RSS ಐಡಿಯಾಲಜಿ ಇರೋರನ್ನ ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲ್ಲ: ಸಿದ್ದು
ಶಿವಮೊಗ್ಗ, ಜನವರಿ 06: ಕಾಂಗ್ರೆಸ್ ಗೆ ಬರಲು ಇತರೆ ಹಲವು ಶಾಸಕರು ಸಿದ್ಧರಿದ್ದಾರೆ. ಆದರೆ, ಆರ್ ಎಸ್ ಎಸ್ ಐಡಿಯಾಲಜಿ ಹಿನ್ನಲೆ ಇರುವವರಿಗೆ ಸ್ವಾಗತ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡ್ಡಿಮುರಿದಂತೆ ಹೇಳಿದರು.
ಶನಿವಾರ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆಯುತ್ತಿರುವ ನವ ಕರ್ನಾಟಕ ನಿರ್ಮಾಣ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, "ಮುಂದಿನ ವಿಧಾನಸಭೆಗೆ ಇತರೆ ಪಕ್ಷಗಳಿಂದ ಕಾಂಗ್ರೆಸ್ ಗೆ ಬರಲು ಸಿದ್ಧರಿದ್ದಾರೆ. ಆದರೆ, ಅವರನ್ನು ಆರ್ ಎಸ್ ಎಸ್ ಐಡಿಯಾಲಜಿ ಇದ್ದರೆ ಸೇರಿಸಿಕೊಳ್ಳುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
ಇನ್ನು ಗೌರಿ ಹತ್ಯೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಗೌರಿ ಹಂತಕರ ಬಗ್ಗೆ ಸುಳಿವು ಸಿಕ್ಕಿದೆ. ಪೂರ್ಣ ಮಾಹಿತಿ, ಸಾಕ್ಷ್ಯಾಧಾರಗಳು ಸಿಕ್ಕ ಬಳಿಕ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಗೌರಿ ಹತ್ಯೆ ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಹಲವು ದಿನಗಳಿಂದದಲೂ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳುತ್ತಾ ಬಂದಿದ್ದಾರೆ. ಆದರೆ ಇದುವರೆಗೆ ಯಾವೊಬ್ಬ ಆರೋಪಿಗಳನ್ನು ಬಂಧಿಸಿಲ್ಲ.