ಮೈಸೂರಿನಲ್ಲಿ ಧರಂ ಸಿಂಗ್, ವಿಶ್ವನಾಥ್ ಫೋಟೋ ತಿಪ್ಪೆಗೆಸೆದಿದ್ದೇಕೆ?!
ಮಾಜಿ ಸಿಎಂ ಧರಂ ಸಿಂಗ್ ಹಾಗೂ ಮಾಜಿ ಸಂಸದ ಎಚ್. ವಿಶ್ವನಾಥ್ ಅವರ ಭಾವಚಿತ್ರಗಳನ್ನು ಮೈಸೂರಿನ ಜಿಲ್ಲಾ ಪಂಚಾಯತ್ ಆವರಣದ ಹಿಂಭಾಗದ ಕಸದ ರಾಶಿಯಲ್ಲಿ ಬಿಸಾಡಿರುವುದು ಕಾಕತಾಳೀಯವೋ, ಉದ್ದೇಶಪೂರ್ವಕವೋ ಎಂಬ ಪ್ರಶ್ನೆ ಎದ್ದಿದೆ!
ಮೈಸೂರು, ಏಪ್ರಿಲ್ 25 : ಮಾಜಿ ಸಿಎಂ ಧರಂ ಸಿಂಗ್ ಹಾಗೂ ಮಾಜಿ ಸಂಸದ ಎಚ್. ವಿಶ್ವನಾಥ್ ಅವರ ಭಾವಚಿತ್ರಗಳನ್ನ ಮೈಸೂರಿನ ಜಿಲ್ಲಾ ಪಂಚಾಯತ್ ಆವರಣದ ಹಿಂಭಾಗದ ಕಸದ ರಾಶಿಯಲ್ಲಿ ಬಿಸಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾ ಪಂಚಾಯತ್ ಹೊರ ಆವರಣದಲ್ಲಿರುವ ಕಸದ ರಾಶಿಯಲ್ಲಿ ಮಾಜಿ ಸಿಎಂ ಧರಂ ಸಿಂಗ್, ಮಾಜಿ ಸಂಸದ ವಿಶ್ವನಾಥ್, ಮಾಜಿ ಜಿ.ಪಂ ಅಧ್ಯಕ್ಷರ ಫೋಟೋ ಸಹ ಕಸದ ರಾಶಿಯಲ್ಲಿ ಬಿದ್ದಿದ್ದು, ಇದು ಜಿಲ್ಲಾಡಳಿತದ ಬೇಜವಾಬ್ದಾರಿತನವನ್ನ ಎತ್ತಿ ತೋರಿಸುತ್ತಿದೆ ಎನ್ನಲಾಗುತ್ತಿದೆ.[ಮೈಸೂರು: ಕಳ್ಳರಿಂದ ರಕ್ಷಿಸಲ್ಪಟ್ಟ ಮಕ್ಕಳಿನ್ನೂ ಅನಾಥ]
ಗಣ್ಯರ ಭಾವಚಿತ್ರಗಳನ್ನು ಚರಂಡಿಗೆ ಬಿಸಾಡಬಾರದು. ಅದರಲ್ಲೂ ಎಲ್ಲೆಂದರಲ್ಲಿ ಬಿಸಾಡಬಾರದು ಎಂಬ ನೀತಿ ಇದೆ. ಆದರೆ ಮೈಸೂರು ಜಿಲ್ಲಾ ಪಂಚಾಯತ್ ಈ ನಿಯಮವನ್ನು ಗಾಳಿಗೆ ತೂರಿದೆ. ಹೀಗೆ ನಾಡಿನ ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಗಣ್ಯರಿಗೆ ಮಾಡಿದ ಅಪಮಾನ ಎನ್ನಲಾಗುತ್ತಿದೆ.
ಕಾಂಗ್ರೆಸ್ ಕೆಲ ಪ್ರಮುಖ ನಾಯಕರನ್ನು ಕಡೆಗಾಣಿಸಲಾಗುತ್ತಿದೆ ಎಂಬ ಮಾತಿಗೂ, ಇದೀಗ ಫೋಟೋ ಬಿಸಾಕಿರುವುದಕ್ಕೂ ಸಂಬಂಧವೇನಾದರೂ ಇದೆಯೇ? ಅಥವಾ ಕಾಂಗ್ರೆಸ್ಸಿನಿಂದ ಮೂಲೆಗುಂಪಾಗುತ್ತಿರುವವರ ಚಿತ್ರವನ್ನೇ ಬಿಸಾಕಿರುವುದು ಕಾಕತಾಳೀಯವೇ ಎಂಬುದು ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆ!