ಜಂಬೂಸವಾರಿಗೆ ಮುನ್ನ ಅರಮನೆಯಂಗಳದಲ್ಲಿ ವಜ್ರಮುಷ್ಠಿ ಕಾಳಗ!
ಐತಿಹಾಸಿಕ ಮೈಸೂರು ದಸರಾದ ಸಡಗರ ಸಂಭ್ರಮ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಬಹಳಷ್ಟು ಕಾತರದಿಂದ ಕಾಯುತ್ತಿದ್ದ ಜಂಬೂಸವಾರಿಯ ದಿನ ಬಂದೇ ಬಿಟ್ಟಿದ್ದು, ಅರಮನೆಯಲ್ಲಿ ಹಲವು ಸಂಪ್ರದಾಯಗಳು ನಡೆಯುವುದರೊಂದಿಗೆ ಜಂಬೂಸವಾರಿ ಹೊರಡಲಿದೆ. ಜಂಬೂಸವಾರಿ ಅರಮನೆಯಿಂದ ಹೊರಡುತ್ತಿದ್ದಂತೆಯೇ ದಸರಾ ಸಂಭ್ರಮಕ್ಕೆ ತೆರೆ ಬಿದ್ದಂತೆಯೇ.
ದಸರಾ ಸಂಭ್ರಮ: ಮಾರಾಟಗಾರರಿಗೆ ಖುಷಿ, ಗ್ರಾಹಕರ ಜೇಬಿಗೆ ದುಬಾರಿ ಈ ವಿಜಯದಶಮಿ
ಆದರೆ ಜಂಬೂ ಸವಾರಿಗೆ ಮುನ್ನ ಅರಮನೆಯಲ್ಲಿ ಹಲವು ಸಂಪ್ರದಾಯಗಳು ನಡೆಯಲಿದ್ದು, ಅದರಲ್ಲಿ ವಜ್ರಮುಷ್ಠಿ ಕಾಳಗ ಒಂದಾಗಿದೆ. ಈಗಾಗಲೇ ವಜ್ರಮುಷ್ಠಿ ಕಾಳಗಕ್ಕಾಗಿ ಜೋಡಿ ಕಟ್ಟಲಾಗಿದ್ದು, ಮೊದಲನೇ ಜೋಡಿಯಾಗಿ ಮೈಸೂರಿನ ವಿಷ್ಣು ಜಟ್ಟಿ ಮತ್ತು ಬೆಂಗಳೂರಿನ ತಾರನಾಥ ಜಟ್ಟಿ ಅವರ ನಡುವೆ ಕಟ್ಟಿದ್ದರೆ, ಎರಡನೇ ಜೋಡಿಯನ್ನು ಚಾಮರಾಜನಗರದ ಅಚ್ಛುತ ಜಟ್ಟಿ ಮತ್ತು ಚನ್ನಪಟ್ಟಣದ ಮನೋಹರ ಜಟ್ಟಿ ನಡುವೆ ಕಟ್ಟಲಾಗಿದೆ.
ದಸರಾ: ದುಬೈನಲ್ಲಿ ತೆರೆಯಲಿದೆ ಹೊಸ ಹಿಂದೂ ದೇವಸ್ಥಾನ- ಏನಿದರ ವಿಶೇಷತೆ?
ಜಂಬೂಸವಾರಿಯ ದಿನದಂದು(ಅ.5) ನಡೆಯುವ ಬನ್ನಿ ಪೂಜೆಗೆ ಮುನ್ನ ನಿಗದಿತ ಸಮಯದಲ್ಲಿ ವಜ್ರಮುಷ್ಠಿ ಕಾಳಗ ನಡೆಯಲಿದ್ದು, ಈ ವೇಳೆ ಜಟ್ಟಿಗಳು ನಿಂಬುಜಾಂಬೆಗೆ ಪೂಜೆ ಸಲ್ಲಿಸಿ, ಮೈಗೆ ಮಣ್ಣು ಬಳಿದುಕೊಂಡು ತಲೆಗೆ ವಿಭೂತಿ ಹಚ್ಚಿಕೊಂಡು ಕಾಳಗ ನಡೆಸಲಿದ್ದಾರೆ. ಈ ಕಾಳಗವು ಜಟ್ಟಿಗಳ ಹಣೆಯಲ್ಲಿ ರಕ್ತ ಬರುವವರಿಗೆ ನಡೆಯಲಿದೆ. ಇನ್ನು ಈ ವಜ್ರಮುಷ್ಠಿ ಕಾಳಗ ಮಹಾರಾಜರ ಕಾಲದ್ದಾಗಿದೆ.
