ಬಂಪರ್ ಬೆಲೆಯ ನಿರೀಕ್ಷೆಯಲ್ಲಿ ಚಿತ್ರದುರ್ಗದ ಈರುಳ್ಳಿ
ಚಿತ್ರದುರ್ಗ, ಆಗಸ್ಟ್ 19 : ಈರುಳ್ಳಿ ಬೆಳೆದ ರೈತರು ಪ್ರತಿ ವರ್ಷ ಬೆಲೆ ಸಿಕ್ಕಿಲ್ಲ ಎಂದು ಕಣ್ಣೀರು ಹಾಕುತ್ತಿದ್ದರು. ಆದರೆ, ಈ ಬಾರಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಚಿತ್ರದುರ್ಗದಲ್ಲಿ ಈರುಳ್ಳಿ ಬೆಳೆದವರು ಬಂಪರ್ ಬೆಲೆ ನಿರೀಕ್ಷೆಯಲ್ಲಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆ ಮತ್ತು ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿದೆ. ಚಿತ್ರದುರ್ಗದಲ್ಲಿ ಇದುವರೆಗೂ ಮಳೆಯಾಗಿಲ್ಲ. ಈರುಳ್ಳಿ ಈಗ ಕಟಾವು ಹಂತಕ್ಕೆ ಬರುತ್ತಿದ್ದು, ರೈತರು ಹೆಚ್ಚಿನ ಬೆಲೆ ಸಿಗುವ ಭರವಸೆ ಹೊಂದಿದ್ದಾರೆ.
ಗದಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ರಾಜ್ಯದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ, ಹಲವು ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದಾಗಿ ಬೆಳೆಗಳಿಗೆ ಹಾನಿಯಾಗಿದೆ. ಆದ್ದರಿಂದ, ಚಿತ್ರದುರ್ಗದ ರೈತರು ಬೆಳೆದ ಈರುಳ್ಳಿಗೆ ಬೇಡಿಕೆ ಬರಲಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲು 60, 000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿತ್ತು. ಈಗ 8000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಬೇರೆಯವರ ಹೊಲವನ್ನು ಗುತ್ತಿಗೆಗೆ ಪಡೆದು ಬೆಳೆ ಬೆಳೆಯುವ ರೈತರು ಸಹ ಇದ್ದಾರೆ.
ದೇಶದಲ್ಲಿ ಈರುಳ್ಳಿ ಬೆಳೆಯುವುದರಲ್ಲಿ ಮಹಾರಾಷ್ಟ್ರಕ್ಕೆ ಅಗ್ರಸ್ಥಾನ. ಪುಣೆ, ನಾಸಿಕ್, ಸತಾರಾ ಭಾಗದಿಂದ ಪ್ರತಿವರ್ಷ ಕರ್ನಾಟಕಕ್ಕೆ ಹೆಚ್ಚಾಗಿ ಈರುಳ್ಳಿ ಬರುತ್ತದೆ. ಈ ಬಾರಿ ನೆರೆಯಿಂದಾಗಿ ಬೆಳೆ ನೆಲಕಚ್ಚಿದೆ. ಆದ್ದರಿಂದ, ಮಾರುಕಟ್ಟೆಗೆ ಬರುವ ಈರುಳ್ಳಿ ಗಣಣೀಯವಾಗಿ ಕಡಿಮೆಯಾಗಿದೆ.
ಪ್ರತಿ ವರ್ಷ ಕಷ್ಟಪಟ್ಟು ಬೆಳೆ ಬೆಳೆದರೂ ಚಿತ್ರದುರ್ಗ ಭಾಗದ ರೈತರು ನಷ್ಟ ಅನುಭಿಸುತ್ತಿದ್ದರು. ಈ ಬಾರಿ ಬೇರೆ ಜಿಲ್ಲೆಗಳಲ್ಲಿ ಬೆಳೆ ಇಲ್ಲದ ಕಾರಣ ಚಿತ್ರದುರ್ಗ ಭಾಗದಲ್ಲಿ ರೈತರು ಬೆಳೆದ ರೈತರು ಸಂತಸಗೊಂಡಿದ್ದಾರೆ.












Click it and Unblock the Notifications