ್ಳತನ ಪ್ರಕರಣಗಳಲ್ಲಿ ಸಕ್ರಿಯವಾಗಿದ್ದು, ಈ ತಂಡದ ಶೋಧನೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನಗರದ ಆದರ್ಶ ಕಾಲೊನಿಯಲ್ಲಿ ಸ್ಕೂಟಿಯಲ್ಲಿ ತೆರಳುತಿದ್ದ ಮಹಿಳೆಯೊಬ್ಬರನ್ನು ಇಬ್ಬರು ಕಳ್ಳರು ಬೈಕ್ನಲ್ಲಿ ಬಂದು ಅಂದಾಜು 4 ತೊಲ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇನ್ನು ವೆಂಕಟೇಶ್ವರ ಕಾಲೋನಿಯಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ಮಹಿಳೆಯೊಬ್ಬರು ಇಬ್ಬರು ಕಳ್ಳರನ್ನು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆದರೆ, ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ ಸಮಯದಲ್ಲೇ ಕಳ್ಳರು ಆದರ್ಶ ಕಾಲೋನಿಯಲ್ಲಿ ಮಹಿಳೆಯ ಸರ ದೋಚಿ ಪರಾರಿಯಾದ ಘಟನೆ ಕೂಡ ನಡೆದಿದೆ. ಪಿಎಸ್ಐ ಸೌಮ್ಯ ನೇತೃತ್ವದ ತಂಡ ಕಳ್ಳರ ಪತ್ತೆಗೆ ಮುಂದಾದರೂ ಪ್ರಯೋಜನವಾಗಿಲ್ಲ. ಚಿನ್ನದ ಸರ ಕಳ್ಳತನದ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳ್ಳತನ ಪ್ರಕರಣ ನಡೆಯುತ್ತಿರುವುದರಿಂದ ಜನರು ಜಾಗೃತಿ ವಹಿಸುವುದು ಅವಶ್ಯವಾಗಿದೆ. ನಗರದ ವೆಂಕಟೇಶ್ವರ ಕಾಲೋನಿಯಲ್ಲಿ ಬಿ.ಶಿವಾನಂದರಾವ್ ಎಂಬುವವರಿಗೆ ಸೇರಿದ ಮನೆ ಒಳಗೆ ಎರಡು ದಿನಗಳ ಹಿಂದೆ ನಸುಕಿನ ಜಾವ 3 ಗಂಟೆಗೆ ನುಗ್ಗಿರುವ ಕಳ್ಳತನ ಘಾಟು ಬರುವ ಪೌಡರ್ ಹಾಕಿದ್ದಾರೆ. ನಂತರ ಮನೆಯವರು ಕಣ್ಣು ಉರಿ, ಕೆಮ್ಮುತ್ತಿರುವ ಸಮಯದಲ್ಲಿ ಕೊಠಡಿಯೊಂದರಲ್ಲಿ ಕಟ್ಟಿ ಹಾಕಿ, 1.15 ಲಕ್ಷ ರೂ. ನಗದು, ಬಂಗಾರ ಕಳ್ಳತನ ಮಾಡಿದ್ದಾರೆ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ವೆಂಕಟಪ್ಪ ನಾಯಕ್ ನೇತೃತ್ವದಲ್ಲಿ ನಗರ ಠಾಣೆಯಲ್ಲಿ ಸಭೆ ನಡೆಸಲಾಗಿದೆ.
ಶಾಲಾ-ಕಾಲೇಜು, ಬಾರ್ ರೆಸ್ಟೋರೆಂಟ್ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸೂಚನೆ ನೀಡಿದ್ದಾರೆ. ಕಳ್ಳರ ಪತ್ತೆಗಾಗಿ ರಾತ್ರಿ ವೇಳೆ ಗಸ್ತು ತೀವ್ರಗೊಳಿಸಲಾಗಿದೆ. ಒಟ್ಟಿನಲ್ಲಿ ಜನರಲ್ಲಿ ಭೀತಿ ಉಂಟು ಮಾಡಿರುವ ಕಳ್ಳರನ್ನು ಬಂಧಿಸುವ ಮೂಲಕ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂಬುದು ಜನರ ಮನವಿಯಾಗಿದೆ.

ಸಿಂಧನೂರು ಪೊಲೀಸ್ ವೃತ್ತ ನಿರೀಕ್ಷಕರ ವ್ಯಾಪ್ತಿಯಲ್ಲಿ 2020ರಲ್ಲಿ 7, 2021ರಲ್ಲಿ 6, 2022ರಲ್ಲಿ 7 ಕಳ್ಳತನ ಪ್ರಕರಣದ ವರದಿಯಾಗಿವೆ. ಒಟ್ಟಾರೆ ಕಳ್ಳತನಗಳಲ್ಲಿ ಐದು ಪ್ರಕರಣದಲ್ಲಿ ಕಳ್ಳರನ್ನು ಪತ್ತೆ ಹಚ್ಚಲಾಗಿದೆ. ಇನ್ನುಳಿದ ಪ್ರಕರಣಗಳಲ್ಲಿ ಕಳ್ಳರ ಹುಡುಕಾಟ ನಡೆದಿದೆ. ಸಿಂಧನೂರಿನಲ್ಲಿ ಶ್ರೀಮಂತರಿರುವ ವೆಂಕಟೇಶ್ವರ ಕಾಲೋನಿಗಳು ಕಳ್ಳರ ಟಾರ್ಗೆಟ್ ಆಗುತ್ತಿವೆ. ಸಂಜೆ ವೇಳೆ ವಾಯು ವಿಹಾರಕ್ಕೆ ತೆರಳುವ ಮಹಿಳೆಯರ ಕೊರಳಲ್ಲಿನ ಸರಗಳನ್ನು ಕದ್ದೊಯ್ದ ಪ್ರಕರಣಗಳು ನಡೆದಿವೆ. ಈ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಲ್ಲ. ಆಯ್ದ ಸ್ಥಳಗಳಲ್ಲಿ ವಿದ್ಯುತ್ ದೀಪ, ಸಿಸಿ ಕ್ಯಾಮರಾ ಅಳವಡಿಸಿಲ್ಲ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕಳ್ಳತನ ಪ್ರಕರಣ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಲ್ಲಿಯೂ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ವಹಿಸುವ ಅವಶ್ಯಕತೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಆದರ್ಶ ಕಾಲೋನಿ, ವೆಂಕಟೇಶ್ವರ ಕಾಲೊನಿಗಳಲ್ಲಿನ ಕಳ್ಳತನ ಪ್ರಕರಣ ಬಗ್ಗೆ ಗಮನಕ್ಕೆ ಇದೆ. ಈ ಎರಡು ಪ್ರದೇಶಗಳಲ್ಲಿ ನಾಕಾಬಂದಿ, ರಾತ್ರಿ ಗಸ್ತು, ಆಟೋಗಳಲ್ಲಿ ಮೈಕ್ ಮೂಲಕ ಜಾಗೃತಿ ಮೂಡಿಸಲಾಗಿದೆ. ಜನರೂ ಎಚ್ಚರಿಕೆಯಿಂದ ಇರಬೇಕು ಎಂದು ಡಿವೈಎಸ್ಪಿ ವೆಂಕಟಪ್ಪ ನಾಯಕ್ ತಿಳಿಸಿದ್ದಾರೆ.












Click it and Unblock the Notifications