ಬಿಜೆಪಿ ಮುಖಂಡರೊಬ್ಬರ ಕಲ್ಯಾಣ ಮಂಟಪದಲ್ಲಿ ದಿನಸಿ ಕಿಟ್; ಚರ್ಚೆಗೆ ಗ್ರಾಸವಾದ ಸಂಗತಿ
ಮೈಸೂರು, ಜುಲೈ 23: ಕೊರೊನಾ ಸೋಂಕಿನ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಜುಬಿಲಿಯಂಟ್ ಕಾರ್ಖಾನೆ ನೀಡಿದ್ದ ದಿನಸಿ ಕಿಟ್ ಗಳು ಬಿಜೆಪಿ ಮುಖಂಡರೊಬ್ಬರ ಕಲ್ಯಾಣ ಮಂಟಪದಲ್ಲಿ ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
Recommended Video
ಜುಬಿಲಿಯಂಟ್ ಕಾರ್ಖಾನೆಯಿಂದಾಗಿ ನಂಜನಗೂಡು ಕೊರೊನಾ ಹಾಟ್ ಸ್ಪಾಟ್ ಆಗಿತ್ತು. ಈ ಕಾರ್ಖಾನೆ ಮುಚ್ಚಿಸುವ ಸಂಬಂಧ ಸಾಕಷ್ಟು ಚರ್ಚೆಗಳಾಗಿದ್ದವು. ಈ ನಡುವೆ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ 50,000 ದಿನಸಿ ಕಿಟ್ ನೀಡುವ ಬಗ್ಗೆ ಕಾರ್ಖಾನೆ ಮತ್ತು ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ನಡುವೆ ಒಪ್ಪಂದವಾಗಿತ್ತು.
ಮೈಸೂರಲ್ಲಿ ಡೆತ್ ರೇಟ್ ಜಾಸ್ತಿ ಇರುವೆಡೆ ಹೆಚ್ಚಿನ ನಿರ್ಬಂಧ: ಜಿಲ್ಲಾಧಿಕಾರಿ
ಒಪ್ಪಂದದಂತೆ ಕಾರ್ಖಾನೆಯಿಂದ ದಿನಸಿ ಕಿಟ್ ಗಳನ್ನು ನೀಡಿದ್ದರೂ, ಆ ಕಿಟ್ ಗಳು ಬಡ ಜನರಿಗೆ ತಲುಪಿಲ್ಲ. ಬದಲಾಗಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀನಿವಾಸರೆಡ್ಡಿ ಅವರ ಕಲ್ಯಾಣ ಮಂಟಪದಲ್ಲಿ ಪತ್ತೆಯಾಗಿವೆ. ಕಿಟ್ ಗಳನ್ನು ಜನರಿಗೆ ನೀಡದೇ ಕಲ್ಯಾಣ ಮಂಟಪದಲ್ಲಿ ಇಟ್ಟಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಲ್ಯಾಣ ಮಂಟಪದಲ್ಲಿ ಆಹಾರ ಕಿಟ್ ಗಳು ಪತ್ತೆಯಾದ ವಿಷಯಕ್ಕೆ ಪ್ರತಿಕ್ರಿಯೆ ನೀಡಿರುವ ನಂಜನಗೂಡು ಶಾಸಕ ಹರ್ಷವರ್ಧನ್, "ನಾನೇ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಿಟ್ ಗಳನ್ನು ಇರಿಸಿದ್ದೇನೆ. ಆಹಾರ ಕಿಟ್ ಗಳು ದುರುಪಯೋಗ ಆಗಿಲ್ಲ. ಸರ್ಕಾರಿ ಕಟ್ಟಡದಲ್ಲಿ ಸಂಗ್ರಹಿಸಿದರೆ ದುರುಪಯೋಗ ಆಗುವ ಸಾಧ್ಯತೆ ಇದೆ. ಹೀಗಾಗಿ ಕಲ್ಯಾಣ ಮಂಟಪದಲ್ಲಿ ಇಟ್ಟು ಅಲ್ಲಿಂದ ವಿತರಣೆ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ನಂಜನಗೂಡು ಕ್ಷೇತ್ರದಲ್ಲಿ 228 ಬೂತ್ ಗಳಿದ್ದು, ಪ್ರತಿ ಬೂತ್ ಗೆ 200 ಕಿಟ್ ಗಳ ವಿತರಣೆ ಆಗುತ್ತಿದೆ" ಎಂದಿದ್ದಾರೆ.
ಮೈಸೂರಿನಲ್ಲಿ ಸಾವಿರದ ಗಡಿ ದಾಟಿದ ಸಕ್ರಿಯ ಸೋಂಕಿನ ಪ್ರಕರಣ
"ಈಗಾಗಲೇ ಎರಡು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ವಿತರಣೆ ಮುಗಿದಿದೆ. ಒಟ್ಟು 50 ಸಾವಿರ ಕಿಟ್ ಗಳು ದೊರಕಿದ್ದವು. ಈ ಪೈಕಿ 5 ಸಾವಿರ ಕಿಟ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಆಶಾ ಕಾರ್ಯಕರ್ತೆಯರಿಗೆ ನೀಡಿದ್ದೇನೆ. ಇನ್ನುಳಿದ ಕಿಟ್ ಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡುತ್ತೇವೆ. ಇದರ ಹೊರತಾಗಿ ಇದರಲ್ಲಿ ಯಾವುದೇ ದುರುಪಯೋಗ ಆಗಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.