ದಸರಾ 2022: ರಾವಣನಿಗೆ 10 ತಲೆಗಳು ಏಕೆ? ಇದರ ಅರ್ಥವೇನು?
ಕುಸ್ತಿಪಟುವಾಗಿದ್ದ ರಣಧೀರ ಕಂಠೀರವ ನರಸರಾಜ ಒಡೆಯರ್
ಈ ವಜ್ರಮುಷ್ಠಿ ಕಾಳಗದ ಕುರಿತು ತಿಳಿಯುತ್ತಾ ಹೋದರೆ ಒಂದಷ್ಟು ಕುತೂಹಲದ ವಿಚಾರಗಳು ಹೊರಬರುತ್ತವೆ. ಅಷ್ಟೇ ಅಲ್ಲ ಮೈಸೂರು ಸಂಸ್ಥಾನದಲ್ಲಿ ವಜ್ರಮುಷ್ಠಿ ಕಾಳಗ ನಡೆಸುತ್ತಿದ್ದ ಫೈಲ್ವಾನ್ರನ್ನು ಎಷ್ಟೊಂದು ಗೌರವದಿಂದ ನಡೆಸಲಾಗುತ್ತಿತ್ತು ಎಂಬುವುದು ತಿಳಿದು ಬರುತ್ತದೆ. ಅಷ್ಟೇ ಅಲ್ಲದೆ ಮೈಸೂರು ಸಂಸ್ಥಾನದ ಗೌರವ ಕಾಪಾಡಿದ ಜಟ್ಟಿಗಳ ರೋಚಕ ಕಥೆಯೂ ತೆರೆದುಕೊಳ್ಳುತ್ತದೆ. 1638ರಿಂದ 1659ರವರೆಗೆ ಆಳಿದ ರಣಧೀರ ಕಂಠೀರವ ನರಸರಾಜ ಒಡೆಯರ್ ಮಹಾನ್ ಕುಸ್ತಿಪಟುವಾಗಿದ್ದರು. ಇವರ ಆಡಳಿತಾವಧಿಯ ಕಾಲದಲ್ಲಿ ತಿರುಚನಾಪಳ್ಳಿಯ ಪ್ರಸಿದ್ಧ ಜಟ್ಟಿಯೊಬ್ಬರು ತನಗೆ ಸಮಾನರು ಯಾರು ಇಲ್ಲವೆಂದು ಅಹಂಕಾರದಿಂದ ಮೆರೆಯುತ್ತಿದ್ದನಂತೆ.
