ಕಲಘಟಗಿ ಕ್ಷೇತ್ರ: ಸಂತೋಷ್ ಲಾಡ್ ಗೆ ಸೆಡ್ಡು ಹೊಡೆಯಬಲ್ಲವರ್ಯಾರು?
ಅಕ್ಕಿ ಅಂದ್ರೆ ಕಲಘಟಗಿ ಅಕ್ಕಿ ಎಂಬ ಖ್ಯಾತಿಗೆ ಪಾತ್ರವಾದ ಕಲಘಟಗಿ ವಿಧಾನಸಭಾ ಕ್ಷೇತ್ರ ಧಾರವಾಡ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ.
ಸಾಕ್ಷರರ ಸಂಖ್ಯೆ ಇಲ್ಲಿ ಶೇ.62 ಇದ್ದರೂ, ಮಹಿಳಾ ಸಾಕ್ಷರತೆಯ ವಿಷಯದಲ್ಲಿ ಸಾಕಷ್ಟು ಹಿಂದಿದೆ.
ಕೃಷಿಯನ್ನೇ ಮುಖ್ಯ ಕಸುಬನ್ನಾಗಿ ನಂಬಿರುವ ಇಲ್ಲಿ ಕಂದು ಬಣ್ಣ ಮಿಶ್ರಿತ ಮಸಾರಿ ಭೂಮಿಯಿದೆ. ಬತ್ತ ಇಲ್ಲಿಯ ಮುಖ್ಯ ಬೆಳೆ. ಕೃಷಿ ಬಿಟ್ಟರೆ ಕೈಗಾರಿಗೆಗಳನ್ನೆಲ್ಲ ನಂಬಿಕೊಂಡವರ ಸಮಖ್ಯೆ ಕಡಿಮೆಯೇ.
ಇಲ್ಲಿನ ಅವಲಕ್ಕಿ ಚುರಮುರಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇಲ್ಲಿನ ಮರದ ಬಣ್ಣದ ತೊಟ್ಟಿಲುಗಳು ಒಂದು ಕಾಲಕ್ಕೆ ತುಂಬ ಪ್ರಸಿದ್ಧಿ ಪಡೆದಿದ್ದವು.
ಇಲ್ಲಿ ಲಿ೦ಗಾಯತ (ವೀರಶೈವ), ಜೈನ್, ಮುಸ್ಲಿಮ್, ಕ್ರೈಸ್ತ್, ಮರಾಠಾ, ಬ್ರಾಹ್ಮಣ ಮುಂತಾದ ಎಲ್ಲ ಜಾತಿ-ಮತದ ಜನರೂ ಇಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇಲ್ಲಿನ ಮುಖ್ಯ ಭಾಷೆ ಕನ್ನಡ.
ಇಲ್ಲಿನ ರಾಜಕೀಯದ ಬಗ್ಗೆ ಯೋಚಿಸುವುದಾದರೆ, ಗಣಿ ಉದ್ಯಮಿ ಕಾಂಗ್ರೆಸ್ ನ ಸಂತೋಷ್ ಲಾಡ್ ಇಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿದ್ದಾರೆ. ಮರಾಠಾ ಸಮುದಾಯಕ್ಕೆ ಸೇರಿರುವ ಸಂತೋಷ್ ಲಾಡ್ ಈ ಕ್ಷೇತ್ರದಲ್ಲಿ ತಮ್ಮ ಸ್ವಂತ ಹಣದಿಂದ ಹಲವಾರು ಸಾಮಾಜಿಕ, ಶೈಕ್ಷಣಿಕ, ಮತ್ತು ಧಾರ್ಮಿಕ ಕೆಲಸಗಳನ್ನು ಮಾಡಿದ್ದಾರೆ ಎಂದು ಇಲ್ಲಿನ ಜನರೇ ಹೇಳುತ್ತಾರೆ.
ಬಡವರಿಗೆ ಉಚಿತ ಬೋರ್ವೆಲ್, ವೈದ್ಯಕೀಯ ವೆಚ್ಚ, ಉನ್ನತ ಶಿಕ್ಷಣಕ್ಕೆ ಧನಸಹಾಯ, ಕಪ್ಯೂಟರ್ ತರಬೇತಿ ಕೇಂದ್ರಗಳ ಸ್ಥಾಪನೆ, ಸಮುದಾಯ ಭವನಗಳ ನಿರ್ಮಾಣ ಮಾಡಿದ್ದಾರೆ. ಮಂತ್ರಿಯಾಗಿರುವುದರಿಂದ ಅನುದಾನಗಳನ್ನು ತಂದು ಅಭಿವೃದ್ಧಿಪರ ಕೆಲಸಗಳನ್ನು ಶೀಘ್ರವಾಗಿ ಮಾಡಿಸುತ್ತಿದ್ದಾರೆ. ಅವರ ಗೆಲುವನ್ನು ತಪ್ಪಿಸಬಲ್ಲ ಪ್ರಬಲ ಅಭ್ಯರ್ಥಿ ಈ ಕ್ಷೇತ್ರದಲ್ಲಿ ಯಾರೂ ಇಲ್ಲ ಎಂಬುದು ಇವರಿಗೊಂದು ಪ್ಲಸ್ ಪಾಯಿಂಟ್.
2013 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಸಂತೋಷ್ ಲಾಡ್ 76802 ಮತಗಳಿಸಿದ್ದರೆ, ಕೆಜೆಪಿಯ ಎನ್ ಸಿ ಮಲ್ಲಪ್ಪ 31141 ಮತ ಪಡೆದಿದ್ದರು. ಈ ಬಾರಿ ಕೆಜೆಪಿ. ಬಿಜೆಪಿ ವಿಲೀನವಾಗಿರುವುದರಿಂದ ಈ ಕ್ಷೇತ್ರದಲ್ಲಿ ಲಾಡ್ ಅವರನ್ನು ಎದುರಿಸುವ ಸಮರ್ಥ ಅಭಯರ್ಥಿಯನ್ನಾಗಿ ಬಿಜೆಪಿ ಯಾರನ್ನು ಆರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.