ಕೇರಳ, ಮಡಿಕೇರಿ ಪ್ರವಾಸ ಕೈಗೊಳ್ಳುವವರಿಗೆ ಸಿಹಿಸುದ್ದಿ ನೀಡಿದ ಮಂಗಳೂರು ವಿಭಾಗದ KSRTC
ಮಂಗಳೂರು, ಡಿಸೆಂಬರ್, 25: ಇನ್ನೇನು 2022ರ ಕಾಲಘಟ್ಟ ಮುಗಿಯುವ ಹಂತದಲ್ಲಿದ್ದು, ಜನರು, ಯುವಕರು 2023ರ ಹೊಸವರ್ಷದ ಗುಂಗಿನಲ್ಲಿದ್ದಾರೆ. ಅದರಲ್ಲೂ ಡಿಸೆಂಬರ್ ತಿಂಗಳಿನಲ್ಲಿ ಶಾಲಾ, ಕಾಲೇಜುಗಳು, ಖಾಸಗಿ ಕಂಪನಿಗಳಿಗೆ ಸಾಲು ರಜೆಗಳಿರುವುದರಿಂದ, ತಮ್ಮ ಕುಟುಂಬಗಳ ಜೊತೆ ಪ್ರೇಕ್ಷಣಿಯ ಸ್ಥಳಗಳು, ದೇವಸ್ಥಾನಗಳಿಗೆ ತೆರಳುವವವರೇ ಹೆಚ್ಚಿದ್ದಾರೆ. ಆದ್ದರಿಂದ ಮಂಗಳೂರು ಕೆಎಸ್ಆರ್ಟಿಸಿ ವಿಭಾಗದಿಂದ ಕೇರಳ ಪ್ರವಾಸ ಪ್ಯಾಕೇಜ್, ಹಾಗೂ ಮಡಿಕೇರಿ ಪ್ಯಾಕೇಜ್ ಪ್ರವಾಸ ಕಾರ್ಯಾಚರಣೆಯನ್ನು ಡಿಸೆಂಬರ್ 31ರವರೆಗೆ ನಡೆಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಟೂರ್ ಪ್ಯಾಕೇಜ್ ವಿವರ ಇಲ್ಲಿದೆ
ಮಂಗಳೂರು ಬಸ್ ನಿಲ್ದಾಣದಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬೆಳಗ್ಗೆ 8 ರಿಂದ 10ರವರೆಗೆ, ಕುಂಬ್ಳೆ ಶ್ರೀ ಅನಂತಪದ್ಮನಾಭ ದೇವಸ್ಥಾನ ಬೆಳಗ್ಗೆ 10.15 ರಿಂದ 11ರವರೆಗೆ, ಮಧೂರು ಶ್ರೀ ಮದನಂತೇಶ್ವರ, ಗಣಪತಿ ದೇವಸ್ಥಾನ 11.15 ರಿಂದ 12 ರವರೆಗೆ, ಮಲ್ಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ 12.30ರಿಂದ 1.30ರ ವರೆಗೆ, ನಂತರ ಕಾಂಞಗಾಡ್ ನಿತ್ಯಾನಂದ ಆಶ್ರಮ ಮಧ್ಯಾಹ್ನ 3 ರಿಂದ 4ರ ವರೆಗೆ, ಬೇಕಲ್ ಫೋರ್ಟ್ ಬೀಚ್ 4:15ರಿಂದ ಸಂಜೆ 6ರ ವರೆಗೆ ಪ್ರವಾಸ ಮಾಡಬಹುದಾಗಿದೆ. ಮತ್ತೆ ಕೆಎಸ್ಆರ್ಟಿಸಿ ಬಸ್ ರಾತ್ರಿ 8 ಗಂಟೆಗೆ ಮಂಗಳೂರು ಬಸ್ ನಿಲ್ದಾಣ ತಲುಪಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಕ್ರಿಸ್ಮಸ್: ಡಿಸೆಂಬರ್ 21ರಿಂದ ಮಂಗಳೂರು ಜಂಕ್ಷನ್- ಗುಜರಾತ್ ಉಧ್ನಾ ನಡುವೆ ವಿಶೇಷ ರೈಲು, ವೇಳಾಪಟ್ಟಿ ಇಲ್ಲಿದೆ
ಟಿಕೆಟ್ ದರದ ಸಂಪೂರ್ಣ ವಿವರ
ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರವನ್ನು ನೋಡುವುದಾದರೆ, ವಯಸ್ಕರಿಗೆ 750 ರೂಪಾಯಿ ಇರುತ್ತದೆ. ಇದರಲ್ಲಿ ಕೇರಳದ ಬಾರ್ಡರ್ ಟ್ಯಾಕ್ಸ್ 310 ರೂಪಾಯಿ ಹಾಗೂ ಟೋಲ್ ದರ 10 ರೂಪಾಯಿ ಕೂಡ ಇಳಗೊಂಡಿರುತ್ತದೆ. ಹಾಗೆಯೇ ಮಕ್ಕಳಿಗೆ 700 ರೂಪಾಯಿ ಇರುತ್ತದೆ. ಅದರಲ್ಲೂ 6 ವರ್ಷದಿಂದ 12 ವರ್ಷದ ಮಕ್ಕಳಿಗೆ ಈ ದರವನ್ನು ನಿಗದಿಪಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಬಸ್ ತಲುಪುವ ಮಾರ್ಗಗಳು
ಮಂಗಳೂರಿನಿಂದ ಬೆಳಗ್ಗೆ 7 ಕ್ಕೆ ಹೊರಟು ಪುತ್ತೂರು, ಸುಳ್ಯ ಮಾರ್ಗವಾಗಿ ಬೆಳಗ್ಗೆ 11ಕ್ಕೆ ಮಡಿಕೇರಿ ರಾಜಾಸೀಟ್ ತಲುಪುತ್ತದೆ. ಮಧ್ಯಾಹ್ನ 2:30 ರಿಂದ 3:15ರ ವರೆಗೆ ಅಬ್ಬಿಫಾಲ್ಸ್, ಸಂಜೆ 4:30 ರಿಂದ 4:45ರ ವರೆಗೆ ನಿಸರ್ಗಧಾಮ, ಸಂಜೆ 5:15 ರಿಂದ 5:30ರ ವರೆಗೆ ಗೋಲ್ಡನ್ ಟೆಂಪಲ್, ಹಾರಂಗಿ ಡ್ಯಾಮ್, ನಂತರ ಸಂಜೆ 6:15ಕ್ಕೆ ಹಾರಂಗಿ ಡ್ಯಾಮ್ನಿಂದ ಹೊರಟು ರಾತ್ರಿ 10:30ಕ್ಕೆ ಮಂಗಳೂರು ತಲುಪಲಿದೆ. ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರವನ್ನು ನೋಡುವುದಾದರೆ, ವಯಸ್ಕರಿಗೆ 500 ರೂಪಾಯಿ ಹಾಗೂ ಮಕ್ಕಳಿಗೆ 450 ರೂಪಾಯಿ ನಿಗದಿಪಡಿಸಲಾಗಿದ್ದು, ಇದು 6 ವರ್ಷದಿಂದ 12 ವರ್ಷದ ಮಕ್ಕಳಿಗೆ ಮಾತ್ರ ಅನ್ವಯವಾಗಿರುತ್ತದೆ. ಪ್ಯಾಕೇಜ್ ಪ್ರವಾಸಕ್ಕೆ www.ksrtc.in ಅಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು KSRTC ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಮಾಹಿತಿ ನೀಡಿದ್ದಾರೆ.