ಅಕ್ಷಯ್ ಠಾಕೂರ್ ಅರ್ಜಿ ಸುಪ್ರೀಂನಿಂದ ವಜಾ; ಗಲ್ಲು ಶಿಕ್ಷೆ ಜಾರಿ
ನವದೆಹಲಿ, ಡಿಸೆಂಬರ್ 18 : ನಿರ್ಭಯ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಪ್ರಕರಣದಲ್ಲಿ ನೀಡಿದ್ದ ಗಲ್ಲು ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆಯಾಗಿತ್ತು.
ಬುಧವಾರ ನ್ಯಾಯಮೂರ್ತಿಗಳಾದ ಎಸ್. ಎ. ಬೋಪಣ್ಣ, ಆರ್. ಭಾನುಮತಿ ಮತ್ತು ಅಶೋಕ್ ಭೂಷಣ್ ಅವರ ಪೀಠದಲ್ಲಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಅಕ್ಷಯ್ ಠಾಕೂರ್ ಪರವಾಗಿ ವಕೀಲ ಎ. ಪಿ. ಸಿಂಗ್ ವಾದ ಮಂಡನೆ ಮಾಡಿದರು.
ದೇಶವನ್ನೇ ಬೆಚ್ಚಿಬೀಳಿಸಿದ ನಿರ್ಭಯಾ ಅತ್ಯಾಚಾರಿಗಳಿಗೆ ಖಿನ್ನತೆ
ಸುಪ್ರೀಂಕೋರ್ಟ್ 23 ವರ್ಷದ ಅಕ್ಷಯ್ ಠಾಕೂರ್ ಗಲ್ಲು ಶಿಕ್ಷೆಯನ್ನು ಪುನರ್ ಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದಾಗಿ ಅಪರಾಧಿಗೆ ಗಲ್ಲು ಶಿಕ್ಷೆ ಜಾರಿಯಾಗುವುದು ಖಚಿತವಾಗಿದೆ.
ನ್ಯಾಯಮೂರ್ತಿ ಆರ್. ಭಾನುಮತಿ ತೀರ್ಪನ್ನು ಓದಿದ್ದು ಅಪರಾಧಿ ಅಕ್ಷಯ್ ಠಾಕೂರ್ ವಾದಕ್ಕೆ ಮನ್ನಣೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ ಎಂಬ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಮೂವರು ನ್ಯಾಯಮೂರ್ತಿಗಳ ಪೀಠ ತೀರ್ಪಿನಲ್ಲಿ ಹೇಳಿದೆ.
ನಿರ್ಭಯಾ ಅತ್ಯಾಚಾರಿಗಳ ಜೊತೆ ನೇಣಿಗೇರಲಿದ್ದಾರೆ 8 ಅಪರಾಧಿಗಳು
ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಾದ ಮುಕೇಶ್, ವಿನಯ್ ಮತ್ತು ಪವನ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿತ್ತು. ಈಗ ಅಕ್ಷಯ್ ಠಾಕೂರ್ ಅರ್ಜಿಯೂ ವಜಾಗೊಂಡಿದೆ.
ಎಲ್ಲಾ ಆರೋಪಿಗಳು ನವದೆಹಲಿಯ ತಿಹಾರ್ ಜೈಲಿನಲ್ಲಿದ್ದು ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇದರಿಂದಾಗಿ ಎಲ್ಲಾ ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವುದು ಖಚಿತವಾಗಿದೆ. ಜೈಲಿನಲ್ಲಿ ಈಗಾಗಲೇ ಗಲ್ಲು ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.