ಅಹಂಕಾರಿ ಕುಸ್ತಿಪಟುವನ್ನು ಸೋಲಿಸಿದರು
ಆತನ ಅಹಂಕಾರವನ್ನು ಅಡಗಿಸಲೇ ಬೇಕೆಂಬ ಪಣತೊಟ್ಟ ನರಸರಾಜ ಒಡೆಯರ್ ಒಬ್ಬ ಕುಸ್ತಿಗಾರನಂತೆ ವೇಷಧರಿಸಿ ಅಲ್ಲಿಗೆ ತೆರಳಿ ತಮ್ಮ ಹಸ್ತ ಚಮತ್ಕಾರದಿಂದ ಆತನನ್ನು ಸಂಹರಿಸಿದರಂತೆ. ಆ ನಂತರ ವಿಷಯ ತಿಳಿದ ಅಲ್ಲಿನ ಪಾಳೆಯಗಾರ ಹೇಗಾದರೂ ಮಾಡಿ ನರಸರಾಜ ಒಡೆಯರ್ ನ್ನು ಮುಗಿಸಲೇ ಬೇಕೆಂಬ ತೀರ್ಮಾನ ಮಾಡಿ ಸುಮಾರು 25 ಜಟ್ಟಿಗಳನ್ನು ಶ್ರೀರಂಗಪಟ್ಟಣಕ್ಕೆ ಕಳುಹಿಸಿದನು. ಹಾಗೆ ಬಂದ ಜಟ್ಟಿಗಳು ಹೊಂಚು ಹಾಕಿ ಒಡೆಯರ ಅಂತಃ ಪುರವನ್ನು ಪ್ರವೇಶಿಸಿ ಬಿಡುತ್ತಾರೆ. ಈ ವೇಳೆ ಧೈರ್ಯ ಗೆಡದ ನರಸರಾಜ ಒಡೆಯರ್ ಆ ಜಟ್ಟಿಗಳನ್ನು ಸೋಲಿಸಿದರಂತೆ. ಇದು ಮೈಸೂರು ಮಹಾರಾಜರು ಕುಸ್ತಿಯಲ್ಲಿ ಪ್ರಾವಿಣ್ಯತೆ ಹೊಂದಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ.
ತದ ನಂತರದ ಕಾಲಘಟ್ಟದಲ್ಲಿ ಆಸ್ಥಾನದಲ್ಲಿ ಜಗಜಟ್ಟಿಗಳನ್ನಿಟ್ಟುಕೊಂಡಿದ್ದ ಮಹಾರಾಜರು ಅವರಿಗೆ ಕುಸ್ತಿಪಂದ್ಯಾವಳಿಗಳನ್ನು ಏರ್ಪಡಿಸಿ ಗೆದ್ದವರಿಗೆ ಸನ್ಮಾನ ಮಾಡಿ ಪ್ರೋತ್ಸಾಹಿಸುತ್ತಿದ್ದರಂತೆ. ಬಹಳಷ್ಟು ಪರಾಕ್ರಮ ಮೆರೆದ ಜಟ್ಟಿಗಳು ಆಸ್ಥಾನದಲ್ಲಿದ್ದರು. ಅಷ್ಟೇ ಅಲ್ಲದೆ ಕುಸ್ತಿಪಂದ್ಯದಲ್ಲಿ ಮೂಳೆಗೆ ಪೆಟ್ಟಾದರೆ ಅದಕ್ಕೆ ಚಿಕಿತ್ಸೆ ನೀಡುವ ವೈದ್ಯರು ಇಲ್ಲಿದ್ದರು. ಜಟ್ಟಿ ಆಸ್ಪತ್ರೆಗಳು ಇವತ್ತಿಗೂ ನಗರದಲ್ಲಿ ಕಂಡು ಬರುತ್ತದೆ.
ಹುಲಿಯೊಂದಿಗೆ ಸೆಣಸಿ ಗೆದ್ದ ಪೈಲ್ವಾನ
ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಒಮ್ಮೆ ಬ್ರಿಟೀಷ್ ಅಧಿಕಾರಿಯೊಬ್ಬ ಮೈಸೂರಿಗೆ ಭೇಟಿ ನೀಡಿದ್ದನಂತೆ. ಮೈಸೂರಿನ ಅರಮನೆ ಸುತ್ತಮುತ್ತಲಿನ ಪ್ರದೇಶವನ್ನೆಲ್ಲ ವೀಕ್ಷಿಸಿದ ಬಳಿಕ ಆತ ಮಹಾರಾಜರೊಂದಿಗೆ ಬಂಡೀಪುರಕ್ಕೆ ತೆರಳಿ ಅಲ್ಲಿ ಆನೆ, ಹುಲಿ ಮುಂತಾದ ಪ್ರಾಣಿಗಳನ್ನು ನೋಡಿಕೊಂಡು ಬಂದನಂತೆ. ನಂತರ ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಆ ಬ್ರಿಟೀಷ್ ಅಧಿಕಾರಿ ಮಹಾರಾಜರನ್ನು ಕುರಿತು ನಿಮ್ಮಲ್ಲಿ ಹುಲಿಯೊಂದಿಗೆ ಸೆಣಸಿ ಗೆಲ್ಲುವ ಪೈಲ್ವಾನರು ಇದ್ದಾರಾ ಎಂದು ಪ್ರಶ್ನಿಸಿದನಂತೆ. ಆತನ ಪ್ರಶ್ನೆಯಲ್ಲಿ ಕುಹಕ ಅಡಗಿರುವುದು ಮಹಾರಾಜರಿಗೆ ಗೊತ್ತಾಗಿತ್ತು. ಹೀಗಾಗಿ ಮಹಾರಾಜರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.
