ವಿಡಿಯೋ : ಏಕೆಂದ್ರೆ, ಮಾನವ ಜನ್ಮ ದೇವರು ಕೊಟ್ಟ ವರ!
ಜೀವನದಲ್ಲಿ ಸೋತು ಇನ್ನೇನು ನನ್ನ ಲೈಫ್ ಇಷ್ಟೇನೆ ಅಂತಾ ಕೊರಗುವ, ಜೀವನದಲ್ಲಿ ಗೆದ್ದು ನನ್ನಂತೆ ಯಾರು ಇಲ್ಲ ಅಂತ ಮೆರಗುವ ಜನರಿಗೆ ಏನು ಕಡಿಮೆ ಇಲ್ಲ ಇಂದಿನ ಈ ಜಗದಲ್ಲಿ.. ಅಲ್ವಾ?
ಸೋಲು - ಗೆಲುವು ಎಲ್ಲರ ಬಾಳಲ್ಲೂ ಇದ್ದದ್ದೇ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೇ, ನೀ ಮುನ್ನುಗ್ಗು ಜೀವನದಲ್ಲಿ..." ಯಾಕೆಂದರೆ, ಈ ಮಾನವ ಜನ್ಮ.. ದೇವರು ಕೊಟ್ಟ ವರ!
ಇಂಥದೊಂದು ಉತ್ತಮ ಸಂದೇಶವನ್ನು ಸಾರುವ ಒಂದು ಸುಂದರ ಕನ್ನಡ ವಿಡಿಯೋ ಹಾಡು "ಮಾನವ ಜನುಮ" - ಭಾರತದ ಟೆಕ್ಕಿಗಳಿಗೆ ಪಕ್ಕದೂರಂತಿರುವ ಅಮೆರಿಕಾದಲ್ಲಿ ಇತ್ತೀಚಿಗೆ ಬಿಡುಗಡೆಯಾಯಿತು.
ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗ ನಾಗರಾಜ್ ಎಂ ತಮ್ಮ ಸಂಗಡಿಗರೊಂದಿಗೆ ಸೇರಿ "ಸಿಹಿ-ಇಂಚರ" ಎಂಬ ತಂಡವೊಂದನ್ನು ರಚಿಸಿ ಈ ಸುಂದರ ವಿಡಿಯೋ ಹಾಡನ್ನು ನಿರ್ಮಿಸಿದ್ದಾರೆ.

ಸಂಗೀತ : ಸೂರ್ಯ ಪ್ರಕಾಶ್
ಹಿನ್ನೆಲೆ ಗಾಯನ : ಚೇತನ್ ನಾಯಕ್
ಸಾಹಿತ್ಯ, ನಿರ್ಮಾಣ, ನಿರ್ದೇಶನ : ನಾಗರಾಜ್ ಎಂ
ನಾಗರಾಜ್ ಎಂ ಕಿರು ಪರಿಚಯ
ಹುಟ್ಟಿ ಬೆಳೆದಿದ್ದು ಒಂದು ಕಾಲದಲ್ಲಿ ಜವಳಿ ಕೈಗಾರಿಕೆಗೆ ಪ್ರಸಿದ್ಧಿಯಾಗಿದ್ದ ಬೆಣ್ಣೆ ದೋಸೆಯ ಊರು ದಾವಣಗೆರೆಯಲ್ಲಿ! ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದು ಈಗ ಉತ್ತರ ಅಮೆರಿಕಾದ ನಾರ್ತ್ ಕರೋಲಿನಾ ರಾಜ್ಯದಲ್ಲಿ ನೆಲೆಸಿರುವ ನಾಗರಾಜ್ ಅವರು ಕನ್ನಡ ಕೂಟದ ಸಕ್ರಿಯ ಕಾರ್ಯಕರ್ತರು.
ಮೊದಲಿನಿಂದಲೂ ಕನ್ನಡದ ಅಭಿಮಾನಿಯಾದ ನಾಗರಾಜ್ ಅವರಿಗೆ ಕಥೆ-ಕವನ ಬರೆಯುವುದರಲ್ಲಿ ಆಸಕ್ತಿ ಮೂಡಿದ್ದು ನ್ಯೂಜೆರ್ಸಿಯಲ್ಲಿ ನಡೆದ ಅಕ್ಕ-2010 ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ , ಅಲ್ಲಿಗೆ ಬಂದಿದ್ದ ಕವಿಗಳು-ಸಾಹಿತಿಗಳನ್ನು ಭೇಟಿ ಮಾಡಿದ ನಂತರ!
ಇದುವರೆಗೂ ಹತ್ತು-ಹಲವಾರು ಸಣ್ಣ ಕಥೆಗಳು, ಹನಿಗವನಗಳು, ನಾಟಕ, ಲೇಖನಗಳನ್ನು ಬರೆದು, ಹವ್ಯಾಸಿ ಛಾಯಾಚಿತ್ರಕಾರರೂ ಸಹಾ ಆಗಿರುವ ನಾಗರಾಜ್, ತಮ್ಮದೇ ಆದ "ಸಿಹಿ-ಇಂಚರ" ತಂಡವನ್ನು ಕಟ್ಟಿ ಇದುವರೆಗೂ ಹಲವಾರು ಸುಂದರವಾದ ಕನ್ನಡ ವಿಡಿಯೋ ಆಲ್ಬಮ್ ಹಾಡುಗಳನ್ನು ರಚಿಸಿದ್ದಾರೆ.
ಕನ್ನಡದ ಕಂಪನ್ನು ಹೆಚ್ಚಿಸುತ್ತಿರುವ ಇವರಿಂದ ಇನ್ನು ಮುಂದೆಯೂ ಇದೇ ರೀತಿ ಇನ್ನೂ ಹೆಚ್ಚು ಹೆಚ್ಚು ಕಥೆ-ಕವನ-ಹಾಡುಗಳು-ಛಾಯಾಚಿತ್ರಗಳು ಮೂಡಿ ಬರಲಿ, ಕನ್ನಡ ಹಿರಿಮೆ ಎಲ್ಲೆಡೆ ಹೆಚ್ಚಾಗಿ ಹರಡಲಿ.
ನೋಡಿ ಆನಂದಿಸಿ ಈ ಸುಂದರ ವಿಡಿಯೋ ಹಾಡನ್ನು, ಗೆಳೆಯರೊಂದಿಗೆ ಶೇರ್ ಮಾಡಿ ಇಷ್ಟ ಆದ್ರೆ!












Click it and Unblock the Notifications