ಮುರುಘಾ ಶ್ರೀ ಪ್ರಕರಣ: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಸಂತ್ರಸ್ತ ಬಾಲಕಿಯ ತಾಯಿ
ಮೈಸೂರು, ಡಿಸೆಂಬರ್, 05: ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಇತ್ತ ಸಂತ್ರಸ್ತ ಬಾಲಕಿಯರ ತಾಯಿ ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣ ಕೋರಿದ್ದಾರೆ. ತಳಮಟ್ಟದ ಸಮುದಾಯಗಳ ಹಾಗೂ ಮಹಿಳಾ ಪ್ರತಿನಿಧಿಯಾಗಿ, ತಾವು ನಮ್ಮ ದೇಶದ ರಾಷ್ಟ್ರಪತಿಗಳಾಗಿರುವುದಕ್ಕೆ ನನ್ನಂತಹ ನೊಂದ ಅಸಂಖ್ಯಾತ ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ಪರವಾಗಿ ಹೆಮ್ಮೆಯಿಂದ ಅಭಿನಂದಿಸುತ್ತೇನೆ. ನಮ್ಮಂತಹವರಿಗೆ ತಾಯಿಯ ಸ್ಥಾನದಲ್ಲಿರುವ ತಮಗೆ ನನಗಾಗಿರುವ ಅನ್ಯಾಯ ಹಾಗೂ ನೋವನ್ನು ಈ ಪತ್ರದ ಮೂಲಕ ಗಮನಕ್ಕೆ ತರಲು ಇಚ್ಚಿಸುತ್ತೇನೆ ಎಂದು ವಿವರಿಸಿದ್ದಾರೆ.
ಮತ್ತೆ "ಸ್ವಚ್ಛ ನಗರಿ" ಪಟ್ಟವನ್ನು ಅಲಂಕರಿಸಲು ಸಜ್ಜಾದ ಮೈಸೂರು, ಸಿದ್ಧತೆ ವಿವರ ಇಲ್ಲಿದೆ
"ಗಂಡನ ದೌರ್ಜನ್ಯ, ಕುಟುಂಬಕ್ಕೊಂದು ಗಂಡು ದಿಕ್ಕಿಲ್ಲದಂತೆ, ಆಸರೆ ಕಳೆದುಕೊಂಡು ಮುಂದೆ ಜೀವನವಿಲ್ಲ ಎಂದು ತಿಳಿದು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದೆ. ಆದರೂ ಸಾಯದೆ ಬದುಕುಳಿದು ಯಾರದೋ ಸಲಹೆಯಂತೆ ಚಿತ್ರದುರ್ಗದ ಮುರುಘಾ ಮಠ ಸೇರಿದೆ. ನಾನು ನರಕದ ಬಾಳನ್ನು ಕಂಡಿದ್ದೇನೆ. ನನ್ನ ಇಬ್ಬರೂ ಅಪ್ರಾಪ್ತ ಮಕ್ಕಳನ್ನು ನಾನು ಆ ಮಠದಲ್ಲಿ ಇರುವಾಗಲೇ ಕರೆದುಕೊಂಡು ಹೋಗಿ ಸ್ವಾಮೀಜಿಯ ಕೋಣೆಗೆ ಬಿಟ್ಟರು. ನನ್ನ ಅಮಾಯಕ ಮಕ್ಕಳು ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟು ಹೊರಬಂದಿದ್ದರು. ಆಗಲೂ ನಾನು ಏನು ಮಾಡಲಾಗದ ಸ್ಥಿತಿಯಲ್ಲಿದ್ದೆ. ಅನೇಕ ಮಕ್ಕಳು ನನ್ನ ಬಳಿ ಬಂದು ನಮ್ಮ ಮೇಲೆ ಸ್ವಾಮೀಜಿ ದೌರ್ಜನ್ಯವಿಸಗಿದ್ದಾರೆ ಎಂದು ಹೇಳಿಕೊಂಡಿದ್ದರು. ಆದರೆ ಈ ವಿಷಯವನ್ನು ನಾನು ಭಯದಿಂದ ಎಲ್ಲೂ ಹೇಳಿರಲಿಲ್ಲ".
ಒಡನಾಡಿ ಸಂಸ್ಥೆಗೆ ದೂರು ನೀಡಿದ್ದೆ
"ಮಠದಿಂದ ಹೊರಗೆ ಬಿದ್ದ ಮೇಲೆ ದಿಕ್ಕಿಲ್ಲದಂತಾದಾಗ ಕೆಲವು ಸಹೃದಯರ ನೆರವಿನೊಡನೆ ಸೇರಿಕೊಂಡೆ. ನಮಗೆ ನ್ಯಾಯ ಸಿಗಲಿ ಎನ್ನುವ ಉದ್ದೇಶದಿಂದ ಒಡನಾಡಿ ಸಂಸ್ಥೆಗೆ ಬಂದು ದೂರು ನೀಡಿರುವುದು ಕಾನೂನಿನ ಕಣ್ಣಿನಲ್ಲಿ ತಪ್ಪಾಗಿ ಕಾಣಿಸುತ್ತಿದೆ. ನಮ್ಮಂತಹವರಿಗೆ ಯಾರು ಸಹಾಯ ಮಾಡುತ್ತಾರೆ? ನಮ್ಮ ಮಾತನ್ನು ಯಾರು ಕೇಳುತ್ತಾರೆ? ಎಂದು ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ. ಕೊನೆಗೊಂದು ದಿನ ಬೇರೆ ಯಾವುದೋ ಮಕ್ಕಳ ಮೇಲಿನ ದೌರ್ಜನ್ಯ ಸಮಾಜಕ್ಕೆ ತಿಳಿಯಿತು. ಆಗ ಸ್ವಾಮೀಜಿಯ ಮೇಲೆ ಕಾನೂನು ಕ್ರಮ ಕೈಗೊಂಡಾಗ ಮಠದಿಂದ ಹೊರ ಬಿದ್ದ ಅದೆಷ್ಟೋ ಮಕ್ಕಳ ಪೈಕಿ ನನ್ನ ಇಬ್ಬರು ಮಕ್ಕಳು ಹಾಗೂ ನಾನು ಇದ್ದೆವು. ಅನ್ನ, ಆಹಾರ, ಆಸರೆ ಇಲ್ಲದಂತಾದಾಗ ಸತ್ಯವನ್ನು ಹೇಳಲು ಯಾರ ಸಹಾಯವನ್ನು ಪಡೆಯದೆ ಬರಬೇಕಿತ್ತು ಎಂದು ಅಧಿಕಾರಿಗಳು ಹಾಗೂ ಸಮಾಜ ಬಯಸುವುದು ಕ್ರೂರತನವಲ್ಲವೇ? ಇಂದು ನಾನು ನನ್ನ ಮಕ್ಕಳಿಗಾದ ಅನ್ಯಾಯದ ವಿರುದ್ಧ ದೂರು ನೀಡಿದ್ದೇನೆ. ಹಾಗೂ ನನಗೆ ಸತ್ಯ ಹೇಳಲು ಸಹಾಯ ಮಾಡಿರುವ ಕೆಲವು ಜನರ ಕರುಣೆ ಹಾಗೂ ಸಹಾನುಭೂತಿ ಶಿಕ್ಷೆಗೆ ಒಳಗಾಗುತ್ತಿದೆ".
ಸಂತ್ರಸ್ತೆ ಬಾಲಕಿ ತಾಯಿ ಅಳಲು
"ತನ್ನ ಹಾಗೂ ಮಕ್ಕಳ ಶೀಲವನ್ನು ಅಡವಿಟ್ಟು ಸುಳ್ಳು ಹೇಳಿ ದಕ್ಕಿಸಿಕೊಳ್ಳುವುದು ಬಡ ತಾಯಿ ಒಬ್ಬಳಿಗೆ ಸಾಧ್ಯವೇ? ಇದು ಸತ್ಯಕ್ಕೆ ಮಾಡಿರುವ ಅವಮಾನವಾಗಿದೆ. ಮಕ್ಕಳನ್ನು ರಕ್ಷಣೆಗೆ ಮಾಡಿರುವ ರಾಷ್ಟ್ರೀಯ ಕಾನೂನಿಗೆ ಅವಮಾನವಾಗಿದೆ. ಸತ್ಯ ಹೇಳಿರುವ ಕಾರಣಕ್ಕೆ ನನ್ನ ಹಾಗೂ ಸತ್ಯದ ಪರ ನಿಂತವರ ಮೇಲೆ ಕಾನೂನು ಜರುಗಿಸಿ ಅವಮಾನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಗಳ ಆಶಯದ ಘೋಷಣೆಯಾದ ಭೇಟಿ ಬಚಾವೋ ಬೇಟಿ ಪಡಾವೋ ಇವರುಗಳ ಕೈಯಲ್ಲಿ ನಗೆಪಾಟಲಾಗುತ್ತಿದೆ. ಪೊಲೀಸರ ಈ ನಡೆಯ ಮೂಲಕ ನೊಂದ ಮಕ್ಕಳ ಘನತೆಯನ್ನು ಮತ್ತಷ್ಟು ತಗ್ಗಿಸಿದ್ದಾರೆ. ಸ್ವಾಮೀಜಿಯಿಂದ ಯಾವ ಕೆಟ್ಟ ಕೃತ್ಯವು ನಡೆದಿಲ್ಲ. ಎಲ್ಲಾ ನಿಮ್ಮ ಮಕ್ಕಳ ಹಾಗೂ ನಿಮ್ಮ ಷಡ್ಯಂತ್ರ ಎಂದು ಕೆಲವು ಅಧಿಕಾರಿಗಳು ನಿರ್ಧಾರಕ್ಕೆ ಬಂದಂತಿದ್ದಾರೆ ಅಸಮಾಧಾನ," ವ್ಯಕ್ತಪಡಿಸಿದ್ದಾರೆ.
