ದಸರಾ ಸಂಭ್ರಮ: ಮಾರಾಟಗಾರರಿಗೆ ಖುಷಿ, ಗ್ರಾಹಕರ ಜೇಬಿಗೆ ದುಬಾರಿ ಈ ವಿಜಯದಶಮಿ
ಬೆಂಗಳೂರು, ಅ.04: ಹಬ್ಬ ಬಂತೆಂದರೆ ಸಾಕು ಹೂವು ಹಣ್ಣಿನ ಬೆಲೆಗಳು ಗಗನಕ್ಕೆ ಏರುತ್ತವೆ. ಈಗಾಗಲೇ ಹೋವಿನ ಬೆಲೆ ಕೇಳುವಂತಿಲ್ಲ. ಇಂತಹ ಸಂದರ್ಭದಲ್ಲಿ ಹಬ್ಬ ಬೇರೆ ಬಂದಿದೆ. ಇದು ಗ್ರಾಹಕರ ಜೋಬಿಗೆ ಭಾರಿ ಹೊರೆಯಂತು ನೀಡುತ್ತಿದೆ.
ಮಹಾನವಮಿ (ಆಯುಧಪೂಜೆ) ಮತ್ತು ವಿಜಯದಶಮಿ ಹಬ್ಬದ ಪ್ರಮುಖ ಅಗತ್ಯ ವಸ್ತುಗಳಾದ ಹೂವು, ನಿಂಬೆ ಮತ್ತು ಬೂದುಗುಂಬಳಕಾಯಿ ಬೆಲೆ ನಗರದ ಮಾರುಕಟ್ಟೆಗಳಲ್ಲಿ ಆಕಾಶ ಮುಟ್ಟಿವೆ.
ದಸರಾ 2022: ರಾವಣನಿಗೆ 10 ತಲೆಗಳು ಏಕೆ? ಇದರ ಅರ್ಥವೇನು?
ಕೆ.ಜಿ.ಗೆ 10 ರಿಂದ 15 ರೂಪಾಯಿಯಿದ್ದ ಬೂದುಗುಂಬಳಕಾಯಿ ಬೆಲೆ ಕೆ.ಜಿ.ಗೆ 50ರಿಂದ 60ಕ್ಕೆ ತಲುಪಿದೆ. ನಿಂಬೆಹಣ್ಣಿನ ಬೆಲೆಯೂ ಅದೇ ವ್ಯಾಪ್ತಿಯಲ್ಲಿದೆ. ಇತರೆ ತರಕಾರಿಗಳ ಬೆಲೆ ಸ್ಥಿರವಾಗಿದ್ದರೂ, ಹಣ್ಣುಗಳು ಗ್ರಾಹಕರ ಜೇಬಿಗೆ ದುಬಾರಿಯಾಗಿವೆ.
ಹೂಗಳ ಬೆಲೆ ಗಗನಕ್ಕೆ ಏರಿಕೆ, ಗ್ರಾಹಕರ ಜೇಬಿಗೆ ಕತ್ತರಿ
ಕಮಲದ ಹೂವಿನ ಬೆಲೆ ಕೆಜಿಗೆ 900 ರಿಂದ 1,650 ರೂಪಾಯಿಗೆ ಏರಿಯಾಗಿದೆ. ಇನ್ನು, ಮಲ್ಲಿಗೆ 1,400 ರೂಗೆ ಏರಿದರೇ, ಸೇವಂತಿಗೆ ಕೆಜಿಗೆ 400 ರೂ. ಆಗಿದೆ. ವಾಹನಗಳನ್ನು ಅಲಂಕರಿಸಲು ಹೆಚ್ಚಾಗಿ ಬಳಸುವ ಚೆಂಡು ಹೂವಿನ ಒಂದು ಕೆ.ಜಿ.ಗೆ 100 ರೂಪಾಯಿಯಿದೆ.
"ಕೊರೊನಾದ ಎರಡು ವರ್ಷಗಳ ನಂತರ, ಎಲ್ಲವೂ ಸಾಮಾನ್ಯವಾಗಿದೆ. ಬೇಡಿಕೆ ಹೆಚ್ಚಿರುವುದರಿಂದ ಹೂವಿನ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಹಣ್ಣು, ತರಕಾರಿಗಿಂತ ಹೂಗಳಿಗೆ ಹೆಚ್ಚಿನ ದರವಿದೆ' ಎನ್ನುತ್ತಾರೆ ಹೂ ಮಾರಾಟಗಾರರು.
ಬಾಳೆದಿಂಡು ಕೂಡ ಕಡಿಮೆಗೆ ಸಿಕ್ಕೋಲ್ಲ!
ಅದೇ ರೀತಿ ದಾಳಿಂಬೆ ಮತ್ತು ಸೇಬು ಕೆ.ಜಿ.ಗೆ ಕ್ರಮವಾಗಿ 130 ರೂ. ಮತ್ತು 200 ರೂ. ಇದ್ದರೆ, ಪೂಜೆಗೆ ಹೆಚ್ಚಾಗಿ ಬೇಕಾಗಿರುವ ಬಾಳೆಹಣ್ಣು ಕೆ.ಜಿಗೆ ಕನಿಷ್ಠ 65 ರೂಪಾಯಿ ಇದೆ. ಹಬ್ಬದ ಆಚರಣೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ತೆಂಗಿನಕಾಯಿ 35 ರೂಪಾಯಿ ಮತ್ತು ಬಾಳೆ ದಿಂಡಿನ ಬೆಲೆ ಜೋಡಿಗೆ 50 ರೂಪಾಯಿ ದಾಟಿದೆ.
