ಅಕ್ಟೋಬರ್ನಲ್ಲಿ 54.6 ಲಕ್ಷ ಭಾರತೀಯರ ಉದ್ಯೋಗ ಕಡಿತ
ನವದೆಹಲಿ, ನವೆಂಬರ್ 02: ದೇಶದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ 54.6 ಮಿಲಿಯನ್ ಅಂದರೆ 54 ಲಕ್ಷದ 60 ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಔಪಚಾರಿಕ ಮತ್ತು ಅನೌಪಚಾರಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕನಿಷ್ಠ 5.46 ಮಿಲಿಯನ್ ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ.
ಆದರೆ ಅಕ್ಟೋಬರ್ನಲ್ಲಿ ಮಾಹಿತಿ ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ ಮತ್ತು ಶಿಕ್ಷಣ ವಲಯದ ಉದ್ಯೋಗ ಸೃಷ್ಟಿ ಪ್ರಮಾಣ ಕಡಿಮೆ ಇದೆ. ಒಟ್ಟಾರೆ ಉದ್ಯೋಗ ಕಡಿತವು ಅಸಮಾಧಾನ ಮೂಡಿಸಿದೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(CMIE) ಮಾಸಿಕ ಉದ್ಯೋಗ ಮಾಹಿತಿ ಪ್ರಕಾರ, ಅಕ್ಟೋಬರ್ನಲ್ಲಿ ಉದ್ಯೋಗಿಗಳ ಸಂಖ್ಯೆ 400.77 ಮಿಲಿಯನ್, ಸೆಪ್ಟೆಂಬರ್ನಲ್ಲಿ ದಾಖಲಾದ 406.24ಮಿಲಿಯನ್ಗಿಂತ ಕಡಿಮೆಯಾಗಿದೆ.
ಲೇಬರ್ ಫೋರ್ಸ್ ಪಾರ್ಟಿಸಿಪೇಷನ್ ದರ ಹಾಗೂ ಉದ್ಯೋಗ ದರ ಅಕ್ಟೋಬರ್ನಲ್ಲಿ ಇಳಿಕೆ ಕಂಡಿದೆ. ರಾಷ್ಟ್ರೀಯ ಲೇಬರ್ ಫೋರ್ಸ್ ಪಾರ್ಟಿಸಿಪೇಷನ್ ದರವು ಸೆಪ್ಟೆಂಬರ್ನಲ್ಲಿ ಶೇ.40.66 ರಷ್ಟಿದ್ದು, ಶೇ.40.41ಕ್ಕೆ ಏರಿಕೆಯಾಗಿತ್ತು. ಆಗಸ್ಟ್ನಲ್ಲಿ ಎಲ್ಎಫ್ಪಿಆರ್ ಶೇ.40.52ರಷ್ಟಿತ್ತು.
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೊರೊನಾ ಸೋಂಕು ಆರಂಭದಿಂದ ಮತ್ತಷ್ಟು ಹೆಚ್ಚಾಗಿದೆ. ಸಿಎಂಐಇ ರಾಷ್ಟ್ರೀಯ ನಿರುದ್ಯೋಗ ದರ ಅಕ್ಟೋಬರ್ನಲ್ಲಿ ಶೇ.7.75ರಷ್ಟಿತ್ತು. ಸೆಪ್ಟೆಂಬರ್ನಲ್ಲಿ ಶೇ.6.86ರಷ್ಟಿತ್ತು.
ಜವಳಿ, ಆಟೋಮೊಬೈಲ್ಸ್, ಸಾರಿಗೆ ಉತ್ಪಾದನೆ, ರಾಸಾಯನಿಕ ಕೈಗಾರಿಕೆಗಳು, ಲೋಹ, ರತ್ನಗಳು ಹಾಗೂ ಆಭರಗಳಂತಹ ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗಿವೆ.
ಆದರೆ ಆಹಾರ ಉದ್ಯಮದಲ್ಲಿ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನಲ್ಲಿ ಕನಿಷ್ಠ 2 ಮಿಲಿಯನ್ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗಾಗಿ ಅಟಲ್ ಭೀಮಿತಿ ವ್ಯಕ್ತಿ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಕಳೆದ ಮಾರ್ಚ್.24ರಿಂದ ಡಿಸೆಂಬರ್ ನಡುವೆ ಉದ್ಯೋಗ ಕಳೆದುಕೊಂಡ ನೌಕರರು ಈ ಯೋಜನೆ ಪಡೆದುಕೊಳ್ಳಬಹುದು. ರಾಜ್ಯ ನೌಕರರ ವಿಮಾ ನಿಗಮದ ನೋಂದಾಯಿತ ಕಾರ್ಮಿಕರು ಮೂರು ತಿಂಗಳವರೆಗೂ ತಮ್ಮ ವೇತನದ ಶೇ. 50ರಷ್ಟು ಹಣವನ್ನು ಪಡೆಯಬಹುದು.
ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಹೆಚ್ಚಾದ ಹಿನ್ನೆಲೆ ಮಾರ್ಚ್.24ರಂದು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತ ಲಾಕ್ ಡೌನ್ ಘೋಷಿಸಿದರು. ಮೊದಲ ಹಂತದಲ್ಲಿ 21 ದಿನಗಳವರೆಗೂ ಲಾಕ್ ಡೌನ್ ಘೋಷಿಸಿದ್ದು, ಏಪ್ರಿಲ್ ತಿಂಗಳಾಂತ್ಯದವರೆಗೂ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ತದನಂತರದಲ್ಲಿ ದೇಶದ ಆರ್ಥಿಕತೆಗೆ ಬೀಳುವ ಹೊಡೆತ ತಪ್ಪಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆಗೊಳಿಸಲಾಯಿತು.
ಭಾರತ ಲಾಕ್ಡೌನ್ನಿಂದ ಆದಾಯದ ಮೂಲವನ್ನೇ ಕಳೆದುಕೊಂಡು ಕಂಗಾಲಾಗಿರುವ ಜನರ ಬದುಕನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ. ಇಎಸ್ಐಸಿ ಅಭಿಯಾನಕ್ಕೆ ಸಂಬಂಧಿಸಿದಂತೆ ಔಪಚಾರಿಕ ಅಧಿಸೂಚನೆಯನ್ನು ಹೊರಡಿಸಲಿದ್ದು, ಯೋಜನೆಯಿಂದ ಬೊಕ್ಕಸಕ್ಕೆ 44000 ಕೋಟಿ ಖರ್ಚಾಗಲಿದೆ. ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರ ದುಃಸ್ಥಿತಿಯನ್ನು ನಿಭಾಯಿಸುವ ದೃಷ್ಟಿಯಿಂದ ಯೋಜನೆ ಜಾರಿಗೊಳಿಸಲಾಗುತ್ತಿದೆ.