ನಿರ್ಭಯಾ ಪ್ರಕರಣ: ಕ್ಷಮಾದಾನ ಕೋರಲು ಒಂದು ವಾರದ ಕಾಲಾವಕಾಶ
ನವದೆಹಲಿ, ಡಿಸೆಂಬರ್ 19: ನಿರ್ಭಯಾ ಪ್ರಕರಣದಲ್ಲಿ ರಾಷ್ಟ್ರಪತಿಗಳಲ್ಲಿ ಕ್ಷಮಾದಾನ ಕೋರಲು ನಾಲ್ವರು ದೋಷಿಗಳಿಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ.
ಏಳು ವರ್ಷಗಳ ಹಿಂದಿನ ನಿರ್ಭಯಾ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಆರು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Timeline:ನಿರ್ಭಯಾ ಪ್ರಕರಣ ನಡೆದು ಬಂದ ಹಾದಿ
ಇತ್ತ, ಮರಣದಂಡನೆ ಶಿಕ್ಷೆ ನೀಡಲಾಗಿರುವ ನಾಲ್ವರು ಅಪರಾಧಿಗಳನ್ನು ತತ್ಕ್ಷಣವೇ ನೇಣಿಗೆ ಏರಿಸಬೇಕು ಎಂದು ಕೋರಿ ನಿರ್ಭಯಾ ಪೋಷಕರು ಪಟಿಯಾಲ ಹೌಸ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ಬೆನ್ನಲ್ಲೇ ನಿರ್ಭಯಾ ಪೋಷಕರ ಅರ್ಜಿ ವಿಚಾರಣೆ ನಡೆಯಿತು. 2012ರ ಡಿ. 16ರಂದು ಜ್ಯೋತಿ ಸಿಂಗ್ ಎಂಬ 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಆರು ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಬಸ್ಸಿನೊಳಗೆ ಈ ಪೈಶಾಚಿಕ ಕೃತ್ಯ ಎಸಗಿ ಆಕೆಯನ್ನು ತೀರಾ ಗಂಭೀರವಾಗಿ ಗಾಯಗೊಳಿಸಿದ ಬಳಿಕ ಬಸ್ಸಿನಿಂದ ಹೊರ ಎಸೆದುಹೋಗಿದ್ದರು. ಬಹು ಅಂಗಾಂಗ ವೈಫಲ್ಯಗೊಂಡು ಈ ವಿದ್ಯಾರ್ಥಿನಿ ಕೆಲ ದಿನಗಳ ಬಳಿಕ ಅಸು ನೀಗಿದರು.
ಅಕ್ಷಯ್ ಠಾಕೂರ್ ಅರ್ಜಿ ಸುಪ್ರೀಂನಿಂದ ವಜಾ; ಗಲ್ಲು ಶಿಕ್ಷೆ ಜಾರಿ
ಜನವರಿ 7ಕ್ಕೆ ಈ ಅರ್ಜಿಯ ವಿಚಾರಣೆಯನ್ನು ಮುಂದೂಡಿರುವ ಪಟಿಯಾಲಾ ಹೌಸ್ ನ್ಯಾಯಾಲಯವು, ದೋಷಿಗಳು ಒಂದು ವಾರದೊಳಗೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸುತ್ತಾರೋ ಇಲ್ಲವೋ ಎಂದು ಅವರಿಗೆ ನೋಟೀಸ್ ನೀಡುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ಹೊರಡಿಸಿದೆ.
ಆದರೆ, ಕೋರ್ಟ್ ತೀರ್ಪಿಗೆ ನಿರ್ಭಯಾ ತಾಯಿ ಆಶಾ ದೇವಿ ಅಸಮಾಧಾನಪಟ್ಟಿದ್ದಾರೆ. ನಾವೆಲ್ಲೇ ಹೋದರೂ ಅಪರಾಧಿಗಳ ಹಕ್ಕಿನ ಬಗ್ಗೆಯೇ ಮಾತನಾಡುತ್ತಾರೆ. ಹಾಗಾದರೆ ನಮಗೆ ಹಕ್ಕಿಲ್ಲವಾ? ಎಂದು ಆಶಾ ದೇವಿ ಬೇಸರ ವ್ಯಕ್ತಪಡಿಸಿದ್ದಾರೆ.
ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪವನ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಜನವರಿ 24ಕ್ಕೆ ಮುಂದೂಡಿದೆ.