ನಮ್ಮ ಮನಸ್ಸನ್ನೇ ನಾವು ಗೆಲ್ಲುವುದು ಸುಲಭದ ಮಾತಲ್ಲ..ಆದರೂ ಪ್ರಯತ್ನಿಸೋಣ!
ಮನಸ್ಸನ್ನು ಗೆದ್ದವನು ಎಲ್ಲವನ್ನೂ ಗೆದ್ದಂತೆ ಎಂಬ ಮಾತು ಅಧ್ಯಾತ್ಮದಲ್ಲಿದೆ. ಇದು ನಿಜವೂ ಹೌದು. ಒಂದು ಕ್ಷಣ ಯೋಚಿಸಿದರೆ ಎಷ್ಟೋ ಸಂದರ್ಭಗಳಲ್ಲಿ ನಮ್ಮೆಲ್ಲ ಕಷ್ಟಗಳಿಗೆ ಮನಸ್ಸೇ ಕಾರಣವಾಗಿರುತ್ತದೆ ಜೊತೆಗೆ ಅದೆಷ್ಟೋ ಸಲ ನಾವು ಮಾಡಬಾರದೆಂದು ಕೊಂಡಿದ್ದೆಲ್ಲವನ್ನೂ ಮನಸ್ಸು ಮಾಡಿಸಿ ಅನಾಹುತಕ್ಕೆ ತಳ್ಳಿಬಿಟ್ಟಿರುತ್ತದೆ. ಹೀಗಾಗಿಯೇ ಆಧ್ಯಾತ್ಮ ಚಿಂತಕರು ಮನೋನಿಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಮನೋನಿಗ್ರಹ ಕಷ್ಟದ ಕೆಲಸವೇ ಆದರೂ ಕೆಲವು ಕ್ರಮಬದ್ಧ ವಿಧಾನಗಳಿಂದ ಸುಲಭವಾಗಿಸಬಹುದು ಎಂಬುದನ್ನು ಸಾಧಕರು ತೋರಿಸಿಕೊಟ್ಟಿದ್ದಾರೆ. ಶ್ರೀಕೃಷ್ಣ ಮನೋನಿಗ್ರಹದ ಬಗ್ಗೆ 'ಅಭ್ಯಾಸ' ಮತ್ತು 'ವೈರಾಗ್ಯ' ಎಂಬ ಎರಡು ಮಾತುಗಳಲ್ಲಿ ಹೇಳಿದ್ದಾನೆ. ಈ ಎರಡನ್ನೂ ನಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ಮನೋನಿಗ್ರಹ ಸುಲಭವಾಗಬಹುದು. ಮನೋನಿಗ್ರಹಕ್ಕೆ ಅಗತ್ಯವಾದ ದೃಢವಾದ ಸಂಕಲ್ಪ ಶಕ್ತಿಯನ್ನು ವರ್ಧಿಸಿಕೊಳ್ಳಬೇಕು. ಅಲ್ಲದೆ ಅದಕ್ಕೆ ತಕ್ಕಂತಹ ಕೆಲವು ತಂತ್ರಗಳನ್ನು ತಿಳಿದು ಅದನ್ನು ಮುಂದುವರೆಸಬೇಕಾಗುತ್ತದೆ.

