ಕೊಡಗಿನ ಗಡಿಯಲ್ಲಿ ನಕ್ಸಲರು ಪ್ರತ್ಯಕ್ಷ
ಮೈಸೂರು, ಫೆಬ್ರವರಿ 3 : ತಮಿಳುನಾಡು ಮತ್ತು ಕೇರಳದ ಕಡೆಯಿಂದ ಕರ್ನಾಟಕದತ್ತ ನಕ್ಸಲರು ನುಸುಳಿದ್ದಾರೆ ಎಂಬ ಶಂಕೆ ಹಿನ್ನಲೆಯಲ್ಲಿ ಇತ್ತೀಚೆಗೆ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸಲಾಗಿತ್ತು. ಆದರೆ ಇದೀಗ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿರುವುದು ಆತಂಕ ಸೃಷ್ಠಿಸುವಂತೆ ಮಾಡಿದೆ.
ಕೆಲವು ವರ್ಷಗಳ ಹಿಂದೆ ಚಿಕ್ಕಮಗಳೂರು, ಹಾಸನ, ಸುಬ್ರಹ್ಮಣ್ಯ ದಾಟಿ ಕೊಡಗಿನ ಮೂಲಕ ಕೇರಳಕ್ಕೆ ನಕ್ಸಲರು ಹೋಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದಕ್ಕೆ ಕೊಡಗಿನ ಕೆಲವು ಮನೆಗಳಿಗೆ ತೆರಳಿ ಆಹಾರ ಸಾಮಗ್ರಿಗಳನ್ನು ನೀಡುವಂತೆ ಬೆದರಿಕೆ ಹಾಕಿದ್ದು ಸಾಕ್ಷಿಯಾಗಿತ್ತು.
ಆದರೆ ಇದೀಗ ಕೊಡಗು ಮತ್ತು ದಕ್ಷಿಣಕನ್ನಡ ಗಡಿಭಾಗದ ಕೊಯನಾಡು, ಸಂಪಾಜೆ, ಸುಳ್ಯ, ಸುಬ್ರಮಣ್ಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಕ್ಸಲರಿರುವುದು ಪತ್ತೆಯಾಗಿದ್ದು, ಕೆಲವು ಮನೆಗಳಿಗೆ ತೆರಳಿ ಅಗತ್ಯ ವಸ್ತುಗಳನ್ನು ಹೆದರಿಸಿ ಕೇಳಿದ್ದಾರೆ ಅಲ್ಲದೆ ಆಹಾರ ಸಾಮಗ್ರಿಗಳನ್ನು ಪಡೆದು ತೆರಳಿದ್ದಾರೆ ಎನ್ನಲಾಗಿದೆ.
ನಕ್ಸಲರನ್ನು ನೋಡಿದವರು ಎನ್ನಲಾದ ಕೊಯನಾಡಿನ ಗುಡ್ಡಗದ್ದೆಯ ನಿವಾಸಿಗಳಾದ ಕುಡಿಯರ ಸಂಕಪ್ಪ, ನಾರಾಯಣ, ಕೃಷ್ಣಪ್ಪ, ವನಜಾಕ್ಷಿ ಅವರು ಮೂವರು ವ್ಯಕ್ತಿಗಳು ಇದ್ದರಲ್ಲದೆ, ಹಸಿರು ಬಣ್ಣದ ಮಿಲಿಟರಿ ಉಡುಪು ಧರಿಸಿರುವುದರ ಬಗ್ಗೆ ಹೇಳಿದ್ದಾರೆ.
ಇನ್ನು ಸಂಕಪ್ಪ ಅವರ ಮನೆಗೆ ತೆರಳಿದ ಶಸಸ್ತ್ರಧಾರಿಯಾಗಿದ್ದ ನಕ್ಸಲರು ಅಂಗಡಿಯಿಂದ ಸಾಮಾನು ತಂದು ಕೊಡುವಂತೆ ಬೆದರಿಸಿದ್ದು, ಇದರಿಂದ ಭಯಗೊಂಡ ಅವರು, ತಮ್ಮ ಮಕ್ಕಳಾದ ಚಿದಾನಂದ ಹಾಗೂ ಗಣೇಶ್ ಗೆ ರೂ.2 ಸಾವಿರ ನೀಡಿ ಅಂಗಡಿಯಿಂದ ಸಾಮಗ್ರಿ ತರಿಸಿಕೊಟ್ಟಿದ್ದಾರೆ. ಈ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಹೋದರೆಂದು ಸಂಕಪ್ಪ ತಿಳಿಸಿದ್ದಾರೆ.
ಆ ನಂತರ ಸಂಕಪ್ಪ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆ ಆರಂಭಗೊಂಡಿದ್ದು, ಕೊಡಗಿನ ಎಸ್ಪಿ ಪಿ.ರಾಜೇಂದ್ರಪ್ರಸಾದ್, ಡಿವೈಎಸ್ಪಿ ಸುಂದರರಾಜ್, ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಹಾಗೂ ಸಿಬ್ಬಂದಿ ತೆರಳಿ ನಕ್ಸಲ್ ನಿಗ್ರಹ ದಳಕ್ಕೆ ಸಹಕಾರ ನೀಡಿದ್ದಾರೆ. ಸದ್ಯ ಮೂವರು ನಕ್ಸಲರ ಪೈಕಿ ಒಬ್ಬ ವಿಕ್ರಂ ಗೌಡ ಎನ್ನಲಾಗುತ್ತಿದೆ. ಸದ್ಯ ಕಾರ್ಯಾಚರಣೆ ಮುಂದುವರೆದಿದೆ.