ನಟಿ ಅನುಷ್ಕಾಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್!
ಬೆಂಗಳೂರು, ಜೂ. 12: ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಹತ್ಯೆಗೆ ದಿವಂಗತ ಡಾನ್ ಮುತ್ತಪ್ಪ ರೈ ಅಕ್ಕನ ಮಗ ಮನ್ವಿತ್ ರೈ ಸ್ಕೆಚ್ ಹಾಕಿರುವ ಸಂಗತಿ ಹೊರ ಬಿದ್ದಿದೆ. ಗುಣರಂಜನ್ ಶೆಟ್ಟಿ ಹತ್ಯೆಗೆ ಮನ್ವಿತ್ ರೈ ಸಂಚು ರೂಪಿಸಿರುವ ಸಂಬಂಧ ಜಯ ಕರ್ನಾಟಕ ಸಂಘಟನೆ ಸದಸ್ಯರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ದೂರು ನೀಡಿದ್ದಾರೆ.
ಮುತ್ತಪ್ಪ ರೈ ಬಲಗೈ ಬಂಟನಾಗಿರುವ ಗುಣರಂಜನ್ ಶೆಟ್ಟಿ ಜಯಕರ್ನಾಟಕ ಸಂಘಟನೆ ಪ್ರಮುಖ ಸ್ಥಾನದಲ್ಲಿದ್ದಾರೆ. ದಿವಂಗತ ಡಾ. ಮುತ್ತಪ್ಪ ರೈ ಅವರ ಪರಮಾಪ್ತರಾಗಿ ಗುರುತಿಸಿಕೊಂಡಿದ್ದರು. ನಟಿ ಅನುಷ್ಕಾ ಶೆಟ್ಟಿಯ ಸಹೋದರ ಕೂಡ ಹೌದು. ಇನ್ನು ಮುತ್ತಪ್ಪ ರೈ ಅವರ ಅಕ್ಕನ ಮಗ ಮನ್ವಿತ್ ರೈ. ಮುತ್ತಪ್ಪ ರೈ ಅವರಿಂದ ಮನ್ವಿತ್ ರೈ ಹೊರ ಬಂದಿದ್ದ. ಇದೀಗ ಗುಣರಂಜನ್ ಶೆಟ್ಟಿ ಕೊಲೆಗೆ ಸಂಚು ರೂಪಿಸಿರುವ ವಿಚಾರ ಹೊರ ಬರುತ್ತಿದ್ದಂತೆ ಇದಕ್ಕೆ ಸಂಬಂಧಿಸಿದ ಅಡಿಯೋ ಕೂಡ ಮನ್ವಿತ್ ರೈ ಬಿಡುಗಡೆ ಮಾಡಿದ್ದಾನೆ.
ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ಎಂಬ ವದಂತಿ ಬರ್ತಾಯಿವೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಾರೆ. ಆದರೆ ಈ ವಿಚಾರದಲ್ಲಿ ಯಾಕೆ ನನ್ನ ಹೆಸರು ಬರ್ತಾ ಇದೆಯೋ ಗೊತ್ತಿಲ್ಲ. ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೇನೆ. ಇದಕ್ಕೂ ನನಗೂ ಸಂಬಂಧ ಇಲ್ಲ ಎಂದು ಮನ್ವಿತ್ ರೈ ಅಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ. ತನಿಖೆ ಆಗ್ತಿರೋದ್ರಿಂದ ಇದರಲ್ಲಿ ಯಾರು ಇದ್ದಾರೆ ಎಂಬುದು ಹೊರಗೆ ಬರಲಿದೆ ಎಂಬ ಎಚ್ಚರಿಕೆ ಕೊಟ್ಟಿದ್ದಾರೆ.
ವಿನಾಃಕಾರಣ ನನ್ನ ಹೆಸರು ಯಾಕೆ ಬಳಸುತ್ತಿದ್ದಾರೋ ಗೊತ್ತಿಲ್ಲ. ನನ್ನ ಮೇಲೆ ಇದುವರೆಗೂ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ. ಒಂದು ಎಫ್ಐಆರ್ ಕೂಡ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಕೇಶ್ ಮಲ್ಲಿ ಹತ್ಯೆ ವಿಚಾರದಲ್ಲಿ ಮನ್ವಿತ್ ಹೆಸರು ತಳಕು: 2020 ರಲ್ಲಿ ಮುತ್ತಪ್ಪ ರೈ ಪರಮಾಪ್ತ ರಾಕೇಶ್ ಮಲ್ಲಿಯನ್ನು ಕೊಲೆ ಮಾಡಲು ಮಾಜಿ ಡಾನ್ ಮುತ್ತಪ್ಪ ರೈ ಅವರು ಸುಪಾರಿ ಕೊಟ್ಟಿರುವ ವಿಚಾರದಲ್ಲಿ ಮನ್ವಿತ್ ರೈ ಹೆಸರು ಕೇಳಿ ಬಂದಿತ್ತು. ಮೂರು ಕೋಟಿ ರೂ.ಗೆ ಮುತ್ತಪ್ಪ ರೈ ಸುಪಾರಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ವೇಳೆ ರಾಕೇಶ್ ಮಲ್ಲಿ ಮಾಧ್ಯಮಗಳ ಎದುರು ಬಂದು ನನ್ನ ಕೊಲೆಗೆ ಮುತ್ತಪ್ಪ ರೈ ಸುಪಾರಿ ನೀಡಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ. ಇದಕ್ಕೆ ಸಂಬಂಧಿಸದಿಂತೆ ವಿದೇಶದಿಂದಲೇ ವಿಡಿಯೋ ಬಿಡುಗಡೆ ಮಾಡಿದ್ದ ಮನ್ವಿತ್ ರೈ, ರಾಕೇಶ್ ಮಲ್ಲಿ ಕೊಲ್ಲಲು ಸುಪಾರಿ ಕೊಡುವುದಾಗಿ ಹೇಳಿದ್ದು ನಿಜ ಎಂದು ಮನ್ವಿತ್ ರೈ ಸಹ ಸ್ಪಷ್ಟನೆ ನೀಡಿದ್ದ.
ಇದೀಗ ರೈ ಅವರ ಆಪ್ತರಾಗಿ ಗುರುತಿಸಿಕೊಂಡಿರುವ, ಜಯ ಕರ್ನಾಟಕ ಸಂಘಟನೆಯ ಗುಣರಂಜನ್ ಶೆಟ್ಟಿಗೆ ಮನ್ವಿತ್ ರೈ ಬೆದರಿಕೆ ಹಾಕಿರುವುದು ಬೆಂಗಳೂರು ಭೂಗತ ಜಗತ್ತಿನಲ್ಲಿ ಭಾರೀ ಸುದ್ದು ಮಾಡುತ್ತಿದೆ.