ಯೋಗಿ ಸರ್ಕಾರದ ವಿರುದ್ಧ ನಿರ್ಭಯಾ ಕೇಸ್ ವಕೀಲೆ ಸೀಮಾ ಕಿಡಿ
ಲಕ್ನೋ, ಅ.2: ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಕೀಲೆ ಸೀಮಾ ಕುಶ್ವಾಹ್ ಕಿಡಿ ಕಾರಿದ್ದಾರೆ.
2012ರ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ನಿರ್ಭಯಾ ಪರವಾಗಿ ವಾದಿಸಿದ್ದ ವಕೀಲೆ ಸೀಮಾ ಕುಶ್ವಾಹಾ ಅವರು ಹತ್ರಾಸ್ ಸಂತ್ರಸ್ತೆ ಕುಟುಂಬಸ್ಥರನ್ನು ಭೇಟಿ ಮಾಡಲು ಬಂದಿದ್ದರು.
ಸಂತ್ರಸ್ತೆ ಕುಟುಂಬದವರು ಬಯಸಿದರೆ, ಅವರ ಪರ ವಾದಿಸಲು ಸಿದ್ಧ ಎಂದು ಘೋಷಿಸಿದ್ದಾರೆ.
ಆದರೆ, ಆ ಕುಟುಂಬದೊಡನೆ ಸಂಪರ್ಕ ಸಾಧಿಸಲು ಸ್ಥಳೀಯ ಆಡಳಿತ ಬಿಡುತ್ತಿಲ್ಲ ಎಂದು ಮಾಧ್ಯಮಗಳ ಮುಂದೆ ಸೀಮಾ ತಮ್ಮ ಅಸಹಾಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

''ನಾನಿನ್ನು ಅವರ ವಕೀಲೆಯಾಗಿಲ್ಲ, ಸಾಮಾನ್ಯ ವ್ಯಕ್ತಿಯಾಗಿ ಅವರನ್ನು ಭೇಟಿ ಮಾಡಿದರೆ ಕಾನೂನು ಮತ್ತು ಸುವ್ಯವಸ್ಥೆ ಭಂಗ ಹೇಗೆ ಆಗುತ್ತದೆ. ಇಲ್ಲದ ಕಾನೂನಿನ ಪಾಠವನ್ನು ಸ್ಥಳೀಯ ಆಡಳಿತ ನೀಡುತ್ತಿದೆ'' ವಕೀಲೆ ಸೀಮಾ ಗುಡುಗಿದರು.
23 ವರ್ಷ ವಯಸ್ಸಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲೆ ನಡೆದ ಅಮಾನುಷ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಾದ ಅಕ್ಷಯ್ ಸಿಂಗ್ ಠಾಕೂರ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಮುಖೇಶ್ ಸಿಂಗ್ ಅವರನ್ನು 2020ರ ಮಾರ್ಚ್ ತಿಂಗಳಲ್ಲಿ ಗಲ್ಲಿಗೇರಿಸುವಲ್ಲಿ ವಕೀಲೆ ಸೀಮಾ ಪಾತ್ರ ಹಿರಿದಾಗಿತ್ತು. ದೇಶದೆಲ್ಲೆಡೆ ವಕೀಲೆಯ ವಾದಕ್ಕೆ ಮೆಚ್ಚುಗೆ ಸಿಕ್ಕಿದೆ.
ಉತ್ತರಪ್ರದೇಶದ ಉಗ್ಗರ್ ಪುರ್ ಮೂಲದವರಾದ ವಕೀಲೆ ಸೀಮಾ ಅವರು ಸದ್ಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. 2012ರಲ್ಲಿ ಕಾನೂನು ವ್ಯಾಸಂಗದ ಜೊತೆಗೆ ದೆಹಲಿ ಗ್ಯಾಂಗ್ ರೇಪ್ ಕೇಸಿನಲ್ಲಿ ವಾದಿಸಿದ್ದರು. ದೆಹಲಿ ವಿವಿಯಿಂದ 2014ರಲ್ಲಿ ಪದವಿ ಪಡೆದಿರುವ ಸೀಮಾ ಅವರು ನಿರ್ಭಯಾ ಜ್ಯೋತಿ ಟ್ರಸ್ಟ್ ನ ಕಾನೂನು ಸಲಹೆಗಾರರಾಗಿದ್ದಾರೆ.
ಅತ್ಯಾಚಾರಕ್ಕೊಳಗಾಗಿದ್ದ 19 ವರ್ಷ ವಯಸ್ಸಿನ ಹತ್ರಾಸ್ ಯುವತಿ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಆಕೆಗೆ ನ್ಯಾಯ ಸಿಗಬೇಕು ಎಂದು ದೇಶದೆಲ್ಲೆಡೆ ಕೂಗೆದ್ದಿದೆ.












Click it and Unblock the Notifications