ಜುಬಿಲಿಯಂಟ್ ಸಿಬ್ಬಂದಿಗೆ ವೇತನ ನಿಲ್ಲಿಸದಿರಲು ಸೋಮಶೇಖರ್ ಮನವಿ
ಮೈಸೂರು, ಏಪ್ರಿಲ್ 17: ಮೈಸೂರಿನಲ್ಲಿ ಕೊರೊನಾ ವ್ಯಾಪಕವಾಗಲು ಕಾರಣವಾಗಿದ್ದ ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆಯನ್ನು ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದೆ. ಆದರೆ ಇಲ್ಲಿನ ಸಿಬ್ಬಂದಿಗೆ ಸಂಬಳ ನಿಲ್ಲಿಸಬೇಡಿ ಎಂದು ಸಚಿವ ಎಸ್.ಟಿ. ಸೋಮಶೇಖರ್ ಮನವಿ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು, ಜುಬಿಲಿಯಂಟ್ ನ 1500 ಕಾರ್ಮಿಕರಿಗೂ ಸಂಬಳ ನಿಲ್ಲಿಸಬೇಡಿ ಎಂದು ಕೋರಿ ಕಾರ್ಮಿಕ ಇಲಾಖೆ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ರೂಂಮೇಟ್ ಗಳಾಗಿದ್ದ ಐವರು ಜುಬಿಲಿಯಂಟ್ ಕಾರ್ಮಿಕರಿಗೆ ಬಂತು ಕೊರೊನಾ
ಜುಬಿಲಿಯಂಟ್ ಕಾರ್ಖಾನೆ ಮಾಲೀಕರಿಗೆ ನಿರ್ದೇಶಿಸುವಂತೆ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಕೇಂದ್ರ ಗೃಹ ಇಲಾಖೆಯಿಂದ ಈಗಾಗಲೇ ಕಾರ್ಮಿಕರಿಗೆ ಸಂಬಳ ತಡೆಹಿಡಿಯುವ ಕೆಲಸ ಆಗಬಾರದೆಂದು ಆದೇಶ ಆಗಿದೆ. ಸದ್ಯ ಜುಬಿಲಿಯಂಟ್ ಕಾರ್ಖಾನೆ ಕೊರೊನಾದಿಂದ ಲಾಕ್ ಔಟ್ ಆಗಿದೆ. ಇದರಲ್ಲಿ ಕೆಲವು ಕಾರ್ಮಿಕರಿಗೆ ಸೋಂಕು ಕಂಡು ಬಂದಿದೆ. ಹಾಗಾಗಿ ಎಲ್ಲ ಕಾರ್ಮಿಕರಿಗೆ ವೇತನ ಕೊಡಬೇಕಿದೆ. ಯಾರ ಸಂಬಳವನ್ನೂ ಕಡಿತಗೊಳಿಸದಂತೆ ನಿರ್ದೇಶನ ನೀಡುವಂತೆ ಸೋಮಶೇಖರ್ ಪತ್ರ ಬರೆದಿದ್ದಾರೆ.