ನಮ್ಮ ಮನಸ್ಸನ್ನು ನಿಯಂತ್ರಿಸುವ ಮುನ್ನ ಆ ಕಾರ್ಯವನ್ನು ಅನವಶ್ಯಕವಾದ ಕಷ್ಟವನ್ನಾಗಿ ಮಾಡಿಕೊಳ್ಳದಿರುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಮನೋನಿಗ್ರಹ ಎಂಬುವುದು ಒಂದು ವೈಯಕ್ತಿಕವಾದ ಸಮಸ್ಯೆಯಾಗಿದ್ದು, ಮನೋನಿಗ್ರಹದ ಉದ್ದೇಶ ನಾವು ದೈವತ್ವದೊಂದಿಗೆ ಸಂಪೂರ್ಣವಾಗಿ ಐಕ್ಯವಾಗುವುದಾಗಿದೆ. ಇದಕ್ಕಾಗಿ ನಾವು ಏನು ಮಾಡಿದರೂ ಸಾಲದು. ಮನಸ್ಸಿನ ನಿಗ್ರಹ ಮತ್ತು ಅದಕ್ಕೆ ತಕ್ಕಂತಹ ಅಭ್ಯಾಸಗಳನ್ನು ಕೈಗೊಳ್ಳಬೇಕಾದರೆ ನಮ್ಮ ಮನಸ್ಸಿನ ವಾತಾವರಣವು ಇದಕ್ಕೆ ಅನುಕೂಲವಾಗಿರುವಂತೆ ನೋಡಿಕೊಳ್ಳಬೇಕು.
ಮನೋನಿಗ್ರಹಕ್ಕೆ ಆಂತರಿಕ ಶಿಸ್ತು ಅಗತ್ಯ
ಮನೋನಿಗ್ರಹಕ್ಕೆ ಹೊರಡುವವರು ಎರಡು ಬಗೆಯ ಆಂತರಿಕ ಶಿಸ್ತುಗಳನ್ನು ರೂಢಿಸಿಕೊಳ್ಳಲೇ ಬೇಕು. ಒಂದು ಮನಸ್ಸನ್ನು ಸರಿಯಾದ ದಾರಿಯಲ್ಲಿ ನಿರ್ದೇಶಿಸಿಸುವುದು, ಇನ್ನೊಂದು ಎಂತಹ ತುರ್ತು ಪರಿಸ್ಥಿತಿಗಳಲ್ಲಿಯೂ ನಮ್ಮನ್ನು ನಾವು ಕಾಯ್ದುಕೊಳ್ಳುವುದು. ಮನಸ್ಸು ಪರಿಶುದ್ಧವಾದಷ್ಟು ಅದರ ನಿಯಂತ್ರಣ ಸುಲಭ. ಆದ ಕಾರಣ ಮನಸ್ಸಿನ ಶುದ್ಧೀಕರಣಕ್ಕೆ ಅಗತ್ಯವಾದ ಅಭ್ಯಾಸಗಳನ್ನು ನಾವು ಕೈಗೊಳ್ಳಬೇಕು.

ಅಧಿಕೃತವಾಗಿ ನಿರೂಪಿತವಾಗಿರುವ ವಿಧಾನಗಳ ಮೂಲಕ ನಮ್ಮ ಸ್ವಭಾವದಲ್ಲಿ ಸತ್ವವನ್ನು ಹೆಚ್ಚಿಸುತ್ತಾ ನಂತರ ಶುದ್ಧೀಕರಿಸುತ್ತಾ ಅದನ್ನು ಮೀರಿ ನಡೆಯಬೇಕಾಗುತ್ತದೆ. ಕೆಲವು ಶಿಸ್ತುಗಳ ಪರಿಣಾಮಕಾರಿಯಾದ ಅನುಸರಣೆಗೆ ಪೂರಕವಾಗ ಬಲ್ಲ ಹಲವು ವಿಧಾನಗಳ ಕಡೆಗೆ ನಾವು ಹೆಚ್ಚು ಗಮನ ನೀಡುವುದನ್ನು ಮರೆಯಬಾರದು.
ಆರೋಗ್ಯಕರ ಹವ್ಯಾಸ ಅಗತ್ಯ
ಈ ವಿಧಾನಗಳು ಯಾವುಗಳೆಂದರೆ ಮನಸ್ಸನ್ನು ಆರೋಗ್ಯಕರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅದು ಹಾದಿ ತಪ್ಪದಂತೆ ನೋಡಿಕೊಳ್ಳುವುದು. ನಿರಂತರ ಧ್ಯಾನದಿಂದ ಮನೋನಿಗ್ರಹಕ್ಕೆ ಮತ್ತು ಮನೋನಿಗ್ರಹದಿಂದ ಧ್ಯಾನಕ್ಕೆ ಸಹಾಯ ಒದಗುತ್ತದೆ. ಅಂತರಂಗದ ಅಸ್ಪೋಟಕ ಸಂದರ್ಭಗಳಲ್ಲಿ ಪ್ರಬಲವಾದ ನಿರೋಧಕಗಳನ್ನು ಅಳವಡಿಸಬೇಕಾಗುತ್ತದೆ.
