ಮಗಳ ಸಾವಿಗೆ ಕೊನೆಗೂ ಸಿಕ್ಕ ನ್ಯಾಯ: ನಿರ್ಭಯಾ ತಾಯಿ ಪ್ರತಿಕ್ರಿಯೆ
ನವದೆಹಲಿ, ಮಾರ್ಚ್ 20: ತಮ್ಮ ಮಗಳ ಸಾವಿಗೆ ಅಂತೂ 7 ವರ್ಷಗಳ ಬಳಿಕವಾದರೂ ನ್ಯಾಯ ಸಿಕ್ಕಿತಲ್ಲ ಎನ್ನುವ ಕೊಂಚ ಸಮಾಧಾನದಲ್ಲಿ ನಿರ್ಭಯಾ ತಾಯಿ ಆಶಾದೇವಿ ಇದ್ದಾರೆ.
'ಕೊನೆಗೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಿದೆ. ಇಂದು ನಮಗೆ ನ್ಯಾಯ ಸಿಕ್ಕಿದೆ. ಈ ದಿನವನ್ನು ನನ್ನ ಮಗಳಿಗೆ ಅರ್ಪಿಸುತ್ತಿದ್ದೇನೆ. ನ್ಯಾಯಾಂಗ ವ್ಯವಸ್ಥೆ ಹಾಗೂ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ' ಎಂದು ನಿರ್ಭಯಾ ತಾಯಿ ಕಣ್ಣಂಚಲ್ಲಿ ನೀರು ತುಂಬಿಕೊಂಡು ಪ್ರತಿಕ್ರಿಯಿಸಿದ್ದಾರೆ.
2012ರಿಂದಲೂ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡುತ್ತಲೇ ಬಂದಿದ್ದೆವು. ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ. ಇಂದು ಎಲ್ಲವೂ ಮುಗಿದಿದೆ.

ಈ ನಾಲ್ವರು ಅತ್ಯಾಚಾರಿಗಳ ಸಾವಿನಿಂದ ನನ್ನ ಮಗಳ ಸಾವಿಗೆ ನ್ಯಾಯ ದೊರೆತಂತಾಗಿದೆ ಎಂದು ಹೇಳಿದರು.
'ನನ್ನ ಮಗಳು ಮತ್ತೆ ಹುಟ್ಟಿ ಬರುವುದಿಲ್ಲ, ಆಕೆ ನಮ್ಮನ್ನ ಅಗಲಿ ಹೋದ ಬಳಿಕ ನಾವು ಹೋರಾಟವನ್ನು ಆರಂಭಿದೆವು. ಇದು ನಮ್ಮ ಮಗಳ ಹೋರಾಟ ಆದರೆ ನಾವು ಅದನ್ನು ಮುಂದುವರೆಸಿದ್ದೆವು. ನಮ್ಮ ಮಗಳ ಫೋಟೊಗೆ ಮುತ್ತಿಟ್ಟು, ನಿನಗೆ ಕೊನೆಗೂ ನ್ಯಾಯ ಸಿಕ್ಕಿತು ಎಂದು ಹೇಳಬೇಕಿದೆ'.
2012ರ ಡಿಸೆಂಬರ್ 16 ರಂದು ದೆಹಲಿಯ ಬಸ್ ಒಂದರಲ್ಲಿ ನಿರ್ಭಯಾ ಮೇಲೆ ಕಾಮುಕರು ಅತ್ಯಾಚಾರ ನಡೆಸಿ ಕೊನೆಗೆ ಕೊಲೆ ಮಾಡಿದ್ದರು. ಅಪರಾಧಿಗಳು ಯಾರೆಂಬುದು ತಿಳಿದು ಕೊನೆಗೆ ಅವರನ್ನು ಜೈಲಿಗೆ ಅಟ್ಟಿದ್ದರೂ ಕೂಡ ಅವರ ಗಲ್ಲು ಶಿಕ್ಷೆಗೆ 7 ವರ್ಷಗಳೇ ಬೇಕಾಯಿತು.
ಗಲ್ಲು ಶಿಕ್ಷೆ ಸಮಯ ನಿಗದಿಯಾಗುತ್ತಿದ್ದಂತೆ ಆರೋಪಿಗಳು ಊಟವನ್ನೇ ಬಿಟ್ಟಿದ್ದರು. ಅಳುತ್ತಾ ಮೂಲೆಯಲ್ಲಿ ಕುಳಿತಿದ್ದರು. ಪ್ರಕರಣದ ಅಪರಾಧಿಗಳಾದ ಮುಕೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ, ಅಕ್ಷಯ್ ಕುಮಾರ್ ನನ್ನು ಗಲ್ಲಿಗೇರಿಸಲಾಗಿದೆ.
ಕೊನೆಯ ಹಂತದಲ್ಲಿ ಮರಣದಂಡನೆ ಶಿಕ್ಷೆಯನ್ನು ಪುನರ್ ಪರಿಶೀಲಿಸಬೇಕು ಎಂದು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯೂ ವಜಾಗೊಂಡಿತ್ತು. ಎಲ್ಲಾ ಅಪರಾಧಿಗಳ ಕ್ಷಮಾಧಾನ ಅರ್ಜಿಯನ್ನೂ ರಾಷ್ಟ್ರಪತಿಗಳು ತಿರಸ್ಕರಿಸಿದ್ದರು.












Click it and Unblock the Notifications