ಇದುವರೆಗೂ ಯಾರೆಲ್ಲಾ ಮೈಸೂರು ದಸರಾ ಉದ್ಘಾಟನೆ ಮಾಡಿದ್ದಾರೆ; ಇಲ್ಲಿದೆ ಮಾಹಿತಿ
ಮೈಸೂರು, ಸೆಪ್ಟೆಂಬರ್, 14: ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ಆಗಮಿಸುತ್ತಿರುವು ಎರಡನೇ ಬಾರಿ. ಈ ಹಿಂದೆ 1990ರಲ್ಲಿ ರಾಷ್ಟ್ರಪತಿ ಆಗಿದ್ದ ರಾಮಸ್ವಾಮಿ ವೆಂಕಟರಾಮನ್ ಅವರು ದಸರಾ ಮಹೋತ್ಸವದ ಕೊನೆದಿನ ನಡೆದಿದ್ದ, ಜಂಬೂಸವಾರಿಯಲ್ಲಿ ಪುಷ್ಪಾರ್ಚನೆ ನೆರವೇರಿಸಿದ್ದರು. ಇದೀಗ ನಾಡಹಬ್ಬದಲ್ಲಿ ಪಾಲ್ಗೊಳ್ಳುತ್ತಿರುವ ಎರಡನೇ ರಾಷ್ಟಪತಿ ಎಂಬ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ಪಾತ್ರರಾಗಿದ್ದಾರೆ.
ಒಂಬತ್ತು ದಿನ ನಡೆಯುವ ದಸರಾ ಮಹೋತ್ಸವದ ಮೊದಲ ದಿನ ಚಾಮುಂಡಿ ಬೆಟ್ಟದಲ್ಲಿ ಚಾಲನೆ ಸಿಕ್ಕರೆ, ಕೊನೇ ದಿನ ಜಂಬೂಸವಾರಿ ಮೂಲಕ ಸಮಾಪ್ತಿಗೊಳ್ಳುತ್ತದೆ. 1988ರಲ್ಲಿ ಉಪ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಕೂಡ ಜಂಬೂಸವಾರಿಗೆ ಚಾಲನೆ ನೀಡಿದ್ದರು.
ಸೆ.20ಕ್ಕೆ ಖಾಸಗಿ ಸಿಂಹಾಸನ ಜೋಡಣೆ... ಇದರ ಇತಿಹಾಸವೇನು?
ಈ ಬಾರಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಂದ ದಸರಾ ಮಹೋತ್ಸವಕ್ಕೆ ಚಾಲನೆ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, "ಸಕ್ರಿಯ ರಾಜಕಾರಣಿಗಳನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವ ಉದಾಹರಣೆ ಇಲ್ಲ'' ಎಂದಿದ್ದರು. ಹಾಗೆ ನೋಡಿದರೆ ದಸರಾ ಉದ್ಘಾಟನೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುತ್ತಿರಲಿಲ್ಲ. ಆದರೆ 1995ರಲ್ಲಿ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿ ಆಗಿದ್ದಾಗ ಪಾಲ್ಗೊಳ್ಳುವ ಸಂಪ್ರದಾಯಕ್ಕೆ ನಾಂದಿ ಆಡಿದರು. ನಂತರ ಬಂದ ಸಿಎಂಗಳು ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ
ದಸರಾ ಉದ್ಘಾಟಿಸಿದ್ದ ರಾಜಕಾರಣಿಗಳ ಪಟ್ಟಿ
ಹಾಗೆ ನೋಡಿದರೆ ವಿಶ್ವವಿಖ್ಯಾತ ನಾಡಹಬ್ಬವನ್ನು ಎರಡು ಬಾರಿ ರಾಜ್ಯಪಾಲರು ಉದ್ಘಾಟಿಸಿದ್ದಾರೆ. 1988ರಲ್ಲಿ ಎಸ್.ಆರ್.ಬೊಮ್ಮಾಯಿ ನೇತೃತ್ವದ ಜನತಾ ಪಕ್ಷದ ಸರ್ಕಾರ ಪತನವಾಗಿ, ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿತು. ಆಗ ರಾಜ್ಯಪಾಲರಾಗಿದ್ದ ಪಿ.ವೆಂಕಟಸುಬ್ಬಯ್ಯ ಹಾಗೂ 2007ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್, ಬಿಜೆಪಿ ಸರ್ಕಾರ ಪತನ ಆದಾಗ ಅಂದಿನ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್ ಜಂಬೂಸವಾರಿಯನ್ನು ಉದ್ಘಾಟಿಸಿದ್ದರು.
