ರೂಂಮೇಟ್ ಗಳಾಗಿದ್ದ ಐವರು ಜುಬಿಲಿಯಂಟ್ ಕಾರ್ಮಿಕರಿಗೆ ಬಂತು ಕೊರೊನಾ
ಮೈಸೂರು, ಏಪ್ರಿಲ್ 11: ಮೈಸೂರಿನಲ್ಲಿ ಇಂದು ಮತ್ತೆ ಐದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಐದು ಮಂದಿಯೂ ಜುಬಿಲಿಯಂಟ್ ಕಾರ್ಖಾನೆ ನೌಕರರಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, "ಇಂದು ಐದು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಐದು ಮಂದಿಯೂ ಜುಬಿಲಿಯಂಟ್ ಕಾರ್ಖಾನೆ ನೌಕರರಾಗಿದ್ದು, ಮೂರು ಮಂದಿ ರೂಂ ಮೇಟ್ ಆಗಿದ್ದವರು. ಇಬ್ಬರು ರೂಂ ಮೇಟ್ ಗಳು ಸಂಪರ್ಕದಲ್ಲಿದ್ದರು" ಎಂದು ತಿಳಿಸಿದ್ದಾರೆ.
ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಮೇಲೆ ಗರಂ ಆದ ಶಾಸಕ
ಮತ್ತೆ ಐದು ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ನಂಜನಗೂಡು ಜುಬಿಲಿಯಂಟ್ ಕಾರ್ಖಾನೆ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೆಬ್ಯಾ, ಸೋಮೇಶ್ವರಪುರ ಗ್ರಾಮಗಳು ಸೀಲ್ ಡೌನ್ ಆಗಿವೆ. ಜೊತೆಗೆ ಮೈಸೂರಿನ ಜೆ.ಪಿ.ನಗರ, ಶ್ರೀರಾಂಪುರದ ಎರಡು ಮನೆಗಳ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಲಾಗಿದೆ.
"ಜುಬಿಲಿಯಂಟ್ ಕಾರ್ಖಾನೆ ಸೋಂಕು ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಿಕಿತ್ಸೆಯಲ್ಲಿರುವ ಕೆಲವರು ಗುಣಮುಖರಾಗುತ್ತಿದ್ದಾರೆ. ಇಂದು ಸಂಜೆ ವೇಳೆಗೆ ಗುಣಮುಖರಾದ ಕೆಲವರು ಡಿಸ್ಚಾರ್ಜ್ ಆಗಲಿದ್ದಾರೆ. ಕಾರ್ಖಾನೆ ನೌಕರರ ಸ್ಯಾಂಪಲ್ ಟೆಸ್ಟಿಂಗ್ ಶೇ. 85ರಷ್ಟು ಮುಗಿದಿದೆ. ಮೈಸೂರು ಮಂದಿಯ ಸ್ಯಾಂಪಲ್ ಟೆಸ್ಟಿಂಗ್ ತ್ವರಿತಗತಿಗೆ ಬೆಂಗಳೂರಿನಲ್ಲೂ ಟೆಸ್ಟಿಂಗ್ ನಡೆಸಲಾಗುತ್ತಿದೆ. ಎಲ್ಲವು ನಮ್ಮ ನಿಯಂತ್ರಣದಲ್ಲಿದೆ" ಎಂದು ತಿಳಿಸಿದ್ದಾರೆ ಜಿಲ್ಲಾಧಿಕಾರಿ.
ನಂಜನಗೂಡು ಜುಬಿಲಿಯಂಟ್ ಕಾರ್ಖಾನೆ ಕುರಿತು ಡಿಸಿ ಹೇಳುತ್ತಿರುವುದೇನು?
ಜುಬಿಲಿಯಂಟ್ ಕಾರ್ಖಾನೆಗೆ ಲೀಗಲ್ ನೋಟಿಸ್: ಜುಬಿಲಿಯಂಟ್ ಕಾರ್ಖಾನೆಗೆ ನೋಟಿಸ್ ನೀಡಲಾಗಿದೆ. ಅವರು ನಾವು ಕೇಳಿದ ದಾಖಲೆ ನೀಡಿರಲಿಲ್ಲ. ಅದಕ್ಕೆ ನೋಟಿಸ್ ಕೊಡಲಾಗಿತ್ತು. ನೋಟಿಸ್ ಕೊಟ್ಟ ಬಳಿಕ ಎಲ್ಲ ದಾಖಲೆ ನೀಡುತ್ತಿದ್ದಾರೆ ಎಂದಿದ್ದಾರೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ರಿಷ್ಯಂತ್.
"ಯಾರಿಗೆ ಮೊದಲು ವೈರಸ್ ತಗುಲಿದೆ ಎಂಬುದು ಗೊತ್ತಾಗಬೇಕಿದೆ. ಆಡಿಟ್ ಮಾಡಲು ಹೊರಗಿನಿಂದ ಕೆಲವರು ಬಂದಿದ್ದರು. ಆಸ್ಟ್ರೇಲಿಯಾ ಹಾಗೂ ಗೋವಾದಿಂದಲೂ ಬಂದಿದ್ದರು. ಕಂಟೈನರ್ನಿಂದ ವೈರಸ್ ಬಂದಿದೆ ಎಂಬ ಮಾಹಿತಿ ಇದೆ. ಇದೆಲ್ಲದರ ಬಗ್ಗೆಯೂ ತನಿಖೆಯಾಗುತ್ತಿದೆ. ಇನ್ನು ಕಾರ್ಖಾನೆ ತೆರೆಯಬೇಕು ಎಂಬ ತೀರ್ಮಾನ ಸದ್ಯಕ್ಕೆ ಮಾಡಿಲ್ಲ. ತನಿಖೆ ಮುಗಿಯುವ ಹಂತದಲ್ಲಿದ್ದು ಜಿಲ್ಲಾಡಳಿತಕ್ಕೆ ವರದಿ ನೀಡಲಿದ್ದೇವೆ" ಎಂದಿದ್ದಾರೆ.