ಇದು ಯಾವುದೆಂದರೆ ಭಾವನೆಗಳನ್ನು ಎದುರೊಡ್ಡುವುದು, ನಿರಂತರ ನಾಮ ಜಪ ಮಾಡುವುದು ಮತ್ತು ಭಗವಂತನಲ್ಲಿ ಶರಣು ಹೋಗುವುದೇ ಆಗಿದೆ. ಮನಸ್ಸಿನೊಳಗಿರುವ ಆಲೋಚನೆಗಳನ್ನು ಕ್ರಮಬದ್ಧವಾಗಿ ನಿಯಂತ್ರಣಕ್ಕೆ ತರುವುದು ಇಲ್ಲಿ ಮುಖ್ಯವಾಗಿದೆ.
ದೇವರಲ್ಲಿ ನಂಬಿಕೆಯಿದ್ದರೆ ಸಾಧ್ಯ
ಸುಪ್ತಪ್ರಜ್ಞೆಯನ್ನು ನಮ್ಮ ಅಂಕೆಯಲ್ಲಿಟ್ಟುಕೊಳ್ಳದೆ ಹೋದಲ್ಲಿ ಮನಸ್ಸನ್ನು ನಿಯಂತ್ರಿಸುವುದು ಅಸಾಧ್ಯವೇ.. ಪವಿತ್ರವಾದ ವಿಚಾರಗಳನ್ನು ಮನಸ್ಸಿನೊಳಗೆ ತುಂಬುತ್ತಾ ಭಕ್ತಿ ಮಾರ್ಗವೂ ಸೇರಿದಂತೆ ಪ್ರಾಣಾಯಾಮ ಮೊದಲಾದ ಅಭ್ಯಾಸಗಳನ್ನು ಅನುಸರಿಸುತ್ತಾ ನಮ್ಮ ಸುಪ್ತ ಪ್ರಜ್ಞೆಯನ್ನು ನಿಯಂತ್ರಿಸಬಹುದು. ಇದರಿಂದ ವ್ಯಕ್ತಿಯೊಳಗಿರುವ ಸುಪ್ತ ಕುಂಡಲಿನಿ ಶಕ್ತಿಯು ಜಾಗೃತವಾಗುತ್ತದೆ.
ನಮ್ಮ ಮನಸ್ಸಿನಲ್ಲಿ ಕೆಟ್ಟ ಕಲ್ಪನೆಗಳನ್ನು ಕಟ್ಟದೆ ಬದುಕಿನ ಒಂದೊಂದು ಕ್ಷಣದಲ್ಲಿಯೂ ನೈತಿಕವಾಗಿ ಬದುಕು ಕಾಣುತ್ತಾ ಮುಂದಿನ ಎಲ್ಲ ಕ್ಷಣಗಳಲ್ಲಿಯೂ ಎಲ್ಲ ಬಗೆಯ ಅಪಾಯಗಳ ಸಾಧ್ಯತೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ದೇವರಲ್ಲಿ ನಂಬಿಕೆಯಿರುವವರು ಮನಸ್ಸನ್ನು ನಿಗ್ರಹಿಸಲು ಸುಲಭವಾಗಿ ಯಶಸ್ವಿಯಾಗಬಲ್ಲರು. ಆದುದರಿಂದ ದೇವ ಸ್ಮರಣೆಯ ಮೂಲಕ ಮನಸ್ಸನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ ಎಂಬುದನ್ನು ಆಧ್ಯಾತ್ಮಿಕ ಚಿಂತಕರು ಹೇಳಿದ್ದಾರೆ.












Click it and Unblock the Notifications