ಬ್ರಿಟೀಷ್ ಅಧಿಕಾರಿಯ ಮಾತಿಗೆ ಉತ್ತರ ಕೊಡಲಾಗದೆ ಚಿಂತೆಗೊಳಗಾದರು. ಏನು ಮಾಡುವುದಪ್ಪಾ ಎಂಬ ಚಿಂತೆ ಅವರನ್ನು ಕಾಡಿತ್ತು. ಆಗ ಅವರ ಬಳಿ ಬಂದ ಫೈಲ್ವಾನ್ ವೊಬ್ಬ ತಾವು ಅಪ್ಪಣೆ ನೀಡಿದರೆ ಹುಲಿಯೊಂದಿಗೆ ಕಾದಾಡುವುದಾಗಿ ತಿಳಿಸಿದನಂತೆ. ಚಿಂತಾಕ್ರಾಂತರಾಗಿದ್ದ ಮಹಾರಾಜರಿಗೆ ಒಮ್ಮೆಲೆ ಸಂತೋಷ ಉಕ್ಕಿ ಬಂದು ಒಪ್ಪಿಕೊಳ್ಳುತ್ತಾರೆ. ಮಾರನೆಯ ದಿನವೇ ಅಖಾಡ ತಯಾರಿ ಮಾಡುತ್ತಾರೆ. ಬ್ರಿಟೀಷ್ ಅಧಿಕಾರಿ ಸಮ್ಮುಖದಲ್ಲೇ ಆ ಫೈಲ್ವಾನ ಹುಲಿಯೊಂದಿಗೆ ಕಾದಾಡಿ ಗೆಲುವು ಪಡೆಯುತ್ತಾನೆ. ಇದರಿಂದ ಸಂತಸಗೊಂಡ ಮಹಾರಾಜರು ಆ ಪೈಲ್ವಾನನ್ನು ತನ್ನ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರಲ್ಲದೆ ಆತನಿಗೆ ಗಂಗಾಧರ ಸುಬ್ಬಾ ಜೆಟ್ಟಪ್ಪ ಎಂದು ಕರೆದು ಗೌರವಿಸಿದರಂತೆ.
ಜಟ್ಟಿಗಳು ನೆಲೆಸಿದ್ದ ಊರು ಜೆಟ್ಟಿಹುಂಡಿ
ಇನ್ನೊಮ್ಮೆ ಮುಮ್ಮುಡಿ ಕೃಷ್ಣರಾಜ ಒಡೆಯರ್ ಬೇಟೆಗೆಂದು ಕಾಡಿಗೆ ತೆರಳಿದ್ದಾಗ ದಿಢೀರ್ ಆಗಿ ಅವರ ಮೇಲೆ ಕರಡಿಯೊಂದು ದಾಳಿ ಮಾಡುತ್ತದೆ. ಆ ಸಂದರ್ಭ ಅವರ ಜತೆಗೆ ಹೋಗಿದ್ದ ಅಂಗರಕ್ಷಕ ಸದಾನಂದ ಸುಬ್ಬಾ ಜೆಟ್ಟಪ್ಪ ಎಂಬುವರು ಕರಡಿಯೊಂದಿಗೆ ಹೋರಾಡಿ ಒಡೆಯರನ್ನು ರಕ್ಷಿಸಿದರಂತೆ. ಇದೇ ಫೈಲ್ವಾನ್ ಆ ನಂತರ ನಜರ್ ಬಾದ್ನಲ್ಲಿ ಗರಡಿ ಮನೆ ತೆರೆದು ಹಲವರಿಗೆ ಕುಸ್ತಿಯನ್ನು ಕಲಿಸಿದರು ಎನ್ನಲಾಗಿದೆ. ಮುಮ್ಮುಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಗ್ರಾಮವೊಂದನ್ನು ಗೋವಿಂದ ಜೆಟ್ಟಿ ಎಂಬಾತನಿಗೆ ಆತನ ಶೌರ್ಯ ನೋಡಿ ಬಿಟ್ಟುಕೊಟ್ಟಿದ್ದರಲ್ಲದೆ, ಜೆಟ್ಟಿಹುಂಡಿ ಎಂದು ಹೆಸರಿಟ್ಟರು ಎಂಬುದು ಇತಿಹಾಸದ ಸಾಕ್ಷಿಯಾಗಿದೆ.
