ಚಿತ್ರದುರ್ಗ ಜಿಲ್ಲೆಗೆ 100 ಕಿ.ಮೀ. ದೂರದ ನಾನು ಬೇಕೇ? ಅಥವಾ 500 ಕಿ.ಮೀ. BJP ಅಭ್ಯರ್ಥಿ ಬೇಕೋ?: ಕೈ ಅಭ್ಯರ್ಥಿ ಪ್ರಶ್ನೆ
ಹಿರಿಯೂರು, ಏಪ್ರಿಲ್, 02: ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ 100 ಕಿಲೋ ಮೀಟರ್ ದೂರ ಇರುವ ಅಜ್ಜಂಪುರ ತಾಲ್ಲೂಕಿನ ನಾನು ಬೇಕೋ ಅಥವಾ 500 ಕಿಲೋ ಮೀಟರ್ ದೂರದಿಂದ ಬಂದು ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಬೇಕೋ? ಎಂಬುದನ್ನು ಮತದಾರರು ನಿರ್ಧರಿಸಲಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ (ಏಪ್ರಿಲ್ 02) ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ನನ್ನನ್ನು ಮೂಡಿಗೆರೆ ಚಂದ್ರಪ್ಪ ಎನ್ನುತ್ತಿದ್ದಾರೆ. ನಾನು ಹೊಸದುರ್ಗಕ್ಕೆ ಹೊಂದಿಕೊಂಡಿರುವ ಅಜ್ಜಂಪುರ ತಾಲ್ಲೂಕಿನವನು. ಭದ್ರಾ ಮೇಲ್ದಂಡೆ ಯೋಜನೆಯ ಕೆಳಭಾಗದ ಊರಿನಲ್ಲಿ ಹುಟ್ಟಿದವನು. ಚಿತ್ರದುರ್ಗ ಕ್ಷೇತ್ರಕ್ಕೆ ಬಿಜೆಪಿ ಪಕ್ಷ ಆಕಸ್ಮಿಕ ಅಭ್ಯರ್ಥಿಯನ್ನ ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿ ರಾಜಕೀಯ ಬದುಕು ಆರಂಭಿಸಿದ್ದ ಪ್ರದೇಶದ ಭಾಷೆ ಬೇರೆ, ಇಲ್ಲಿನ ಭಾಷೆ ಬೇರೆ. ಇಲ್ಲಿನ ಭಾಷೆ ಅವರಿಗೆ ಅರ್ಥ ಆಗುವುದಿಲ್ಲ. ಅವರಿಗೆ ಸಂಸದರಾಗುವ ಅರ್ಹತೆ ಇರಬಹುದು. ಆದರೆ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳ ಪರಿಚಯ ಬೇಕಲ್ಲವೇ? ಎಂದು ಚಂದ್ರಪ್ಪ ಪ್ರಶ್ನಿಸಿದರು.
ನಾನು ಹಿಂದಿನ 10 ವರ್ಷಗಳಿಂದ ನಿಮ್ಮ ಮನೆಯ ಮಗನಂತೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಬದುಕಿನಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲ. ಭ್ರಷ್ಟಾಚಾರ, ಜಾತಿ ತಾರತಮ್ಯ ಆರೋಪಗಳಿಲ್ಲದೆ ಆಡಳಿತ ನಡೆಸಿಕೊಂಡು ಬಂದಿದ್ದೇನೆ. ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸುತ್ತಿದ್ದು, ನಮ್ಮ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿರೋಧ ಪಕ್ಷದವರಿಗೆ ನಮ್ಮ ಶಕ್ತಿ ತೋರಿಸಬೇಕು ಎಂದು ಚಂದ್ರಪ್ಪ ಮನವಿ ಮಾಡಿದರು.
