21 ಶತಮಾನದಲ್ಲಿ ದೇಶದಲ್ಲಿ ಭ್ರಷ್ಟಾಚಾರ ಇರಲೇಬಾರದು: ಮೋದಿ
ಮೊಬೈಲ್ ಬ್ಯಾಂಕಿಗ್, ಮೊಬೈಲ್ ವ್ಯಾಲೆಟ್ ಗಳ ಯುಗದಲ್ಲಿ ನಾವು ಜೀವಿಸುತ್ತಿದ್ದೇವೆ.ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಿ ದೇಶದಲ್ಲಿ ಭ್ರಷ್ಟಾಚಾರವನ್ನು ಹೊಡೆದು ಓಡಿಸಿ ಎಂದು ಪ್ರಧಾನಿ ಮೋದಿ ಶುಕ್ರವಾರ ಕರೆ ನೀಡಿದ್ದಾರೆ.
ನವದೆಹಲಿ, ಡಿಸೆಂಬರ್, 2: ನಗದು ರಹಿತ ವಹಿವಾಟು ಮಡುವ ಮೂಲಕ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶ ಕಲ್ಪಿಸಬಾರದು, 21 ಶತಮಾನದಲ್ಲಿ ಭಾರತದಲ್ಲಿ ಭ್ರಷ್ಟಾಚಾರ ಇರಲೇ ಬಾರದು ಎಂದು ಪ್ರಧಾನಿ ಮೋದಿ ಅವರು ತಿಳಿಸಿದರು.
ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ದೇಶದಿಂದ ಬುಡ ಸಮೇತ ಕಿತ್ತೊಗೆಯುವುದಕ್ಕಾಗಿ ನಗದುರಹಿತ ವಹಿವಾಟು ನಡೆಸಲು ಹೆಚ್ಚು ಗಮನಹರಿಸಿ ಬದಲಾವಣೆಗೆ ಬೆಂಬಲ ನೀಡಿ ಎಂದು ಅವರು ಮನವಿ ಮಾಡಿದರು.
ಭ್ರಷ್ಟಾಚಾರದ ಮಟ್ಟ ಇಳಿದರೆ ಬಡವವ ಮತ್ತು ಮಧ್ಯಮ ವರ್ಗದ ಅಭಿವೃದ್ಧಿ ಮತ್ತು ಕನಸು ಸಾಕಾರಗೊಳ್ಳುತ್ತದೆ ಎಂದು ಅವರು ಲಿಂಕ್ಡ್ ಇನ್ ಡಾಟ್ ಕಾಂ ನಲ್ಲಿ ಬರೆದಿದ್ದಾರೆ.
ಅಧಿಕ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ನಿರ್ಧಾರವನ್ನು ಮೋದಿ ಅವರು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ್ದು, "ಇದು ನಗದು ಮತ್ತು ಭ್ರಷ್ಟಾಚಾರ ಮತ್ತು ಕಪ್ಪುಹಣಕ್ಕೆ ಕಡಿವಾಣ ಹಾಕಿದೆ" ಎಂದು ಹೇಳಿದ್ದಾರೆ.
ಬದಲಾವಣೆಯ ನೇತೃತ್ವ ವಹಿಸಿ, ಬದಲಾವಣೆಗೆ ಬೆಂಬಲ ನೀಡಿ, ಇದರಿಂದ ಕಪ್ಪು ಹಣ ಮತ್ತು ಭ್ರಷ್ಟಾಚಾರವನ್ನು ಹೋಗಲಾಡಿಸುವ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಹಾಕಿ ಎಂದು ಅವರು ಯುವ ಸಮುದಾಯದಲ್ಲಿ ಮನವಿ ಮಾಡಿದ್ದಾರೆ.
ನಾವೀಗ ಮೊಬೈಲ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ ಗಳ ಯುಗದಲ್ಲಿ ಬದುಕುತ್ತಿದ್ದೇವೆ. ಎಲ್ಲವನ್ನೂ ಮೊಬೈಲ್ ಮೂಲಕವೇ ಮಾಡುತ್ತಿದ್ದೇವೆ. ತಂತ್ರಜ್ಞಾನ ನಮ್ಮ ಜೀವನವನ್ನು ಸುಲಭವಾಗಿಸಿದೆ ಎಂದು ಅವರು ಹೇಳಿದ್ದಾರೆ.