ಡಿ.03 ಸಂಧಾನ ಸಭೆ: ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆ ಕೈಬಿಡಲು ಮನವಿ
ನವದೆಹಲಿ, ನವೆಂಬರ್.27: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ದೆಹಲಿ ಚಲೋ ಹೋರಾಟವನ್ನು ಕೈಬಿಡುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿಕೊಂಡಿದ್ದಾರೆ.
ಮುಂದಿನ ವಾರದಲ್ಲಿ ಕೃಷಿ ಸಂಬಂಧಿತ ಕಾಯ್ದೆ ಸಂಬಂಧ ರೈತರ ಜೊತೆಗೆ ಸಂಧಾನ ಸಭೆ ನಡೆಸಲಾಗುತ್ತದೆ. ಕೇಂದ್ರ ಸರ್ಕಾರ ರೈತರ ಜೊತೆಗೆ ಚರ್ಚಿಸುವುದಕ್ಕೆ ಯಾವಾಗಲೂ ಸಿದ್ಧವಾಗಿದ್ದು, ಡಿಸೆಂಬರ್.03 ರಂದು ರೈತರೊಂದಿಗಿನ ಸಭೆ ಕರೆಯಲಾಗುವುದು.
ರೈತರ ಪ್ರತಿಭಟನೆ, ಅಶ್ರುವಾಯು ಪ್ರಯೋಗ, ದೆಹಲಿ ಗಡಿಯಲ್ಲಿ ಸ್ಥಿತಿ ಉದ್ವಿಗ್ನ
ರೈತ ಸಂಘಟನೆಗಳನ್ನು ಮತ್ತೊಂದು ಸುತ್ತಿನ ಶಾಂತಿ ಮಾತುಕತೆಗೆ ಆಹ್ವಾನಿಸಲಾಗುತ್ತದೆ. ಚಳಿಗಾಲದ ನಡುವೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಪ್ರಭಾವ ಹೆಚ್ಚಾಗುತ್ತಿರುವ ಹಿನ್ನೆಲೆ ಜಾಗೃತಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿಕೊಂಡಿದ್ದಾರೆ.
ದೆಹಲಿಯಲ್ಲಿ ರೈತರ ಹೋರಾಟದ ಕಿಚ್ಚು:
ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಶುಕ್ರವಾರ ಬೆಳಗ್ಗೆ ನವದೆಹಲಿ ಮತ್ತು ಹರಿಯಾಣ ಗಡಿಯ ಸಿಂಘು ಗಡಿ ಪ್ರದೇಶದಲ್ಲಿ ಪ್ರತಿಭಟನೆಗೆ ಮುಂದಾದ ರೈತರನ್ನು ನಿಯಂತ್ರಿಸಲು ಮತ್ತು ಚದುರಿಸಲು ಪೊಲೀಸರು ಅಶ್ವವಾಯು ಪ್ರಯೋಗಿಸಿದರು. ದೆಹಲಿ-ಹರಿಯಾಣ ಗಡಿಯಲ್ಲಿ ಮರಳು ತುಂಬಿದ ಲಾರಿ, ಮುಳ್ಳಿನ ತಂತಿಯಿಂದ ಹಾಕಿರುವ ಬೇಲಿ ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.
ನವದೆಹಲಿಗೆ ಪಂಜಾಬ್ ನಿಂದಲೂ ಆಗಮಿಸುತ್ತಿರುವ ಪ್ರತಿಭಟನಾನಿರತ ರೈತರನ್ನು ನಿಯಂತ್ರಿಸುವುದಕ್ಕೆ ಶಿಸ್ತುಕ್ರಮ ತೆಗೆದುಕೊಳ್ಳಲಾಗಿದ್ದು, ಗಡಿ ಪ್ರದೇಶಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ದಹೆಲಿ ಪ್ರವೇಶಿಸಲು ಇರುವ ಫರಿದಾಬಾದ್ ಮತ್ತು ಗುರುಗಾವ್ ಗಡಿಗಳಲ್ಲೂ ಭದ್ರತೆ ಸಿಬ್ಬಂದಿ ನಿಯೋಜಿಸಲಾಗಿತ್ತು.
ರೈತರನ್ನು ಕಂಗೆಡಿಸಿದ ಕೃಷಿ ಸಂಬಂಧಿತ ಕಾಯ್ದೆಗಳು:
ಕಳೆದ ಸಪ್ಟೆಂಬರ್.27ರಂದು ಕೇಂದ್ರ ಸರ್ಕಾರವು ಮೂರು ಕೃಷಿ ಸಂಬಂಧಿತ ಕಾಯ್ದೆಗಳ ಜಾರಿಗೊಳಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದರು. ರೈತರ ಆಕ್ರೋಶಕ್ಕೆ ಕಾರಣವಾಗಿರುವ ಮತ್ತು ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಆ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ
2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