ಆ ಒಂದೇ ಒಂದು ಕಾರಣಕ್ಕೆ ನಾನು ಜೈ ಶ್ರೀರಾಮ್ ಅನ್ನಲ್ಲ.. ಜೈ ಸೀತಾರಾಮ್ ಎಂದು ಹೇಳುತ್ತೇನೆ: ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ?
ಚಿತ್ರದುರ್ಗ, ಏಪ್ರಿಲ್, 04: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಅಲ್ಲದೆ ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇನ್ನು ಇಂದು (ಏಪ್ರಿಲ್ 04) ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಕಾರ್ಯಕ್ರಮದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
"ರಾಮ ಕುಟುಂಬಸ್ಥ, ಸೀತೆ, ಲಕ್ಷ್ಮಣ ಬಿಟ್ರು, ರಾಮ ಒಬ್ಬನಿಗೆ ದೇವಾಲಯ ಕಟ್ಟಿ, ಜೈ ಶ್ರೀರಾಮ್ ಅಂತಾ ಹೇಳುತ್ತಾರೆ. ಶ್ರೀರಾಮ, ಸೀತೆ ಎಲ್ಲರೂ ಒಂದೇ. ಅದಕ್ಕಾಗಿಯೇ ನಾನು ಹೇಳುತ್ತೇನೆ ಜೈ ಸೀತಾರಾಮ, ನಿವೆಲ್ಲರೂ ಸೀತಾರಾಮ ಎಂದು ಹೇಳಿ," ಎಂದು ಜನರಿಗೆ ಕರೆ ನೀಡಿದರು.

ಇನ್ನು ಅಮಿತ್ ಷಾ ಅವರನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಬರಗಾಲ ಇದೆ, ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡಲಾಗಿತ್ತು. ಡಿಸೆಂಬರ್ 23ರಂದು ಸಭೆ ನಡೆಸಿ ರಾಜ್ಯಕ್ಕೆ ಹಣ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದರು. ಆದರೆ ಎಂಟು ತಿಂಗಳು ಕಳೆದರೂ ಸಭೆ ನಡೆಸಲಿಲ್ಲ, ಹಣ ಬಿಡುಗಡೆ ಮಾಡಲಿಲ್ಲ. ನಾವು ರಾಜ್ಯಕ್ಕೆ 18,171 ಕೋಟಿ ಹಣ ಕೇಳಿದ್ದೇವೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ನಾವು ರೈತರಿಗೆ 33,2,500 ಸಾವಿರ ರೈತರಿಗೆ 2,000 ಹಣ ಕೊಟ್ಟಿದ್ದೇವೆ ಎಂದು ಹೇಳಿದರು.
ನಮ್ಮ ರಾಜ್ಯದಿಂದಲೇ ಅತಿ ಹೆಚ್ಚು ತೆರಿಗೆ ಹಣ ವಸೂಲಿ ಮಾಡಿಕೊಡಲಾಗುತ್ತದೆ. ನಮಗೇ ಅನ್ಯಾಯ ಮಾಡಿದರೇ ಹೇಗೆ ನಿರ್ಮಲಾ ಸೀತಾರಾಮನ್ ಅವರೇ? ಎಂದು ಪ್ರಶ್ನೆ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮತಕ್ಕಾಗಿ ಮೋದಿ ರೋಡ್ ಶೋ ಮಾಡ್ತಾರೆ. ದುಡ್ಡು ಕೊಟ್ಟು ಜನ ಕರೆದುಕೊಂಡು ಬರುತ್ತಾರೆ. 27 ಜನ ಸಂಸದರು ಇದ್ದರು. ರಾಜ್ಯದ ಬಗ್ಗೆ ಒಬ್ಬರು ಮಾತನಾಡಲಿಲ್ಲ. ಮೋದಿ ಕಂಡರೆ ಗಡಗಡ ಎಂದು ನಡುಗುತ್ತಾರೆ. ಇಂತಹವರನ್ನು ಯಾಕೆ ಪಾರ್ಲಿಮೆಂಟ್ಗೆ ಕಳುಹಿಸಬೇಕು. ರಾಜ್ಯದ 27 ಬಿಜೆಪಿ ಎಂಪಿಗಳು ಕೋಲೆ ಬಸವನ ರೀತಿ ಇದ್ದಾರೆ. ಎಲ್ಲದಕ್ಕೂ ಬರೀ ತಲೆ ಅಲ್ಲಾಡಿಸುತ್ತಾರೆ, ನಾರಾಯಣಸ್ವಾಮಿ ಮಾತಾಡಲಿಲ್ಲ, ಗೋವಿಂದ ಕಾರಜೋಳ ಮಾತನಾಡಲಿಲ್ಲ ಎಂದು ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಬಿಜೆಪಿ ವಿರುದ್ಧ ಮಾತನಾಡಿದವರನ್ನು ಹೆದರಿಸುತ್ತಾರೆ. ಹಾಗೆಯೇ ಕೆ.ಎಸ್.ಈಶ್ವರಪ್ಪ ಪಕ್ಷೇತರವಾಗಿ ನಿಂತರೆ ಅವರಿಗೆ ಇ.ಡಿ ಬಿಟ್ಟು ಹೆದರಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದರು.












Click it and Unblock the Notifications