2003ರಲ್ಲಿ ಡಾ.ರಾಜ್ಕುಮಾರ್ ಅಪಹರಣ
1993ರಲ್ಲಿ ಮಹಾರಾಷ್ಟ್ರದಲ್ಲಿ ಅಬ್ಬರದ ಭೂಕಂಪ ಸಂಭವಿಸಿತ್ತು. ಈ ಶೋಕದಲ್ಲಿ ದಸರಾ ಆಚರಣೆ ಬೇಡ ಎನ್ನುವ ಕೂಗು ಕೇಳಿ ಬಂದಿತ್ತು. ಆದರೆ ಸಂಪ್ರದಾಯ ನಿಲ್ಲಬಾರದು ಎಂಬ ಉದ್ದೇಶದಿಂದ ಅಂದಿನ ಸಿಎಂ ಎಂ.ವೀರಪ್ಪ ಮೊಯ್ಲಿ ಅವರು ವರನಟ ಡಾ.ರಾಜ್ಕುಮಾರ್ ಅವರಿಂದ ದಸರಾ ಉದ್ಘಾಟನೆ ನೆರವೇರಿಸಿದ್ದರು. 2002ರಲ್ಲಿ ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅವರನ್ನು ಆಹ್ವಾನಿಸಿದ್ದರೂ, ಅವರು ಕಾರಣಾಂತರದಿಂದ ಗೈರಾಗಿದ್ದರು. 2003ರಲ್ಲಿ ಡಾ.ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ ಕಾರಣ ಜಂಬೂಸವಾರಿ ಇಲ್ಲದೆ ಸರಳ ಹಾಗೂ ಸಾಂಪ್ರದಾಯ ದಸರಾ ಆಚರಣೆ ಮಾಡಲಾಗಿತ್ತು.
ದಸರಾ ಉದ್ಘಾಟಿಸಿ ಮಹಾನ್ ಗಣ್ಯರ ವಿವರ
2015ರಲ್ಲಿ ಎಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದ ಮಲಾರ ಕಾಲನಿಯ ಪರಿಶಿಷ್ಟ ಜಾತಿಗೆ ಸೇರಿದ ಪ್ರಗತಿಪರ ರೈತ ಪುಟ್ಟಯ್ಯ ಅವರು ದಸರಾವನ್ನು ಉದ್ಘಾಟಿಸಿದ್ದರು. ಅದೇ ರೀತಿ ರೆಬಲ್ ಸ್ಟಾರ್ ಅಂಬರೀಶ್, ಬಿ.ಸರೋಜಾದೇವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ, ಡಾ.ಗಂಗೂಬಾಯಿ ಹಾನಗಲ್, ಸಾಹಿತಿ ದೇಜಗೌ, ಸ್ವಾತಂತ್ರ್ಯ ಹೋರಾಟಗಾರ ಎಂ.ಎನ್.ಜೋಯಿಸ್, ಪ್ರಗತಿಪರ ಸಾಹಿತಿ ಬರಗೂರು ರಾಮಚಂದ್ರಪ್ಪ, ಡಾ.ಎಸ್.ಎಲ್.ಬೈರಪ್ಪ, ಇನ್ಫೋಸಿಸ್ ಪೌಂಡೇಶನ್ ಸಂಸ್ಥಾಪಕಿ ಡಾ.ಸುಧಾಮೂರ್ತಿ ಸೇರಿದಂತೆ ಹಲವರು ದಸರಾ ಉದ್ಘಾಟನೆ ನೆರವೇರಿಸಿದ್ದಾರೆ.
ದಸರಾ ಉದ್ಘಾಟಿಸಿದ್ದ ಸ್ವಾಮೀಜಿಗಳು
2007ರಲ್ಲಿ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, 2008ರಲ್ಲಿ ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮೀಜಿ, 2009ರಲ್ಲಿ ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ, 2010ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, 2011ರಲ್ಲಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ, 2012ರಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟಿಸಿದ್ದಾರೆ.