ಇದೆಲ್ಲದರ ನಡುವೆ ವಜ್ರಮುಷ್ಠಿ ಕಾಳಗ ಹೇಗೆ ರೂಢಿಗೆ ಬಂತು ಎಂಬುವುದನ್ನು ನೋಡುವುದಾದರೆ ಮೈಸೂರು ಒಡೆಯರ್ ದುರ್ಗಾ ಮಾತೆಯ ಶಾಂತಿಗಾಗಿ ನವರಾತ್ರಿ ಸಂದರ್ಭ ಈ ಆಚರಣೆಯನ್ನು ಜಾರಿಗೆ ತಂದರು ಎಂದು ಹೇಳಲಾಗುತ್ತದೆ. ಇದು ಎಲ್ಲರಿಗೂ ಸಾಧ್ಯವಿಲ್ಲ. ಇತರೆ ಕುಸ್ತಿಗಿಂತ ಅಪಾಯಕಾರಿ. ತಲೆಬೋಳಿಸಿ ದೃಢಕಾಯವಾಗಿರುವ ಅನುಭವಿ ವಸ್ತಾದ್ ತನ್ನ ಬಲಗೈಗೆ (ಆನೆದಂತ ಅಥವಾ ಸಾರಂಗದ ಕೊಂಬಿನಿಂದ ತಯಾರಿಸಿದ ಆಯುಧ) ವಜ್ರನಖವನ್ನು ಹಿಡಿದು ಎಡಗೈಗೆ ಬಟ್ಟೆ ಕಟ್ಟಿಕೊಂಡಿರುತ್ತಾನೆ.
ಇಂತಹ ನಾಲ್ವರು ಅಖಾಡದಲ್ಲಿ ಸೆಣೆಸಾಡುತ್ತಾರೆ. ತನ್ನ ಬಳಿಯಿರುವ ವಜ್ರನಖದಿಂದ ಎದುರಾಳಿಯ ಮೇಲೆ ಹೋರಾಡಬೇಕು ಹೊಡೆತವನ್ನು ಕೂಡ ಆತನ ತಲೆ ಮೇಲೆಯೇ ಹೊಡೆಯಬೇಕು. ಹೀಗೆ ಹೊಡೆದ ಏಟು ತಲೆಗೆ ತಾಗಿ ರಕ್ತ ಚಿಮ್ಮಿದರೆ ಆತ ಸೋತ ಎಂದರ್ಥ. ಈ ಒಂದು ದಿನದ ಕಾಳಗಕ್ಕಾಗಿ ಜಟ್ಟಿಗಳು ಆರು ತಿಂಗಳಿನಿಂದ ತಾಲೀಮು ನಡೆಸುವುದರೊಂದಿಗೆ ಕಟ್ಟುನಿಟ್ಟಿನ ವೃತವನ್ನು ಸುಮಾರು ಒಂಬತ್ತು ದಿನಗಳ ಕಾಲ ಮಾಡುವುದು ವಿಶೇಷವಾಗಿದೆ.