ಮೈಸೂರಲ್ಲಿ ಡೆತ್ ರೇಟ್ ಜಾಸ್ತಿ ಇರುವೆಡೆ ಹೆಚ್ಚಿನ ನಿರ್ಬಂಧ: ಜಿಲ್ಲಾಧಿಕಾರಿ
ಮೈಸೂರು, ಜುಲೈ 22: ಸಾವಿನ ಸಂಖ್ಯೆ ಜಾಸ್ತಿ ಇರುವ ಕಡೆ ಮಾತ್ರ ಹೆಚ್ಚಿನ ನಿರ್ಬಂಧ ವಿಧಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸ್ಪಷ್ಟಪಡಿಸಿದ್ದಾರೆ.
Recommended Video
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ ಅವರು, ಸಾವಿನ ಸಂಖ್ಯೆ ಜಾಸ್ತಿ ಆಗಿದ್ದರಿಂದ ಪಾರ್ಷಿಯಲ್ ಲಾಕ್ ಡೌನ್ ಮಾಡಲಾಗಿತ್ತು. ಮೃತರ ಮನೆ ಸುತ್ತ ಸೀಲ್ ಡೌನ್ ಮಾಡಿ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆ ಮಾಡಿಸಲು ಸಾರ್ವಜನಿಕರು ಅಸಹಕಾರ ನೀಡುತ್ತಿದ್ದರು. ಹಾಗಾಗಿ ಈ ಆದೇಶ ಮಾಡಲಾಗಿತ್ತು ಎಂದು ತಿಳಿಸಿದರು.
ಪಾರ್ಷಿಯಲ್ ಲಾಕ್ ಡೌನ್ ವೇಳೆ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಇರಲಿಲ್ಲ. ಅನಗತ್ಯ ಓಡಾಟಕ್ಕೆ ಮಾತ್ರ ಬ್ರೇಕ್ ಹಾಕಲಾಗಿತ್ತು. ಆದರೆ ಈಗ ಜನರ ಓಡಾಟಕ್ಕೆ ಯಾವುದೇ ತೊಂದರೆ ಇಲ್ಲ. ಡೆತ್ ರೇಟ್ ಇರುವ ಕಡೆ ಮಾತ್ರ ಹೆಚ್ಚಿನ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಜಿಲ್ಲಾಡಳಿತದ ಆದೇಶದಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದುವರೆಗೆ 550 ಕ್ಕೂ ಹೆಚ್ಚು ಆಂಟಿಜನ್ ಟೆಸ್ಟ್ ಕಿಟ್ ಮೂಲಕ ಪರೀಕ್ಷೆ ಮಾಡಲಾಗಿದೆ. 115 ಪಾಸಿಟಿವ್ ಬಂದಿವೆ. ಇದು ಒಂದಷ್ಟು ಜನರ ಪ್ರಾಣ ಉಳಿಸಲು ಸಹಕಾರಿ ಆಗಿದೆ. ಗ್ರಾಮೀಣ ಭಾಗದಲ್ಲೂ ಟೆಸ್ಟ್ ಮಾಡುವ ಅವಶ್ಯಕತೆ ಇದೆ. ಹೀಗಾಗಿ 10 ಸಾವಿರ ಆಂಟಿಜನ್ ಕಿಟ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಬಹುಶಃ ಇಂದು ಸಿಗಬಹುದು. ಈ ರೀತಿ ಶೀಘ್ರ ಪಾಸಿಟಿವ್ ಪ್ರಕರಣ ಗುರುತಿಸುವುದರಿಂದ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಕೆ ಟೈಯರ್ಸ್ ಕಾರ್ಖಾನೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಾರ್ಖಾನೆಯವರಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಇಂಡಸ್ಟ್ರೀಸ್ ಅವರಿಗೆ ಮೆಡಿಕಲ್ ಇನ್ಶೂರೆನ್ಸ್ ಇರುತ್ತೆ. ಹಾಗಾಗಿ ಅವರೇ ಕೋವಿಡ್ ಕೇರ್ ಸೆಂಟರ್ ತೆರೆದು ಚಿಕಿತ್ಸೆ ನೀಡುವಂತೆ ತಿಳಿಸಿದ್ದೇವೆ.
ಸರ್ಕಾರ ಎಲ್ಲವನ್ನೂ ಮಾಡಲು ಆಗಲ್ಲ. ಆದ್ದರಿಂದ ಅವರು ಖಾಸಗಿ ಆಸ್ಪತ್ರೆ ಜೊತೆ ಟೈಅಪ್ ಮಾಡ್ಕೊಂಡಿದ್ದಾರೆ. ಶಂಕಿತರಿಗೆ ಟೆಸ್ಟ್ ಮಾಡಿಸಲಾಗುತ್ತಿದೆ. ಅದರ ಮಾಹಿತಿ ಜಿಲ್ಲಾಡಳಿತಕ್ಕೆ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದರು.












Click it and Unblock the Notifications