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ: ಈ ಬಾರಿ ಚುನಾವಣೆಯಲ್ಲಿ 375ರಿಂದ 400 ಸ್ಥಾನ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿಯವರು ಇದ್ದಾರೆ. ದೇಶದ ಮತದಾರರು ಅನಿರೀಕ್ಷಿತ ಫಲಿತಾಂಶ ನೀಡುವ ಮೂಲಕ ಇಂಡಿಯಾ ಒಕ್ಕೂಟಕ್ಕೆ ಅಧಿಕಾರ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಅತ್ಯಂತ ಜವಾಬ್ದಾರಿಯಿಂದ ಚುನಾವಣೆ ಎದುರಿಸುವ ಮೂಲಕ ನಮ್ಮ ಅಭ್ಯರ್ಥಿಯನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವಂತೆ ಶ್ರಮಿಸಬೇಕು. ಏಪ್ರಿಲ್ 5ರಿಂದ ಖಂಡೇನಹಳ್ಳಿ ಭಾಗದಿಂದ ತಾಲ್ಲೂಕಿನಲ್ಲಿ ಚುನಾವಣಾ ಪ್ರಚಾರ ಆರಂಭಿಸುತ್ತೇವೆ. ನಮ್ಮ ಪಕ್ಷ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳೇ ಮತ ಪಡೆಯಲು ನಮಗೆ ಶ್ರೀರಕ್ಷೆಯಾಗಿದ್ದು, ಯೋಜನೆಗಳ ಹೆಸರಿನಲ್ಲಿ ಮತ ಯಾಚಿಸೋಣ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಶೇಕಡಾ 76ರಷ್ಟು ಜನರು ನೆಮ್ಮದಿಯ ಬದುಕು ನಡೆಸುತ್ತಿರುವ ಬಗ್ಗೆ ಸಮೀಕ್ಷೆ ಮೂಲಕ ಸಿಎಂ ಮತ್ತು ಡಿಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ. ತಮ್ಮ ತಮ್ಮ ಬೂತುಗಳಲ್ಲಿನ ಸಫಲತೆ, ವಿಫಲತೆಗೆ ಮುಖಂಡರೇ ಹೊಣೆ ಆಗಬೇಕಾಗುತ್ತದೆ ಎಂದು ಸುಧಾಕರ್ ಎಚ್ಚರಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂವಿಧಾನ ಬದಲಾಯಿಸುವ ಮಾತನಾಡುತ್ತಾರೆ. ಹೀಗಾಗಿ ಸಂವಿಧಾನ ರಕ್ಷಣೆಗೆ ಮತದಾರರು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು. ವಿರೋಧ ಪಕ್ಷದವರು ಆರೋಪಿಸುವಂತೆ ರಾಜ್ಯದಲ್ಲಿ ಅಭಿವೃದ್ಧಿ ನಿಂತಿಲ್ಲ. ಜಿಲ್ಲೆಯಲ್ಲಿಯೂ ಅಭಿವೃದ್ಧಿಯ ಪರ್ವ ಮುಂದುವರೆದಿದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಬಿದ್ದಂತಹ ಮತಕ್ಕಿಂತ ಈ ಬಾರಿ ಹೆಚ್ಚಿನ ಮತಗಳನ್ನು ನಮ್ಮ ಅಭ್ಯರ್ಥಿಗೆ ಹಾಕಿಸಬೇಕು. ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು, ದಿವಂಗತ ಕೆ.ಎಚ್.ರಂಗನಾಥ್ ಅವರು ಕಾಂಗ್ರೆಸ್ ಪಕ್ಷದಿಂದ ಸಾಮಾನ್ಯ ಕ್ಷೇತ್ರದಲ್ಲಿ ನಿಂತು ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಗೆಲುವು ನಿಶ್ಚಿತವಾಗಿದ್ದು, ಯಾವುದೇ ಕಾರಣಕ್ಕೂ ಮೈಮರೆಯಬಾರದು ಎಂದು ಸಚಿವರು ಎಚ್ಚರಿಸಿದರು.
ಮಾಜಿ ಶಾಸಕ ಎವಿ. ಉಮಾಪತಿ, ಜಿಎಸ್ ಮಂಜುನಾಥ್, ಕೆಪಿಸಿಸಿ ಸದಸ್ಯ ವಿಜಯ ಕುಮಾರ್, ಡಿಟಿ ಶ್ರೀನಿವಾಸ್, ಜಿಲ್ಲಾಧ್ಯಕ್ಷ ತಾಜ್ ಪೀರ್ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಆರ್.ನಾಗೇಂದ್ರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ಎಸ್.ಆರ್.ತಿಪ್ಪೇಸ್ವಾಮಿ, ಕಲ್ಲಹಟ್ಟಿ ತಿಪ್ಪೇಸ್ವಾಮಿ, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಕಲ್ಲಹಟ್ಟಿ ಹರೀಶ್, ಬಿ.ಎನ್.ಪ್ರಕಾಶ್, ಶಿವರಂಜನಿ ಯಾದವ್ ಹಾಗೂ ನಗರಸಭೆ ಸದಸ್ಯರು, ನೂರಾರು ಮುಖಂಡರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications