ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದೇನು?
ರಾಮನಗರ, ಜುಲೈ 26: "ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುತ್ತಿದ್ದಾರೆ. ಪೂರ್ಣಾವಧಿಯಾಗಿ ಬಿಜೆಪಿಯು ರಾಜ್ಯದಲ್ಲಿ ಸುಭದ್ರ ಆಡಳಿತ ನಡೆಸಲಿದೆ" ಎಂದು ಸೊರಬ ಕ್ಷೇತ್ರಕ್ಕೆ ಆಯ್ಕೆಯಾಗಿರುವ ಬಿಜೆಪಿಯ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. "ಸರಕಾರ ರಚನೆಗೆ ಕೆಲ ತಾಂತ್ರಿಕ ಅಡೆತಡೆಗಳಿವೆ. ಆದಷ್ಟು ಬೇಗ ಅವೆಲ್ಲವೂ ಬಗೆಹರಿಯಲಿವೆ. ಸರಕಾರ ನಡೆಸುವ ಸಂಖ್ಯಾಬಲ ನಮಗೆ ಇದೆ" ಎಂದು ಅವರು ತಿಳಿಸಿದರು.
"ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನನ್ನ ತಂದೆಯವರು ರಾಜ್ಯದ ಸಿಎಂ ಆಗಿದ್ದರು. ಇದೀಗ ನಮ್ಮ ಜಿಲ್ಲೆಯ ನಾಯಕರಾದ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗುತ್ತಿದ್ದಾರೆ. ಹಾಗಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ" ಎಂದು ಹೇಳಿದರು.

ಇನ್ನು ಬಿಜೆಪಿಯು ಜೆಡಿಎಸ್ ಪಕ್ಷದ ಜತೆಗೆ ಮೈತ್ರಿಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರ್ ಬಂಗಾರಪ್ಪ, ಅವೆಲ್ಲವೂ ಸತ್ಯಕ್ಕೆ ದೂರವಾದ ವಿಚಾರ. ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಶಾಸಕ ಕುಮಾರ್ ಬಂಗಾರಪ್ಪ ಮೈತ್ರಿ ವಿಚಾರವನ್ನು ತಳ್ಳಿ ಹಾಕಿದರು.











Click it and Unblock the Notifications