ಬಡವರು ನ್ಯಾಯ ಕೇಳುವುದೇ ತಪ್ಪಾ?
"ನಮ್ಮಂತಹ ಬಡ ಹೆಣ್ಣು ಮಕ್ಕಳು ನ್ಯಾಯ ಕೇಳಲು ಹೊರಬರಬಾರದು. ಬಂದರೆ ಹೇಳುತೀರದ ನೋವು ಹಾಗೂ ಭಯವನ್ನು ಅನುಭವಿಸುತ್ತಾ ಕತ್ತಲಲ್ಲೇ ಕೊಳೆಯಬೇಕಾಗಿದೆ. ಮಕ್ಕಳನ್ನು ರಕ್ಷಿಸಿ ಅವರನ್ನು ಶಾಲೆಗೆ ಕಳುಹಿಸುವುದು ತಪ್ಪಾಗಿ ಕಾಣಿಸುತ್ತಿದೆ. ಈ ದೇಶದ ಲಕ್ಷಾಂತರ ನೊಂದ ಹೆಣ್ಣು ಮಕ್ಕಳ ಪರವಾಗಿ ನಮ್ಮ ದೇಶದ ತಾಯಿಯಾದ ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ನನ್ನ ಈ ಮನವಿಯನ್ನು ತುರ್ತಾಗಿ ಪರಿಗಣಿಸಿ, ನನಗೂ ಹಾಗೂ ನನ್ನ ಮಕ್ಕಳಿಗೂ ನ್ಯಾಯ ನೀಡುವುದರ ಮೂಲಕ ಘನತೆಯ ಬಾಳನ್ನು ನಿರ್ಮಿಸಿ ಕೊಡಿ ಎಂದು ಪ್ರಾರ್ಥಿಸುತ್ತೇನೆ. ಇಲ್ಲವಾದರೆ ಈ ನರಕದಿಂದ ಮುಕ್ತರಾಗಲು ದಯಾ ಮರಣವನ್ನಾದರೂ ಕೊಡಬೇಕು," ಎಂದು ಕೇಳಿಕೊಳ್ಳುತ್ತೇನೆ.
ಸಂತ್ರಸ್ತೆ ಬಾಲಕಿ ತಾಯಿಯಿಂದ ಪತ್ರ
ಒಬ್ಬ ತಾಯಿಯ ಒಡಲ ಉರಿಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಘನತೆವೆತ್ತ ರಾಷ್ಟ್ರಪತಿಗಳಾದ ತಮಗೆ ನೋವನ್ನುಂಟು ಮಾಡಲಿಕ್ಕಾಗಲಿ, ಅಗೌರವ ಸೂಚಿಸುವುದಕ್ಕಾಗಲಿ ಅಲ್ಲವೆಂದು ಕೈಮುಗಿದು ಹೇಳುತ್ತೇನೆ. ಕರುಣಾಮಯಿ ಹಾಗೂ ತಾಯಿತನ ಉಳ್ಳ ರಾಷ್ಟ್ರಪತಿಗಳಾದ ತಾವು ಈ ಹೆಣ್ಣು ಮಕ್ಕಳ ನೋವನ್ನು ಅರಿಯಬೇಕಾಗಿದೆ. ಈ ಮೂಲಕ ನಮಗೆ ರಕ್ಷಣೆ ಹಾಗೂ ನ್ಯಾಯವನ್ನು ದೊರಕಿಸಿ ಕೊಡಬೇಕೆಂದು ಕೈಮುಗಿದು ಕೇಳಿಕೊಳ್ಳುತ್ತೇನೆ ಅಂತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.