ಇತ್ತೀಚಿನ ತಿಂಗಳುಗಳಲ್ಲಿ ಮಳೆಯಿಂದಾಗಿ ತರಕಾರಿಗಳ ಬೆಲೆಯಲ್ಲಿ ಆಗಾಗ್ಗೆ ಏರಿಳಿತ ಕಂಡುಬಂದಿದೆ. ಆದರೆ ಹಬ್ಬಗಳ ದಿನ ಬೆಲೆಯಲ್ಲಿ ಕಡಿದಾದ ಏರಿಕೆ ಕಂಡುಬಂದಿಲ್ಲ.
ಬೀನ್ಸ್ಗೆ ಎಂದಿನಂತೆ ಬೆಲೆಯಲ್ಲಿ ಅಗ್ರಸ್ಥಾನ
ಇನ್ನು, ಹೂವು ಹಣ್ಣಿಗಿಂತ ನಾವೇನು ಕಡಿಮೆಯಿಲ್ಲ ಎನ್ನುತ್ತಿರುವ ತರಕಾರಿ ಕೂಡ ಬೆಲೆಯಲ್ಲಿ ಪೈಪೋಟಿ ನೀಡುತ್ತಿವೆ. ಬೀನ್ಸ್ ಪ್ರತಿ ಕೆಜಿಗೆ 80 ರೂಪಾಯಿಯಂತೆ ಅಗ್ರಸ್ಥಾನದಲ್ಲಿದೆ. ಆದರೆ ಕ್ಯಾರೆಟ್ಗೆ ಕೆಜಿಗೆ 50 ರಿಂದ 70 ರೂಪಾಯಿ ವರೆಗೆ ಇದೆ. ಕ್ಯಾಪ್ಸಿಕಂ ಮತ್ತು ಆಲೂಗಡ್ಡೆ ಕೆಜಿಗೆ ಕ್ರಮವಾಗಿ 55 ಮತ್ತು 30 ರೂಪಾಯಿಗೆ ಸಿಗುತ್ತಿವೆ.
ಹಬ್ಬದ ದಿನಗಳಲ್ಲಿ ಚೌಕಾಸಿ ಮಾಡಲು ಮನಸ್ಸಿಲ್ಲ; ಗ್ರಾಹಕರು
ಇನ್ನು, ವರ್ಷಕ್ಕೆ ಒಮ್ಮೆ ಬರುವ ಆಯುಧ ಪೂಜೆ ದಿನ ಹೂವು, ಬೂದುಗುಂಬಳಕಾಯಿ, ನಿಂಬೆ ಹಣ್ಣು ಬೇಕೆ ಬೇಕು. ಅವುಗಳು ಅತ್ಯವಶ್ಯಕ . ಹೀಗಾಗಿ ಬೆಲೆ ಹೆಚ್ಚಿದ್ದರೂ ಖರೀದಿಸಲೇ ಬೇಕಾಗುತ್ತದೆ ಎನ್ನುತ್ತಾರೆ ಹಲವು ಗ್ರಾಹಕರು.
'ದಿನವೂ ನಾವೇನು ಹೂವುಗಳನ್ನು ಖರೀದಿಸುವುದಿಲ್ಲ. ಆದರೆ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸುತ್ತೇನೆ. ಹೂವುಗಳ ಬೆಲೆ ಹೆಚ್ಚಾಗಿದೆ, ಆದರೆನಮ್ಮ ಮನೆಯಲ್ಲಿ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುವ ಕಾರಣ ಅವುಗಳನ್ನು ಖರೀದಿಸಬೇಕು. ಜೊತೆಗೆ ಹಬ್ಬದ ಮಾರಾಟದಲ್ಲಿ ವ್ಯಾಪಾರಸ್ಥರು ಒಂದಿಷ್ಟು ಲಾಭ ಗಳಿಸುತ್ತಿದ್ದಾರೆ. ಈ ದಿನಗಳಲ್ಲಿ ಅವರೊಂದಿಗೆ ಚೌಕಾಸಿ ಮಾಡಲು ಮನಸ್ಸಿಲ್ಲ' ಎನ್ನುತ್ತಾರೆ ಕೆಲವು ಗ್ರಾಹಕರು.
ಇನ್ನು, ಕೊರೊನಾ ಸಾಂಕ್ರಾಮಿಕದಿಂದಾಗಿ ಎರಡು ವರ್ಷಗಳ ಕಾಲ ಹಬ್ಬದ ಸಂಭ್ರಮ ಇರಲಿಲ್ಲ. ಈ ವರ್ಷ ಮಹಾನವಮಿ ಸಂಭ್ರಮ, ಸಡಗರವು ಎಲ್ಲೆಡೆಯಲ್ಲೂ ಗಮನ ಸೆಳೆಯುತ್ತಿದೆ. ಇಷ್ಟೇ ಅಲ್ಲದ ನಗರ ಪ್ರದೇಶದ ಜನರು ಬೆಲೆ ಹೆಚ್ಚಳದಿಂದಾಗಿ ಗ್ರಾಮೀಣ ಭಾಗಗಳಿಂದ ಮಾರುಕಟ್ಟೆಗೆ ಬಂದು ಹಬ್ಬದ ಸಾಮಗ್ರಿಗಳು ಖರೀದಿಸುತ್ತಿದ್ದಾರೆ.