ಎಫ್ ಟಿಐಐ: ಉಪವಾಸ ನಿರತ ಮೂವರಲ್ಲಿ ಒಬ್ಬ ಅಸ್ವಸ್ಥ
ಪುಣೆ, ಸೆಪ್ಟೆಂಬರ್, 12 : ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ(ಎಫ್ ಟಿಐಐ)ನ ನಿರ್ದೇಶಕ ಗಜೇಂದ್ರ ಚೌಹಾಣ್ ವಜಾಗೊಳಿಸಲು ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಕೈಗೊಂಡ ವಿದ್ಯಾರ್ಥಿಗಳಲ್ಲಿ ಒಬ್ಬನನ್ನು ಪುಣೆಯ ಜೋಶಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಫ್ ಟಿಐಐ ಸಂಸ್ಥೆಯ ಹಿಲಾಲ್ ಸವಾದ್, ಅಲೋಲ್ ಅರೋರ ಮತ್ತು ಹಿಮಾಂಶು ಶೇಖರ್ ಎಂಬ ಮೂವರು ವಿದ್ಯಾರ್ಥಿಗಳು ಗುರುವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಮಾಡುತ್ತಿದ್ದಾರೆ. ಇದರಲ್ಲಿ ಹಿಲಾಲ್ ಸವಾದ್ ತೀವ್ರ ಅಸ್ವಸ್ಥವಾಗಿದ್ದು, ಈತನನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ.[ಎಫ್ ಟಿಐಐ ವಿದ್ಯಾರ್ಥಿಗಳಿಂದ ಅನಿರ್ದಿಷ್ಟಾವಧಿ ಉಪವಾಸ]
ಎಫ್ ಟಿಐಐ ವಿದ್ಯಾರ್ಥಿಗಳು ಆರಂಭಿಸಿದ ಅನಿರ್ದಿಷ್ಟಾವಧಿ ಉಪವಾಸ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಅಸ್ವಸ್ಥನಾದ ಹಿಲಾಲ್ ಸವಾದ್ ದೇಹದಲ್ಲಿ ಸಕ್ಕರೆ ಪ್ರಮಾಣ ಕುಸಿದಿರುವುದೇ ಅಸ್ವಸ್ಥತೆಗೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.
ಎಫ್ ಟಿಐಐ ನಿರ್ದೇಶಕ ಗಜೇಂದ್ರ ಚೌಹಣ್ ರನ್ನು ಅಧಿಕಾರದಿಂದ ಕಿತ್ತು ಹಾಕಲು ವಿದ್ಯಾರ್ಥಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತ್ಯುತ್ತರ ಬಾರದ ಕಾರಣ, ಕೇಂದ್ರ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ವಿದ್ಯಾರ್ಥಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.